ಸಗರನಾಡು ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ-ಪ್ರಕಾಶಕುಮಾರ
ಸಗರನಾಡು ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ-ಪ್ರಕಾಶಕುಮಾರ
ಶಹಾಪುರ: ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಯ ಜೊತೆಗೆ ಸಮೃದ್ಧವಾಗಿ ನೀರಾವರಿ ಪ್ರದೇಶ ಆಗಿದ್ದರಿಂದ ಇಲ್ಲಿನ ರೈತರಿಗೆ ಸಗರನಾಡು ಪ್ರದೇಶ ಕೃಷಿಕ್ಷೇತ್ರಕ್ಕೆ ವರದಾನವಾಗಿದೆ. ಈ ಭಾಗದ ಫಲವತ್ತತೆ ಮಣ್ಣು ಕೃಷಿ ಕಾರ್ಯ ಜೊತೆಗೆ ರೈತರು ತುಸು ಶ್ರಮವಹಿಸಿ ಹೈನುಗಾರಿಕೆ ಕಡೆ ಮುಖ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶಕುಮಾರ ತಿಳಿಸಿದರು.
ನಗರ ಸಮೀಪದ ದೋರನಹಳ್ಳಿ ಮಾರ್ಗದಲ್ಲಿರುವ ಹಾಲು ಶೀಥಲಿಕರಣ ಕೇಂದ್ರಕ್ಕೆ ಶುಕ್ರವಾರ ಅವರು ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕವು ಹೈನುಗಾರಿಕೆಯಲ್ಲಿ ತೀವ್ರವಾಗಿ ಹಿಂದುಳಿದಿದೆ. ಅದರಲ್ಲೂ ಸಗರನಾಡು ಭಾಗ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೀರಾವರಿ ಭಾಗ್ಯವಿಲ್ಲ ಆದರೂ ಪ್ರತಿ ದಿನ 20 ಲಕ್ಷ ಹಾಲು ಉತ್ಪಾದಿಸುತ್ತಾರೆ. ಆದರೆ ಯಾದಗಿರಿ, ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ದಿನಕ್ಕೆ ಕೇವಲ 40 ಸಾವಿರ ಲೀಟರ್ ಹಾಲು ಉತ್ಪಾದಿಸುತ್ತಾರೆ. ಮೂರು ಜಿಲ್ಲೆಗೆ ದಿನಾಲು 70 ಸಾವಿರ ಲೀಟರ್ ಬೇಕು. ಹೀಗಾಗಿ ಶಿವಮೊಗ್ಗಾ ಜಿಲ್ಲೆಯಿಂದ 30 ಸಾವಿರ ಲೀಟರ್ ಹಾಲು ತರಿಸಿಕೊಳ್ಳಲಾಗುತ್ತಿದೆ ಎಂದರು.
ರೈತರು ಜಾಗೃತರಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರ ಸಂಘವನ್ನು ರಚಿಸಿ. ಒಕ್ಕೂಟದಿಂದ ಸಕಲ ವ್ಯವಸ್ಥೆ ಮಾರ್ಗದರ್ಶನ ನೀಡಲಾಗುವುದು. ರೈತರಲ್ಲಿ ಹಾಲು ಉತ್ಪಾದನೆ ಕುರಿತು ಅರಿವು ಮೂಡಿಸಬೇಕು. ಧನಾತ್ಮಕ ಚಿಂತನೆ ಕಡೆ ರೈತರ ಗಮನಸೆಳೆಯಬೇಕು. ರೈತರು ಒಗ್ಗೂಡಿದರೆ ಉತ್ಪಾದನೆ ಘಟಕ ಸ್ಥಾಪಿಸಲು ಸಿದ್ಧ ಎಂಬ ಭರವಸೆಯನ್ನು ಇತ್ತರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಯಲ್ಲಯ್ಯ ನಾಯಕ ವನದುರ್ಗ, ಅಡಿವೆಪ್ಪ ಜಾಕಾ, ಗೌಡಪ್ಪಗೌಡ ಆಲ್ದಾಳ, ಶ್ರೀಧರರಡ್ಡಿ ಹೋತಪೇಟ, ಚೆನ್ನಯ್ಯಸ್ವಾಮಿ, ಹಣಮಂತ ಟೊಕಾಪುರ, ಹುಸೇನ ಭಾಷಾ, ಮಲ್ಲಿಕಾರ್ಜುನ ಸಜ್ಜನ ಇದ್ದರು.