ಸಂತ್ರಸ್ಥರ ಸಂಕಷ್ಟಕ್ಕೆ ನೆರವಾಗದ ಬಿಜೆಪಿ ಸಿದ್ರಾಮಯ್ಯ ಆರೋಪ
ಜೇವರ್ಗಿಃ ನೆರೆ ಹಾವಳಿ ಪ್ರದೇಶಕ್ಕೆ ಸಿದ್ರಾಮಯ್ಯ ಭೇಟಿ
ಕಲಬುರ್ಗಿಃ ನಿರಂತರ ಧಾರಕಾರವಾಗಿ ಸುರಿದ ಮಳೆ ಹಾಗೂ ಮಹಾರಾಷ್ಟ್ರ ದಿಂದ ಭೀಮಾನದಿಗೆ ಹರಿಬಿಟ್ಟ ಅಪಾರ ಪ್ರಮಾಣದ ನೀರಿನಿಂದಾಗಿ ಜನರು ಮನೆ, ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಪಾರ ಬೆಳೆ ಹಾನಿಯಾಗಿದೆ. ಕೂಡಲೆ ಬೆಳೆ ಹಾನಿ ಪರಿಹಾರ ಒದಗಿಸಬೇಕೆಂದು ವಿಪಕ್ಷ ನಾಯಕ ಸಿದ್ರಾಮಯ್ಯ ಆಗ್ರಹಿಸಿದರು.
ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಕೋನ ಹಿಪ್ಪರಗಾ ಬ್ರಿಡ್ಡ್, ಕಟ್ಟಿ ಸಂಗಾವಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಮಳೆ ಸುರಿದ ಪರಿಣಾಮ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಜನರು ಬದುಕು ಬರ್ಬಾದ್ ಆಗಿದೆ. ನಿತ್ಯ ಊಟಕ್ಕೂ ಮುಂದಿನ ಭವಿಷ್ಯದ ಚಿಂತೆಯಲ್ಲಿದ್ದಾರೆ.
ಆದರೆ ಸರ್ಕಾರ ಮಾತ್ರ ಬಾಯಿ ಮಾತಿನಲ್ಲಿ ಪರಿಹಾರ ನೀಡುತ್ತಿದ್ದಾರೆ ಹೊರತು ಜನರ ಕಣ್ಣೀರು ಒರೆಸುತ್ತಿಲ್ಲ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದರೆ, ಇಲ್ಲಿನ ಪರಿಸ್ಥಿತಿ ಬದಲಾಗುತ್ತದೆಯೇ.? ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ನೀಡದ ಸರ್ಕಾರ ಹೆಸರು ಬದಲಾಯಿಸಿ ಜಂಬಕೊಚ್ಚಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಸಂತ್ರಸ್ಥರ ಅಳಲು ಆಲಿಸಿದ ಸಿದ್ರಾಮಯ್ಯ ಶೀಘ್ರದಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡುವುದಾಗಿ ಧೈರ್ಯ ತುಂಬಿದರು. ಈ ಸಂರ್ಭದಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಸೇರಿದಂತೆ ಇತರರಿದ್ದರು.




