ಮುದನೂರಿನ ತವನಿಧಿ ಜೇಡರ ದಾಸಿಮಯ್ಯರ ಸ್ಥಳ ಪುರಾಣ
ಮುದನೂರಿನ ತವನಿಧಿ ಜೇಡರ ದಾಸಿಮಯ್ಯ
ಸುರಪುರದಿಂದ ವಾಯುವ್ಯಕ್ಕೆ ಸುಮಾರು 40 ಕಿ.ಮೀ. ಅಂತರದಲ್ಲಿರುವ ಪ್ರಸಿದ್ಧ ಕ್ಷೇತ್ರವೇ ಮುದನೂರು. ಇದು ಶರಣರ ನೆಲೆ. ಐತಿಹಾಸಿಕ ಪರಂಪರೆಯ ದೇಗುಲಗಳು, ಶಿಲ್ಪಗಳು, ಶಾಸನಗಳು ಪ್ರವಾಸಿಗರಿಗೆ, ಸಂಶೋಧನಾರ್ಥಿಗಳಿಗೆ ತನ್ನತ್ತ ಸೆಳೆಯುತ್ತದೆ. ಕನ್ನಡ ನಾಡಿನಲ್ಲಿ 12 ನೇ ಶತಮಾನದಲ್ಲಿ ನಡೆದ ಶರಣ ಚಳುವಳಿಯು ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿತು. ಕಲ್ಯಾಣ ನಾಡಿನಲ್ಲಿದ್ದ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಪಟವೆಂಬ ಸಂಸತ್ತಿನಲ್ಲಿ ಜರುಗುತ್ತಿದ್ದ ಚರ್ಚೆಗಳು, ಪಾಲ್ಗೊಳ್ಳುತ್ತಿದ್ದ ಶರಣರು, ಅವರು ರಚಿಸಿದ ವಚನಗಳು, ಹೊಸ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವು. ಮೇಲು ಕೀಳು, ಜಾತಿ- ಮತ, ಬಡವ ಬಲ್ಲಿದರೆಂಬ ಹಮ್ಮುಬಿಮ್ಮುಗಳಿಲ್ಲದೆ ಪಾಲ್ಗೊಳ್ಳುತ್ತಿದ್ದ ಅನುಭವ ಮಂಟಪವನ್ನು ದೇಶದ ಮೊದಲ ಸಂಸತ್ತು ಎಂದು ಕರೆಯುವರು. ಇಂತಹ ಹಲವು ಕ್ರಾಂತಿಕಾರಕ ಚರ್ಚೆಗಳಾಗುತ್ತಿದ್ದ ಕಾಲದಲ್ಲಿದ್ದ ಬಸವಾದಿ ಶರಣರಿಗೂ ಪೂರ್ವದಲ್ಲೇ ಅಂದರೆ ಅರ್ಧಶತಮಾನದಷ್ಟು ಪೂರ್ವದಲ್ಲಿ ಸಗರನಾಡಿನಲ್ಲಿ ಜನ್ಮತಳೆದಿದ್ದ ಅನರ್ಘ್ಯ ರತ್ನವೇ ದಾಸಿಮಯ್ಯ.
ಬಸವಪೂರ್ವ ಯುಗದ ಆದ್ಯವಚನಕಾರ ಜೇಡರ ದಾಸಿಮಯ್ಯನವರ ಪುಣ್ಯಕ್ಷೇತ್ರವೇ ಮುದನೂರು. ಸುಮಾರು 10 ನೇ ಶತಮಾನದ ಅಂತ್ಯ ಭಾಗದಲ್ಲಿ ಅಥವಾ ಹನ್ನೊಂದನೆಯ ಶತಮಾನದ ಆದಿಬಾಗದಲ್ಲಿ ಶಿವಭಕ್ತ ಸಂಪನ್ನರಾದ ಶಂಕರೀ-ರಾಮಯ್ಯ ಎಂಬ ದಂಪತಿಗಳಿಗೆ ಮಗನಾಗಿ ಜನ್ಮಿಸುತ್ತಾರೆ.
ದಾಸಿಮಯ್ಯನ ಕಾಲದ ವಿಚಾರವಾಗಿ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ತನ್ನ ಬಾಲ್ಯ ಮತ್ತು ಶಿಕ್ಷಣವನ್ನು ಮುದನೂರಿನಲ್ಲೆ ಕಳೆದನು.
ಪ್ರೌಢಾವಸ್ಥೆಗೆ ಬಂದ ಮೇಲೆ ತನಗೆ ಶಿವಭಕ್ತಿ ಸಂಪನ್ನಳಾದ ಸದ್ಗೃಹಣಿಯನ್ನು ಗೊಬ್ಬೂರು ಗ್ರಾಮದಲ್ಲಿದ್ದ ದುಗ್ಗಳೆಯನ್ನು ವರಿಸುತ್ತಾರೆ. ಮಲ್ಲಿನಾಥ -ಮಹಾದೇವಿಯರ ಮಗಳಾದ ದುಗ್ಗಳೆ ಕೂಡ ಪರಮ ಶಿವಭಕ್ತಳು. ಗುರುಲಿಂಗ ಜಂಗಮರ ದಾಸೋಹವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು.
ಒಂದು ಸಲ ದಾಸಿಮಯ್ಯನು ತಾನು ನೇಯ್ದ ವಸ್ತ್ರವನ್ನು ಜಂಗಮವೇಷದಲ್ಲಿ ಬಂದ ಶಿವನು ಬೇಡಿದಾಗ ಮರುಮಾತಿಲ್ಲದೆ ಕೊಟ್ಟನು. ಶಿವ ಸ್ವರೂಪಿ ಜಂಗಮನು ಆ ಬಟ್ಟೆಯನ್ನು ತುಂಡು ತುಂಡು ಮಾಡಿ ಒಗೆದನೆಂದೂ ಅದರಿಂದ ಕೊಂಚವೂ ಬೇಸರಿಸದೆ ಇದ್ದಾಗ ಅವನ ನಿಷ್ಠೆಗೆ ಶಿವ ಮೆಚ್ಚಿ ತವನಿಧಿಯನ್ನು ಕರುಣಿಸಿ ನಿತ್ಯದಾಸೋಹ ಕೈಗೊಳ್ಳಲು ತಿಳಿಸುತ್ತಾನೆ ಎಂಬಂತಹ ಹಲವಾರು ಪವಾಡಗಳನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ನೇಕಾರಿಕೆ ವೃತ್ತಿಯನ್ನು ಮಾಡುತ್ತಿದ್ದ ದಂಪತಿಗಳು ಶಿವನು ಕರುಣಿಸಿದ್ದ ತವನಿಧಿಯಿಂದ ದಾಸೋಹ ನಡೆಸುತ್ತಿದ್ದರು.
ಆದ್ಯ ವಚನಕಾರರೆನಿಸಿದ್ದ ದಾಸಿಮಯ್ಯನು ತನ್ನ ವಚನಗಳ ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದ ಶ್ರೇಷ್ಠನೆನಿಸಿಕೊಳ್ಳುತ್ತಾನೆ.
ಹೊಲೆಯರ ಬಾವಿಯಲ್ಲೊಂದು ಎಲುನಟ್ಟಿದ್ದಡೆ
ಹೊಲೆಯೆಂಬುದು ಲೋಕವೆಲ್ಲ
ಹಲವೆನುವಿದ್ಧಬಾಯಿ ಒಲವರವ ನುಡಿದಡೆ
ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥ! ಎಂಬ ವಚನದಲ್ಲಿ ಅಸ್ಪೃಶ್ಯತೆಯನ್ನು ಕುರಿತು ತಿಳಿಸಿದ್ದಾನೆ. ಅಂದರೆ ಅಸ್ಪೃಶ್ಯರಿಗೆ ಪ್ರತ್ಯೇಕ ನೀರಿನ ಬಾವಿಗಳಿದ್ದವು. ಅವರು ಮೇಲ್ವರ್ಗದ ಜನರ ಬಾವಿಗಳನ್ನು ಬಳಸುವಂತಿರಲಿಲ್ಲ. ಅಸ್ಪೃಶ್ಯರ ಬಾವಿಯನ್ನು ಗುರುತಿಸಲು ಬಾವಿಯ ಮೇಲೊಂದು ಎಲುವನ್ನು ಜೋತುಬಿಡುತ್ತಿದ್ದರು. ಹೀಗೆ ಆ ಎಲುವನ್ನು ನೋಡಿ ಇದು ಅಸ್ಪೃಶ್ಯರ ಬಾವಿ ಎಂದು ನಿರ್ಧರಿಸುತ್ತಿದ್ದರು. ಮನುಷ್ಯರಲ್ಲಿ ಈ ರೀತಿ ಜಾತಿ,ವರ್ಗ,ವರ್ಣ ಭೇದ ಮಾಡುವದು ಖಂಡನೀಯ ಎನ್ನುವುದನ್ನು ಎತ್ತಿ ತೋರಲು ಮೇಲು ಜಾತಿಯವರ ಬಾಯಲ್ಲಿ ಹಲವು ಎಲವು ಕಾಣುತ್ತವೆಯಲ್ಲಾ ಅವರು ಹೊಲೆಯರಲ್ಲವೆ? ಎಂದು ವಿಡಂಬನೆ ಮಾಡುತ್ತಾನೆ. ಮನುಷ್ಯ ಮನುಷ್ಯರಲ್ಲಿ ಮೇಲು ಕೀಳು ಭಾವ ಸರಿಯಲ್ಲವೆಂದು ಹೇಳಿ ಮಡಿವಂತರನ್ನು ಹೀಯಾಳಿಸುವಂತಹ ಈ ಸಾಮಾಜಿಕ ಕಳಕಳಿಯನ್ನು ಬಸವಣ್ಣನವರಿಗಿಂತ ಮುಂಚೆಯೇ ತೋರಿಸಿದ್ದರು ಎಂಬುದಕ್ಕೆ ಈ ವಚನವೇ ನಿದರ್ಶನ.
ದಾಸಿಮಯ್ಯನು “ರಾಮನಾಥ” ಎಂಬ ಅಂಕಿತದಿಂದ ಸುಮಾರು 100 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಈತನ ಮಡದಿ ದುಗ್ಗಳೆಯು ಕೂಡ ಹಲವು ವಚನಗಳನ್ನು ಬರೆದಿದ್ದಾಳೆ,. ಮುದನೂರು ಗ್ರಾಮ ಒಂದರಲ್ಲೇ ದಂಪತಿಗಳೀರ್ವರೂ ವಚನಕಾರರಾಗಿದ್ದರೆಂಬುದು ನಮ್ಮ ಸಗರನಾಡಿನ ಹೆಮ್ಮ.
ಮುದನೂರು ಕೇವಲ ಈರ್ವರು ಶರಣರಿಂದಷ್ಟೇ ಅಲ್ಲದೆ ಐತಿಹಾಸಿಕವಾಗಿಯೂ ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿ ಸುಮಾರು 21 ಶಾಸನಗಳು ಲಭ್ಯವಾಗಿದ್ದು, ಇದು ಒಂದು ಅಗ್ರಹಾರವಾಗಿತ್ತೆಂದು ತಿಳಿದುಬರುತ್ತದೆ.
ರಾಮತೀರ್ಥ, ಲಕ್ಷ್ಮಣತೀರ್ಥ, ಸಂಗಮ ತೀರ್ಥ, ಪಾಂಡು ತೀರ್ಥ, ಮರಳು ತೀರ್ಥ, ಸಕ್ಕರೆ ತೀರ್ಥ, ಹಾಲು ತೀರ್ಥಗಳೆಂಬ ಸಪ್ತ ತೀರ್ಥಗಳ ನೆಲೆ ಇದಾಗಿದೆ.
ಸದಾ ಕಾಲ ಓತಪ್ರೋತವಾಗಿ ಚಿಮ್ಮುವ ಸ್ವಾಭಾವಿಕ ಜಲಬುಗ್ಗೆಗಳಿರುವುದರಿಂದ ಇಲ್ಲಿನ ಪುಷ್ಕರಣಿಗಳು ಯಾವತ್ತೂ ಖಾಲಿಯಾಗಿಲ್ಲ. ಹೀಗಾಗಿ ಇಲ್ಲಿ ಆದಿಮಾನವರು ನೆಲೆಸಿದ್ದರೆಂಬುದನ್ನು ವಿದ್ವಾಂಸರು ಖಚಿತಪಡಿಸಿದ್ದಾರೆ. ಎಳಮೇಲ(ಆಲಮೇಲ) ಸಿಂಹಪರ್ಷೆಯ ಅಭಿನವ ಪಾಶುಪತ ಸಂಪ್ರದಾಯದ ಮೂಲ ಪುರುಷನಾದ ಮಲಯಾಳ ಪಂಡಿತನು ಮುದನೂರಿನವನೆಂದು ತಿಳಿದುಬರುತ್ತದೆ.
ಹಿರೇಮುದನೂರಿನಲ್ಲಿರುವ ರಾಮೇಶ್ವರ ದೇಗುಲವು ದ್ವಿಕೂಟವಾಗಿದ್ದು, ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ಗರ್ಭಗೃಹ ಹಾಗೂ ತೆರೆದ ಅಂತರಾಳಗಳನ್ನು ಹೊಂದಿದೆ. ಇವುಗಳನ್ನು ಒಂದೇ ನವರಂಗ ಒಂದಾಗಿಸಿದೆ. ನವರಂಗಕ್ಕೆ ಎರಡೂ ಬದಿಯಿಂದ ಪ್ರವೇಶದ್ವಾರವಿದೆ. ಪೂರ್ವಕ್ಕಿರುವ ಗರ್ಭಗೃಹದಲ್ಲಿ ರಾಮೇಶ್ವರ ಲಿಂಗವಿದ್ದು, ಇದರ ಬಾಗಿಲವಾಡವು ಪಂಚಶಾಖೆಯನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಬಿಂಬವಿದೆ. ಪಶ್ಚಿಮಕ್ಕಿರುವ ಗರ್ಭಗೃಹದಲ್ಲಿ ಉಮಾಮಹೇಶ್ವರರ ಶಿಲ್ಪವಿದೆ. ಅಂತರಾಳದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಶಿಲ್ಪಗಳುಳ್ಳ ಮಕರ ತೋರಣವಿದೆ. ನವರಂಗದಲ್ಲಿ ಗಣಪತಿ ಹಾಗೂ ಉಮಾಮಹೇಶ್ವರ ಶಿಲ್ಪವಿದೆ. ಪ್ರವೇಶದ್ವಾರದ ಬಾಗಿಲವಾಡವು ತ್ರಿಶಾಖಾಲಂಕಾರವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಇದೆ.
ರಾಮೇಶ್ವರ ದೇಗುಲದ ಅಕ್ಕಪಕ್ಕದಲ್ಲ್ಕಿ ರಾಮತೀರ್ಥ ಹಾಗೂ ಪಾಂಡುತೀರ್ಥಗಳಿದ್ದು, ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪಗಳನ್ನು ಕೆತ್ತಲಾಗಿದೆ. ಇಲ್ಲಿನ ಸಿದ್ಧಲಿಂಗ ಗುಡಿಯು ಗರ್ಭಗೃಹ, ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದು, ಗರ್ಭಗೃಹ ಹಾಗೂ ನವರಂಗದ ಬಾಗಿಲವಾಡಗಳು ಕ್ರಮವಾಗಿ ನಾಲ್ಕು-ಐದು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ.
ಚಿಕ್ಕಮುದನೂರಿನಲ್ಲಿ ಮಲ್ಲಿಕಾರ್ಜುನ ದೇಗುಲವು ದ್ವಿಕೂಟವಾಗಿದ್ದು, ನಂತರದಲ್ಲಿ ತ್ರಿಕೂಟವಾಗಿ ಪರಿವರ್ತನೆಗೊಳಿಸಿದ್ದಾರೆ. ಹಾಗೂ ಇಲ್ಲಿ ಸಪ್ತ ಮಾತೃಕಾ ಪಟ್ಟಿಕೆಯೊಂದು ಇದೆ. ದೇಗುಲದ ಕಂಬ, ಬಾಗಿಲವಾಡಗಳು ಸುಂದರ ಕೆತ್ತನೆಗಳಿಂದ ಕೂಡಿದೆ.
Sans hosanna at mama laxanavulla lekhana sir
Super
Super
Super goudre
Best
Thank you……Basanagouda patil