ಸರ್ಕಾರಿ ಸೌಲಭ್ಯಗಳು ಗ್ರಾಮೀಣ ರೈತರಿಗೆ ವರದಾನ-ಡಿಸಿ ಮಂಜುನಾಥ
ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಅಭಿಯಾನಕ್ಕೆ ಚಾಲನೆ
ಮಣ್ಣು ಆರೋಗ್ಯ ಚೀಟಿ, ತೆಂಗಿನ ಸಸಿ ವಿತರಣೆ
ಯಾದಗಿರಿ, ಶಹಾಪುರಃ ಸರ್ಕಾರಿ ಸೌಲಭ್ಯಗಳು ಬಳಸಿಕೊಂಡು ಗ್ರಾಮೀಣ ಭಾಗದ ರೈತಾಪಿ ಜನರು ಅಭಿವೃದ್ಧಿ ಹೊಂದಬೇಕು. ಸಮರ್ಪಕ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದುಕೊಂಡು ಅರ್ಹರು ಯೋಜನೆಯ ಲಾಭ ಪಡೆಯಬೇಕೆಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅನೀಲಕುಮಾರ ತಿಳಿಸಿದರು.
ತಾಲೂಕಿನ ಬೆನಕನಹಳ್ಳಿ (ಜೆ) ಗ್ರಾಮದಲ್ಲಿ ಆಯೋಜಿಸಿದ್ದ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಕೃಷಿ ಕಲ್ಯಾಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ನೂತನ ಕೃಷಿ ಅಭಿಯಾನವನ್ನು ಅನುಷ್ಠಾನಗೊಳಿಸಿದ್ದು, ಅಧಿಕಾರಿಗಳು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಯೋಜನೆ ಕುರಿತು ಕೃಷಿಕರು ಮಾಹಿತಿ ಪಡೆಯಬೇಕು. ಪ್ರಧಾನ ಮಂತ್ರಿ ಕೃಷಿ ಅಭಿಯಾನ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ರೈತರು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಂಜುನಾಥ ಜೆ ಮಾತನಾಡಿ, ರೈತರು ಕೃಷಿಯಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಫಸಲ್ ಬರುವಂತೆ ಸದುಪಯೋಗಪಡಿಸಕೊಳ್ಳಬೇಕು. ಗ್ರಾಮೀಣ ರೈತರಿಗೆ ಈ ಯೋಜನೆಗಳು ವರದಾನವಾಗಿವೆ ಎಂದರು.
ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಮತ್ತು ಶಹಾಪುರಿನ ಕೃಷಿ, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕವಡಿಮಟ್ಟಿ ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಕೃಷಿ ಮತ್ತು ಉಪ ಕಸಬುಗಳಾದ ಜೇನು, ಮೊಲ ಸಾಕಾಣಿಕೆ ಕುರಿತು ಹಾಗೂ ಆಧುನಿಕ ಕೃಷಿ ಪದ್ದತಿ, ರಸಾಯನಿಕ ಕೃಷಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಜಿಲ್ಲಾ ಅಪರ ಜಿಲ್ಲಾಧಿಕಾರಿ ಪ್ರ್ರಕಾಶ ರಜಪೂತ ಉಪಸ್ಥಿತರಿದ್ದರು. ಕೃಷಿ ಸಹಾಯಕ ನಿರ್ದೇಶಕ ದಾನಪ್ಪ ಕತ್ನಳ್ಳಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಶಶಿಕಾಂತ ಮತ್ತು ಭೀಮರಾವ್ ಉಪಸ್ಥಿತರಿದ್ದರು.
ತಾಪಂ ಸದಸ್ಯ ಸಿದ್ದಲಿಂಗಪ್ಪಗೌಡ ಪಾಟೀಲ್, ಕಾರ್ಯನಿರ್ವಾಣಾಧಿಕಾರಿ ಡಾ.ಎಸ್.ಕೆ.ಟಕ್ಕಳಕಿ, ಗ್ರಾಪಂ ಸದಸ್ಯ ಭೀಮಾಶಂಕರ್ ಬೆನಕನಳ್ಳಿ, ಬಂಡೆಪ್ಪ, ಬಸವರಾಜ, ಮಾಹಾದೇವಿ, ಶಿವುಬಾಯಿ, ನಾಗರಾಜ, ಮಲ್ಲಿಕಾರ್ಜುನ ಸೇರಿದಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಣ್ಣು ಆರೋಗ್ಯ ಚೀಟಿ ಮತ್ತು ತೆಂಗಿನ ಸಸಿಗಳನ್ನು ವಿತರಿಸಲಾಯಿತು.