ವಿನಯ ವಿಶೇಷಸಂಸ್ಕೃತಿ

ಸುರಪುರದ ಕಿನ್ನಾಳ ಕಲೆಗೆ ಬೇಕಿದೆ ಪ್ರೋತ್ಸಾಹ

ಕಲಾವಿದರ ಕೈಚಳಕ ಚಿತ್ತಾರ ನೋಡಿ ಮನ ಪುಳಕ

ಸಿದ್ದಯ್ಯ ಪಾಟೀಲ ಸುರಪುರ

ಯಾದಗಿರಿ, ಸುರಪುರ: ಹೈದರಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕಿನ್ನಾಳ ಕಲೆಯೂ ಅಳಿವಿನಂಚಿನಲ್ಲಿದ್ದು, ಸಂರಕ್ಷಿಸಲು ಸರಕಾರದ ಪ್ರೋತ್ಸಾಹದ ಅಗತ್ಯವಿದೆ. ಈ ಮೂಲಕ ಕಿನ್ನಾಳ ಕಲೆಯ ಕಲಾವಿದರು, ಕಲೆಯನ್ನು ಉಳಿ.ಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಅವಶ್ಯವಾಗಿದೆ.

ದೇವರ ಪಲ್ಲಕ್ಕಿ ಮತ್ತು ಚಪ್ಪರಗಳು ಹಾಗೂ ರಥಗಳ ಅಲಂಕಾರಿಕ ವಸ್ತುವಿನಲ್ಲಿ ಕಡುಬಣ್ಣದ ಬಟ್ಟೆಗಳ ಮೇಲೆ ವರ್ಣರಂಜಿತವಾಗಿ ಬಿಡಿಸುವ ಚಿತ್ರಗಳನ್ನು ಕಿನ್ನಾಳದ ಕಲೆ ಎನ್ನಲಾಗುತ್ತದೆ. ಇದನ್ನು ಈ ಹಿಂದೆ ಅರಸೊತ್ತಿಗೆ ಸಂದರ್ಭದಲ್ಲಿ ರಾಜಮಹಾರಾಜದರು ಬಳಸುತ್ತಿದ್ದರು. ಆದರೆ ಪ್ರಸ್ತುತ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸಲಾಗುತ್ತಿದೆ.

ವಿಜಯನಗರ ಸಾಮ್ರಾಜ್ಯದಲ್ಲಿ 1430 ರಿಂದ 1450ರ ದಶಕದಲ್ಲಿ ಕಿನ್ನಾಳ ಕಲೆ ಹೆಚ್ಚು ಜನಪ್ರಿಯವಾಗಿತ್ತು. ಇಲ್ಲಿನ ಕಲಾವಿದರೂ ಕೂಡ ಈ ಕಲೆಯ ಮೇಲೆಯೇ ಜೀವನ ಕಟ್ಟಿಕೊಂಡಿದ್ದರು. ಅರಸೊತ್ತಿಗೆ ಪತನ ನಂತರ ಕಲೆಗೆ ರಾಜಾಶ್ರಯ ಕಳೆದಕೊಂಡ ನಂತರ ಕಲಾವಿದರೂ ರಾಜ್ಯದ ವಿವಿಧ ಮೂಲೆಗಳಲ್ಲಿ ಚದುರಿ ಹೋಗಿದ್ದಾರೆ. ಆದರೂ ಅಲ್ಲಲ್ಲಿ ನೆಲೆನಿಂತ ಕಲಾವಿದರೂ ಇಂದಿಗೂ ಕೂಡ ಕಿನ್ನಾಳ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಅಂತಹ ಕಲಾವಿದರಲ್ಲಿ ರಂಗಂಪೇಟಯ ದರ್ಶನಕರ್ ಕುಟುಂಬವು ಒಂದಾಗಿದೆ.

ನೆಲೆ ನಿಂತಿರುವ ಪ್ರದೇಶಗಳು: ಕಿನ್ನಾಳ ಕಲೆಯ ಮೇಲೆಯೇ ಜೀವನ ಕಟ್ಟಿಕೊಂಡಿರುವ ಕಲಾವಿದರು ಕೊಪ್ಪಳ, ಬಳ್ಳಾರಿ, ಹರಪನಹಳ್ಳಿ, ಆಂಧ್ರಪದೇಶದ ಅನಂತಪುರ ಮತ್ತಿತರ ಪ್ರದೇಶಗಳಲ್ಲಿ ನೆಲೆ ನಿಂತಿದ್ದಾರೆ. ಗ್ರಾಮದೇವತೆಗಳಾದ ಮರಗೆಮ್ಮ, ದುರ್ಗಮ್ಮ, ಕೆಂಚಮ್ಮ, ಪಾಲಕಮ್ಮ, ಮಾರಮ್ಮ, ದ್ಯಾವಮ್ಮ, ಯಲ್ಲಮ್ಮ, ಚೌಡಮ್ಮ ಹೀಗೆ ಅನೇಕ ದೇವತೆಗಳಿಗೆ ಬಣ್ಣ ಮಾಡುವಾಗ ಕಲಾವಿದರು ಕಿನ್ನಾಳ ಕಲೆಯನ್ನು ಬಳಕೆ ಮಾಡಲಾಗುತ್ತದೆ.

ಹನಮಂತ, ಬೀರಪ್ಪ, ಕರಿದೇವರು, ಮಾರಮ್ಮ, ಮಹಾಲಿಂಗರಾಯ, ಐಯ್ಯಾಳಲಿಂಗೇಶ್ವರ, ಮಲ್ಲಯ್ಯ ಸೇರಿದಂತೆ ಇತರೆ ದೇವರುಗಳ ಪಲ್ಲಕ್ಕಿ ಮತ್ತು ರಥೋತ್ಸವ ಕಾರ್ಯದಲ್ಲಿ ಕಿನ್ನಾಳ ಕಲೆ ಹೆಚ್ಚು ಉಪಯೋಗಿಸಲಾಗುತ್ತದೆ.
ಪಲ್ಲಕ್ಕಿ, ದೇವರ ವಿಗ್ರಹ, ಛತ್ರಿ, ಚಾಮರ, ಪಲ್ಲಕ್ಕಿ ಮೇಲೆ ಹೊದಿಸುವ ಚಪ್ಪರ, ಚೌಕಿ, ರಾಜಿಗೊಂಡೆ ಸೇರಿದಂತೆ ಇತರೆ ವರ್ಣರಂಜಿತ ಚಿತ್ತಾರಗಳನ್ನು ಬಿಡಿಸಲಾಗುತ್ತಿದೆ. ಹಸಿರು, ಕೆಂಪು, ಹಳದಿ,ನೀಲಿ, ಕಡುಗೆಂಪು, ಸುವರ್ಣ ಬಣ್ಣ, ಬೆಳ್ಳಿ ವರ್ಣ, ಕಂದು ಸೇರಿದಂತೆ ಇತರೆ ಬಣ್ಣಗಳನ್ನೇ ಬಳಸಲಾಗುತ್ತದೆ.

ಬಣ್ಣ ಬಳಸುವುದರಲ್ಲಿ ನೈಪುಣ್ಯತೆ: ಕಿನ್ನಾಳದ ಕಲೆಯೊಂದಿಗೆ ದೇವರ ವಿಗ್ರಹಗಳ ಬಣ್ಣ ಬಳಕೆಯಲ್ಲಿ ದರ್ಶನಕರ್ ಕುಟುಂಬ ನೈಪುಣ್ಯತೆ ಪಡೆದಿದೆ. ಹೊಸ ವಿಗ್ರಹಗಳಿಗೆ ಹಳದಿ ಮತ್ತು ಕೆಂಪು ಬಣ್ಣ ಹೆಚ್ಚಾಗಿ ಬಳಸಲಾಗುತ್ತದೆ. ಇದು ಬಹುಕಾಲ ಬಾಳಕೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ತಯಾರಿಸುವ ರೀತಿ: ಮೊಕಮಲ್(ವೆಲ್‍ವೇಟ್) ಬಟ್ಟೆ, ಚೈನಾ ಸಿಲ್ಕ್, ಜರತಾರಿ ಬಟ್ಟೆಗಳ ಮೇಲೆ ಕಿನ್ನಾಳ ಕಲೆಯನ್ನು ಬಿಡಿಸಲಾಗುತ್ತದೆ. ಪಲ್ಲಕ್ಕಿ, ಚೌಕಿ, ದೇವರ ವಿಗ್ರಹದ ಮಂಟಪಗಳಿಗೆ ಸಾಗವಾನಿ, ನೆಲಮದ್ದಿ, ಮಲೇಗನ್, ನೀಲಗಿರಿ, ಭಜ್ಜಿ ಕಟ್ಟಿಗೆಯಿಂದ ಸಿದ್ಧಪಡಿಸಲಾಗುತ್ತದೆ.
ಕಚ್ಚಾ ಸಾಮಗ್ರಿಗಳು: ಛತ್ರಿ, ಚಾಮರ, ಛಪ್ಪರ, ಗೊಂಡೆ, ರಾಜಗೊಂಡೆಗಳ ತಯಾರಿಕೆಗಾಗಿ ಕಚ್ಚಾ ಸಾಮಾಗ್ರಿಗಳನ್ನು ಹೈದರಬಾದ್, ಹೊಸಪೇಟೆ, ವಿಜಯಪುರ, ಆಂಧ್ರದ ಅನಂತಪುರದಿಂದ ತರಲಾಗುತ್ತದೆ. ವೆಲ್‍ವೇಟ್, ಚೈನಾ ಸಿಲ್ಕ್, ಜರತಾರಿ ಬಟ್ಟೆಗಳ ಮೇಲೆ ಕೈಯಿಂದಲೇ ಕಸೂತಿ ಕೆಲಸದಿಂದ ಆಕರ್ಷಕವಾಗಿ ಚಿತ್ರಗಳನ್ನು ನೇಯಲಾಗುತ್ತದೆ.
ಹೈದರಾಬಾದ ಕರ್ನಾಟಕ ಭಾಗದಲ್ಲಿ ಕಿನ್ನಾಳ ಕಲೆಯನ್ನು ಉಪಯೋಗಿಸುತಿರುವುದು ದರ್ಶನಕರ ಏಕೈಕ ಕಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೀದರ್ ಕಲಬುರಗಿ, ರಾಯಚೂರ, ವಿಜಯಪುರ, ಸೇರಿದಂತೆ ರಾಜ್ಯ ಹಾಗೂ ಆಂದ್ರಪ್ರದೇಶ,ಮಹಾರಾಷ್ಟ್ರ ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ ದೇವರ ಪಲ್ಲಕ್ಕಿ, ಛತ್ರಿಮ ಚಾಮರ, ಗೊಂಡೆ, ರಾಜಗೊಂಡೆ, ಜಗ ಜಂಪಗಳನ್ನು ಮಾಡಿಸಿಕೊಂಡು ಹೋಗುತ್ತಾರೆ. ಗ್ರಾಮೀಣ ಭಾಗದಲ್ಲಿ ಈ ಕಲೆಗೆ ಹೆಚ್ಚು ಬೇಡಿಕೆ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಬಿಡುವಿಲ್ಲದಷ್ಟು ಕೆಲಸ ಇರುತ್ತದೆ ಎಂದು ಕಲಾವಿದ ವೆಂಕೋಬ ದರ್ಶನಕರ ತಿಳಿಸುತ್ತಾರೆ.

 

ನಮ್ಮ ಮೂರುನಾಲ್ಕು ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು ಉಳಿಸಿಕೊಂಡು ಹೋಗಬೇಕು ಎಂಬುದು ನಮ್ಮ ಉದ್ದೇಶ ಮತ್ತು ಈ ಕಲೆ ನಮ್ಮ ಕುಟುಂಬದ ಕೈ ಹಿಡಿದೆ ಕುಟುಂಬದವರೆಲ್ಲರು ಇದೇ ಕೆಲಸ ಮಾಡುತ್ತೇವೆ ನಮಗೆ ಹೊಲಮನೆ ಏನೊಂದು ಇಲ್ಲಾ ಕಲೆಯೇ ನಮ್ಮ ಆಸ್ತಿ ಇದನ್ನೆ ನಂಬಿ ಬದುಕು ಸಾಗಿಸುತ್ತಿದ್ದೇವೆ ವರ್ಷವಿಡೀ ಕೆಲಸ ಮಾಡಿದರು ಜೀವನ ಸಾಗಿಸುವುದು ಕಷ್ಟವಾಗಿದೆ

-ವೆಂಕೋಬ ದರ್ಶನಕರ್ ಕಿನ್ನಾಳ ಕಲೆ ಕಲಾವಿದ ರಂಗಂಪೇಟ.

ಹಲವಾರು ವಿಧದ ಕಲೆಗಳಿವೆ ಹಿಂದೆ ರಾಜಮಹಾರಾಜರ ಕಾಲದಲ್ಲಿ ಕಲೆಗೆ ಬೆಲೆ ಇತ್ತು ಅದಕ್ಕೆ ತಕ್ಕಂತೆ ಅರಸುರು ಇನಾಮು ನೀಡುತ್ತಿದ್ದರು. ಇತ್ತೀಚೆಗೆ ಕಲೆಗೆ ಬೆಲೆ ಇಲ್ಲದಂತ್ತಾಗಿ ಕಲಾವಿದರ ಬದುಕು ಅತಂತ್ತ ಸ್ಥಿತಿಗೆ ತಲುಪಿದೆ. ಅದರಲ್ಲೂ ಕಿನ್ನಾಳದ ಕಲೆ ಇದೊಂದು ವಿಶಿಷ್ಟ ಕಲೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಈ ಕಲೆ ಉಛ್ರಾಯ ಸ್ಥತಿಯಲ್ಲಿತ್ತು. ಇದನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ಸರಕಾರ ಪ್ರೋತ್ಸಾಹ ನೀಡಿ ಕಲೆ-ಕಲಾವಿದರನ್ನು ರಕ್ಷಿಸುವ ಕೆಲಸ ಮಾಡಬೇಕಿದೆ.

 -ಮಾನಪ್ಪ ನಾಲವಾರ್ ಕಲಾವಿದ ಧನಸ್ಸು ಕ್ರಿಯೇಟಿವ್ಸ್ ರಂಗಂಪೇಟ.

ಕಲೆಯನ್ನೇ ನಂಬಿ ಬದುಕುವ ಕಲಾವಿದರ ಬದಕು ಅತಂತ್ರ ಸ್ಥಿತಿಯಲ್ಲಿದೆ. ಕಿನ್ನಾಳ ಕಲೆಯು ವಿನಾಶದ ಅಂಚಿನಲ್ಲಿದ್ದು, ಇದನ್ನು ತಲಾತಲಾಂತರದಿಂದ ಉಳಿಸಿಕೊಂಡು ಬಂದ ಕೀರ್ತಿ ದರ್ಶನ್‍ಕರ್ ಕುಟುಂಬಕ್ಕೆ ಸಲ್ಲುತ್ತದೆ. ಕಿನ್ನಾಳ ಕಲೆ ಅಳಿಯದಂತೆ ಸರಕಾರ ಕ್ರಮ ಕೈಗೊಳ್ಳಬೇಕು.

         -ಜೀವೇಶ್ ಟೊಣಪೆ, ಪೇಂಟರ್, ತಿಮ್ಮಾಪುರ.

Related Articles

Leave a Reply

Your email address will not be published. Required fields are marked *

Back to top button