ಆಧುನಿಕರಣ ಭರಾಟೆಯಲ್ಲಿ ಮನುಷ್ಯ ಸಂಬಂಧ ಹಳಸುತ್ತಿದೆ-ಡಾ.ಕಂಬಾರ
ಸಮಾಜಶಾಸ್ತ್ರ ವಿದ್ಯಾರ್ಥಿಗಳಿಂದ ಕ್ಷೇತ್ರ ಕಾರ್ಯ ಅಧ್ಯಯನ
ಆಧುನಿಕರಣ ಭರಾಟೆಯಲ್ಲಿ ಹಳಸುತ್ತಿರುವ ಮನುಷ್ಯ ಸಂಬಂಧ ಡಾ.ಕಂಬಾರ ವಿಷಾಧ
ಶಹಾಪುರಃ ಆಧುನಿಕತೆ, ಜಾಗತೀಕರಣದ ಸಂಕ್ರಮಣದ ಸಂದರ್ಭದಲ್ಲಿ ಗ್ರಾಮೀಣ ಸಮಾಜಗಳು ಆಧುನಿಕರಣಕ್ಕೆ ಒಳಗಾಗುತ್ತಾ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಹಳಸಿ ಹೋಗುತ್ತಿವೆ ಎಂದು ಕನ್ನಡ ಭಾಷಾ ಅಧ್ಯಾಪಕ ಡಾ.ಸಂತೋಷಕುಮಾರ ಕಂಬಾರ ಅವರು ವಿಷಾಧ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಾಡಂಗೇರಾ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಗ್ರಾಮೀಣ ಸಂಸ್ಕøತಿಯಲ್ಲಾಗುತ್ತಿರುವ ಸ್ಥಿತ್ಯಂತರಗಳು ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕ್ಷೇತ್ರ ಕಾರ್ಯ ಅಧ್ಯಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಗ್ರಾಮೀಣ ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿದ್ದವು. ಪರಸ್ಪರರು ಕೌಟುಂಬಿಕ ಸಂಬಂಧದಂತೆ ಎಲ್ಲಾ ಸಮುದಾಯದ ಜನರು ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾ ಸಹಾಯ ಸಹಕಾರ ನೀಡುತ್ತಾ ಬದುಕಿನ ಅದಮ್ಯ ಪ್ರೀತಿಯೊಂದಿಗೆ ಜೀವಿಸುತ್ತಿದ್ದರು.
ಕಸುಬುದಾರರು ಕೃಷಿಕರೊಂದಿಗೆ ತಮ್ಮ ವೃತ್ತಿ ಸೇವೆಗಳ ಮೂಲಕ ಸಾಂಸ್ಕøತಿಕ ಸಂಬಂಧಗಳನ್ನು ಹೊಂದಿದ್ದರು. ಆದರೆ ಇಂತಹ ಭಾವನಾತ್ಮಕ ಸಂಬಂಧಗಳು ಮರೆಯಾಗುತ್ತಿವೆ ಎಂದು ಹಲವಾರು ನಿರ್ದೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕ್ಷೇತ್ರಕಾರ್ಯ ಅಧ್ಯಯನ ಉದ್ಧೇಶಿಸಿ ಮಾತನಾಡಿದ ಆಂಗ್ಲ ಸಹಾಯಕ ಪ್ರಾಧ್ಯಪಕ ಪ್ರೊ. ಆನಂದಕುಮಾರ ಸಾಸನೂರ, ಒಂದು ಹಳ್ಳಿ ಎಂದರೆ ಎಲ್ಲ ಜಾತಿ, ಜನಾಂಗ, ಪಂಥದವರು, ವಿವಿಧ ಕಸುಬುದಾರರು ನಾವು ನಮ್ಮವರು ಎಂಬ ಸಾಮುದಾಯಿಕ ಭಾವನೆಯೊಂದಿಗೆ ಬದುಕುವ ಐಕ್ಯತೆಯ ತಾಣವಾಗಿತ್ತು.
ಇಂದು ಆಧುನಿಕತೆ, ನಗರೀಕರಣದಿಂದ ಹಳ್ಳಿಗಳಲ್ಲಿ ಲಾಭ-ನಷ್ಟದ ಆರ್ಥಿಕ ದೃಷ್ಟಿಕೋನ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆನಂದಕುಮಾರ ಜೋಷಿ ಹಾಗೂ ಸಮಾಜಶಾಸ್ತ್ರದ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಈರಮ್ಮ, ಅಶ್ವಿನಿ, ಭಾಗ್ಯಶ್ರೀ, ಮಾಳಪ್ಪ, ಆಂಜನೇಯ, ದೇವರಾಜ, ಲಕ್ಷ್ಮಣ, ಗೌರಮ್ಮ, ಸುಧಾ, ಅಮೃತಾ, ಅಂಬಿಕಾ, ಯಲ್ಲಮ್ಮ, ನಾಗವೇಣಿ, ಶಿಲ್ಪಾಶ್ರೀ, ಜೈನಾಬಿ, ಪೂಜಾ, ಆತ್ಮಶಾಂತಿ, ಸಿದ್ಧಮ್ಮ ಮುಂತಾದವರು ಗ್ರಾಮದ ವಿವಿಧ ಸಮುದಾಯದ ಕುಟುಂಬಸ್ಥರನ್ನು ಭೇಟಿ ಮಾಡಿ ಹಲವಾರು ಪ್ರಶ್ನೆಗಳ ಮೂಲಕ ಕುಟುಂಬ ಹಿರಿಯ ಸದಸ್ಯರಿಂದ ಕಸುಬು, ಕೃಷಿ, ವಿವಿಧ ಉದ್ಯೋಗಗಳು, ಶಿಕ್ಷಣ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ ಮತ್ತು ಗ್ರಾಮೀಣ ಜನಪದ ಸಂಸ್ಕøತಿಯ ಆಚರಣೆಗಳು ಮುಂತಾದ ವಿಷಯಗಳನ್ನು ಕುರಿತು ಮಾಹಿತಿಗಳನ್ನು ಪಡೆದುಕೊಂಡರು.