ಮಹಿಳಾ ವಾಣಿ

ಹೆಣ್ಣು ಹೆಣ್ಣೆಂದು ಹೀಗಳಿಯದಿರಿ..ನಿಮ್ಮನ್ನು ಹೆತ್ತವಳು ಹೆಣ್ಣಲ್ಲವೇ.?

ವೇದಗಳ ಕಾಲದಲ್ಲಿ ಹೆಣ್ಣಿಗೆ ಗೌರವವಿತ್ತೆ.?

ಭಾರತ ಸಂಪದ್ಭರಿತ ನಾಡು ಅಷ್ಟೇ ಅಲ್ಲ ಶ್ರೀಮಂತ ಸಂಸ್ಕೃತಿಯ ಬೀಡು ಎಂದು ಜಗತ್ಪ್ರಸಿದ್ಧವಾಗಿದೆ. ಇಲ್ಲಿಯ ಉಪನಿಷತ್ತುಗಳು ಮಹಾಕಾವ್ಯಗಳು ಹಾಗೂ ವೇದಗಳು ವಿಶೇಷವಾಗಿವೆ.

ವೇದ ಕಾಲದ ಇತಿಹಾಸವನ್ನು ತೆರೆದು ನೋಡಿದಾಗ ಗಂಡು ಹೆಣ್ಣಿನ ನಡುವೆ ವ್ಯತ್ಯಾಸವೇ ಕಂಡು ಬರುವದಿಲ್ಲ. ಮಹಿಳೆ ಧಾರ್ಮಿಕ ಸಮಾರಂಭಗಳಲ್ಲಿ ಮತ್ತು ಇತರೆ ರಂಗಗಳಲ್ಲಿ ಸಮಾನ ಸ್ಥಾನ ಹೊಂದಿರುವದನ್ನು ಮತ್ತು ಅವಳಿಗೆ ಸಮಾಜದಲ್ಲಿ ವಿಶಿಷ್ಟ ಗೌರವ ನೀಡಿರುವದನ್ನು ಕಾಣುತ್ತೇವೆ.`ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವರು ಸಂಚರಿಸುತ್ತಾನೆ.` ಎಂಬ ಉಕ್ತಿಯೂ ಮನೆ ಮಾತಾಗಿತ್ತು ಎನ್ನುವದನ್ನು ನಾವು ಓದುತ್ತೇವೆ.

ಹೀಗೆ ವೇದ ಕಾಲದಲ್ಲಿ ಮಹಿಳೆ ತನ್ನದೇ ಆದ ಹಿರಿಮೆ ಗರಿಮೆ ಹೊಂದಿದ್ದ ದೇಶದಲ್ಲಿ ಈಗ ಮಹಿಳೆಯ ಸ್ಥಾನಮಾನದ ಬಗ್ಗೆ ಅವಲೋಕಿಸಿದಾಗ ಭಯವುಂಟಾಗುತ್ತದೆ.

ಈಗಿನ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಟ, ಹೆಣ್ಣು ಗಂಡಿನ ಗುಲಾಮಳು. ಅವಳೇನಿದ್ದರೂ ಗಂಡು ಹೇಳಿದ ಹಾಗೆ ಕೇಳಬೇಕು ಎನ್ನುವ ಮನೋಭಾವನೆಯನ್ನು ಸ್ವಾರ್ಥಪರ ಪುರುಷರು ಹುಟ್ಟು ಹಾಕಿದ್ದರ ಪರಿಣಾಮವಾಗಿ ಹೆಣ್ಣು ಅವಮಾನಕ್ಕೊಳಗಾದಳು,ದೌರ್ಜನ್ಯಕ್ಕೊಳಗಾದಳು, ಅಬಲೆಯಾದಳು,

ಪರಾವಲಂಬಿಯಾದಳು.ಅವಳ ರಕ್ಷಣೆಗಾಗಿ ಗಂಡು ಬೇಕೇ ಬೇಕು ಎನ್ನುವ ಸಂದರ್ಭ ಸೃಷ್ಟಿಯಾಯಿತು.
ಹೆಣ್ಣಿನ ಸ್ಥಾನಮಾನ ಕಂಡು ನೊಂದು ಹದಿನಾರನೇ ಶತಮಾನದಲ್ಲಿ ಸಂಚಿ ಹೊನ್ನಮ್ಮ `ಹದಿಬದಿಯ ಧರ್ಮ` ಎಂಬ ತನ್ನ ಕೃತಿಯಲ್ಲಿ `ಹೆಣ್ಣು ಹೆಣ್ಣೆಂದೇಕೆ ಹೀಗಳೆಯುವಿರಿ? ಹೆಣ್ಣಲ್ಲವೆ ನಿಮ್ಮನ್ನೆಲ್ಲ ಹಡೆದವಳು? ಹೆಣ್ಣಲ್ಲವೆ ನಿಮ್ಮನ್ನೆಲ್ಲ ಪೊರೆದವಳು? ಎಂದು ಸ್ವಾರ್ಥಪರ ಪುರುಷರನ್ನು ಪ್ರಶ್ನಿಸುತ್ತಾಳೆ.

ಇತ್ತೀಚಿಗೆ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಕಂಡು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.ಈ ಘಟನೆಗಳು ನಮ್ಮ ಭಾರತಿಯ ಉನ್ನತ ಸಂಸ್ಕೃತಿಗೆ ಘೋರ ಅಪಮಾನವನ್ನು ಮಾಡುವಂತವಷ್ಟೇ ಅಲ್ಲ ಮಹಿಳೆಯ ಅಳಿವು ಉಳಿವಿನ ಪ್ರಶ್ನೆಯಂತೆ ತೋರುತ್ತವೆ.

ಪುರುಷ ಪ್ರಧಾನ ಸಮಾಜವೆಂದೇ ಗುರುತಿಸಿಕೊಳ್ಳುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ತಾರತಮ್ಯ ಗೊತ್ತಿದ್ದಿದ್ದೆ ಇದೆ. ಗಂಡು ಮಕ್ಕಳಿಗೆ ಏನೂ ಜವಾಬ್ದಾರಿ ನೀಡದೇ ಉಂಡಾಡಿ ಗುಂಡನ ಹಾಗೆ ಬೆಳೆಸುತ್ತಾರೆ. ಹೀಗೆ ಬೆಳೆದ ಗಂಡುಮಕ್ಕಳು ತಂದೆ ತಾಯಿಯ ಮಾತುಗಳನ್ನು ಗಾಳಿಗೆ ತೂರುತ್ತಾರೆ.

ಗುರಿಯಿಲ್ಲದ ಜೀವನ ನಡೆಸುತ್ತ ಸಮಾಜ ಘಾತುಕ ಕಾರ್ಯಗಳಲ್ಲಿ ತೊಡುಗುತ್ತಾರೆ.ಆದರೆ ಹೆಣ್ಣುಮಕ್ಕಳನ್ನು ಆಟವಾಡಿ ಬೆಳೆಯುವ ಸಮಯದಲ್ಲಿ ದುಡಿಯಲು ಕಳೆಸುವದು, ಮನೆಯ ಜವಾಬ್ದಾರಿಗಳ ಹೊರೆಯನ್ನು ಅವರ ಮೇಲೆ ಹೇರುವದನ್ನು ಕಾಣುತ್ತೇವೆ.ಕುಟುಂಬದ ಸದಸ್ಯರ ಮನಸ್ಸುಗಳನ್ನು ಅರ್ಥ ಮಾಡಿಕೊಂಡು ತನ್ನ ಬಯಕೆಗಳನ್ನೆಲ್ಲ ಅದುಮಿಕೊಂಡೇ ಬೆಳೆಯುವ ಅದೆಷ್ಟೋ ಹೆಣ್ಣುಮಕ್ಕಳು ಶಿಕ್ಷಣ ಪಡೆಯದೆ ಅನೇಕ ಅವಕಾಶಗಳಿಂದ ವಂಚಿತರಾಗಿ, ಅಜ್ಞಾನದ ಕೂಪದಲ್ಲಿ ಬಿದ್ದು ದುರ್ಭರ ಜೀವನ ನಡೆಸುವಂತಾಗಿದೆ. ಪುರುಷರ ದಬ್ಬಾಳಿಕೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ.

ಇದನ್ನೆಲ್ಲ ಅರಿತ ಶಿಕ್ಷಣತಜ್ಞರು, ಮಹಿಳಾವಾದಿಗಳು ಹೆಣ್ಣು ಮಕ್ಕಳ ಪರ ದನಿ ಎತ್ತುತ್ತಿದ್ದಾರೆ ಅವಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.ಮಹಿಳಾ ಸಬಲೀಕರಣಕ್ಕಾಗಿ ಅನೇಕ ಸ್ವಯಂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾÀಚುತ್ತಿದ್ದರೂ ವಾಸ್ತವದಲ್ಲಿ ಮಹಿಳೆ ನಿಜವಾಗಲೂ ಶೊಚನೀಯ ಸ್ಥಿತಿಯಲ್ಲಿ ಇರುವದಂತೂ ಕಟು ಸತ್ಯ.

ಇಷ್ಟೆಲ್ಲ ಕಷ್ಟಗಳ ಮಧ್ಯದಲ್ಲೂ ಶೈಕ್ಷಣಿಕ ಸಾಧನೆಯಲ್ಲಿ ಅವಳದೇ ಮೇಲುಗೈ. ಪುಟಕ್ಕಿಟ್ಟ ಚಿನ್ನದಂತೆ ಪ್ರತಿಯೊಂದು ಸಮಸ್ಯೆಯನ್ನು ಸವಾಲಂತೆ ಸ್ವೀಕರಿಸಿ ಪ್ರತಿ ಕ್ಷೇತ್ರದಲ್ಲೂ ತನ್ನ ಪ್ರತಿಭೆ ಮೆರೆಯುತ್ತಿದ್ದಾಳೆ. ತನ್ನ ಬಗ್ಗೆ ತಾನೆ ಹೆಮ್ಮೆ ಪಡುತ್ತಿದ್ದಾಳೆ.

ಸಮಾಜದ ಪ್ರಗತಿ ರಥದಲ್ಲಿ ಸಶಕ್ತ ಗಾಲಿಯಾಗಿ ಕಾರ್ಯ ನಿರ್ವವಹಿಸುತ್ತಿರುವ ಹೆಣ್ಣಿನ ಜೀವಕ್ಕೆ ವರದಕ್ಷಿಣೆ ಹೆಸರಿನಲ್ಲಿ ಬಿಡಿಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಪುರುಷನ ಒಣ ಪ್ರತಿಷ್ಟೆಗಾಗಿ, ಅಹಂಕಾರ ದರ್ಪಕ್ಕಾಗಿ ಅವಳು ಬಲಿಯಾಗುವದು ಯಾವ ನ್ಯಾಯ?

ಪ್ರೋತ್ಸಾಹವಿಲ್ಲದ ಅನೇಕ ಹೆಣ್ಣುಮಕ್ಕಳ ಬಾಳು ಆರಂಭದಲ್ಲಿಯೇ ಕಮರಿ ಹೋಗುತ್ತಿದೆ.ಮೋಹಿಸಲು ಹೆಣ್ಣು ಬೇಕು ಸಮಯ ಸಮಯಕ್ಕೆ ಸೇವೆ ಮಾಡಲು ಹೆಣ್ಣು ಬೇಕು ಆದರೆ ಮಗಳಾಗಿ ಬೇಡ ಎನ್ನುವ, ಹೆಣ್ಣೆಂದು ಹೀಗಳೆಯುವ ಪುರುಷ ಸಮಾಜ ಇನ್ನಾದರೂ ಎಚ್ಚೆತ್ತುಕೊಡು ಸಮಾನತೆಯ ತತ್ವವನ್ನು ಕೇವಲ ಆದರ್ಶವನ್ನಾಗಿಸದೆ ಜೀವಂತ ಶಕ್ತಿಯನ್ನಾಗಿಸಬೇಕಿದೆ.

ಆರೋಗ್ಯಕರ ಸದೃಡ ನಾಡನ್ನು ಕಟ್ಟಲು ಹೆಣ್ಣು ಮಕ್ಕಳಗೆ ಸಮಾನ ಹಕ್ಕುಗಳನ್ನು ನೀಡಿ ಅವರನ್ನು ಸಬಲರನ್ನಾಗಿಸ ಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬನ್ನಿ ಹೆಣ್ಣು ಮಗುವಿನ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ.

-ಜಯಶ್ರೀ ಜಯಪ್ರಕಾಶ ಅಬ್ಬಿಗೇರಿ.
ಸರಕಾರಿ ಪದವಿ ಪೂರ್ವ ಕಾಲೇಜು
ಕಟಕೋಳ.
ತಾ: ರಾಮದುರ್ಗ ಜಿ: ಬೆಳಗಾವಿ
9449234142.

Related Articles

One Comment

  1. ಅನಾದಿ ಕಾಲದಿಂದ ಹೆಣ್ಣಿನ ಸ್ಥಿತಿ ಶೋಚಿನಿಯವಾಗಿತ್ತು ನಿಜ. ಆದರೆ ಇಂದು ಕೂಡ ಹೆಣ್ಣಿನ ಸ್ಥಿತಿ ಬದಲಾಗಿದೆ ಎಂದರೆ ್ಪುಒಪ್ಪಲಸಾಧ್ಾ ಒಪ್ಪಲುಸಾಧ್ಯ ಇಲ್ಲ
    ಅದು ಬದಲಾವಣೆ ಕಂಡಿದೆ ಎಂದರೇ ಬೆರಳೆಣಿಕೆ ಎನ್ನುವ ನಿಲುವು ಮತ್ತು ಗ್ರಹಿಕೆ ನನ್ನದು

Leave a Reply

Your email address will not be published. Required fields are marked *

Back to top button