ಯುವ ಜನಾಂಗ ಮಾದಕ ದ್ರವ್ಯಗಳಿಂದ ದೂರವಿರಿಃ ನ್ಯಾಯಧೀಶ ಸದಾನಂದ ನಾಯಕ
ಯಾದಗಿರಿ: ಮಾದಕ ದ್ರವ್ಯ (ಡ್ರಗ್ಸ್) ಸೇವನೆಯಿಂದ ಯುವ ಜನತೆ ದೂರವಿದ್ದರೆ ಮಾತ್ರ ಅವರ ಭವಿಷ್ಯ ಸುಂದರವಾಗಿರಲಿದೆ. ಇಲ್ಲವಾದಲ್ಲಿ ಬದುಕು ನರಕವಾಗಲಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸದಾನಂದ ನಾಯಕ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸಭಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ಸಬಾ ಪಿ.ಯು.ಕಾಲೇಜು ಆವರಣದಲ್ಲಿ ನಡೆದ ಕಾನೂನು ಅರಿವು -ನೆರವು ಕಾರ್ಯಕ್ರಮದಡಿ ವಿಶೇಷವಾಗಿ ಆಯೋಜಿಸಿದ ಮಾದಕ ದ್ರವ್ಯಗಳ ದುಷ್ಪರಿಣಾಮ ಕುರಿತು ಮಾತನಾಡಿದರು. ಮಾದಕ ವಸ್ತುಗಳಿಂದ ವಿಶೇಷವಾಗಿ ಯುವ ಜನಾಂಗದ ಆಕರ್ಷಣೆ ಸಹಜ. ಆದರೆ ಕ್ಷಣಿಕ ಸುಖದ ಬೆನ್ನತ್ತಿ ಸುಂದರ ಭವಿಷ್ಯದ ಬದುಕು ಹಾಳು ಮಾಡಿಕೊಳ್ಳುತ್ತಾರೆ ಎಂದು ಹೇಳಿದ ಅವರು, ಯುವಜನತೆ ಶಿಕ್ಷಣ ಹಾಗೂ ಸದೃಢ ಭವಿಷ್ಯತಿಗೆ ಒತ್ತುಕೊಡಬೇಕೇ ಹೊರತು ಚಟಗಳ ದಾಸರಾಗಬಾರದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಯುವ ಜನಾಂಗ ವಿಶೇಷವಾಗಿ ಕಾಲೇಜು ಹಂತದಲ್ಲಿ ಮಾದಕ ವ್ಯಸನಿಗಳಾಗುವ ಸಾಧ್ಯತೆ ಜಾಸ್ತಿಯಾಗಿದೆ. ಈ ಸಂದರ್ಭದಲ್ಲಿ ಎಚ್ಚರಿಕೆ ಹಾಗೂ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕೆಂದರು.
ಸಿವಿಲ್ ನ್ಯಾಯಾಧೀಶರೂ ಆದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿ, ಡ್ರಗ್ಸ್ ಚಟಕ್ಕೆ ಒಳಗಾದವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕಾನೂನು ನೆರವು ಉಚಿತವಾಗಿ ಲಭಿಸಲಿದೆ ಎಂದು ತಿಳಿಸಿದರು.
ಸಭಾ ಸಂಸ್ಥೆ ಅಧ್ಯಕ್ಷರಾದ ಜೆ.ಎಸ್.ಕೌಸರ್ ಅದ್ಯಕ್ಷತೆ ವಹಿಸಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್.ಮಾಲಿಪಾಟೀಲ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ನಿರಂಜನ ಯರಗೋಳ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ಪ್ರಾಚಾರ್ಯ ಕನೆಕ್ಷನ್ ಅಮ್ರಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೈಸನ್ ಶಹೀದಿ ಸ್ವಾಗತಿಸಿದರು. ಸಹೇರಾ ಬೇಗಂ ನಿರೂಪಿಸಿದರು. ಸಬಾ ಮನಾಲ್ ವಂದಿಸಿದರು.