ವಿನಯ ವಿಶೇಷ
ಮದುವೆಯಲ್ಲಿ ಉಪ್ಪಿನ್ ಕುಟುಂಬದಿಂದ ಸಸಿ ವಿತರಣೆ
ನವದಂಪತಿಗಳಿಂದ ಸಸಿ ವಿತರಣೆ
ಯಾದಗಿರಿ, ಶಹಾಪುರಃ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಎಬಿವಿಪಿ ಮುಖಂಡ ಅರವಿಂದ -ಶ್ವೇತಾ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಳಿಗೆಯಲ್ಲಿ ಆಶೀರ್ವದಿಸಲು ಆಗಮಿಸಿದ ನೂರಾರು ಜನರಿಗೆ ಸಸಿ ವಿತರಣೆ ಮಾಡುವ ಮೂಲಕ ಹಸಿರು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬದ ಹಿರಿಯ ಅಶೋಕ ಉಪ್ಪಿನ್, ಮದುವೆ ಸಮಾರಂಭದಲ್ಲಿ ಆಶೀರ್ವದಿಸಲು ಬಂದವರಿಗೆ ಆದಷ್ಟು ಸಸಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ನನ್ನ ಮಗ ಅರವಿಂದ್ ಹಾಗೂ ಸೊಸೆ ಶ್ವೇತಾ ಇಬ್ಬರೂ ಹಸಿರು ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಹಿನ್ನೆಲೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮದುವೆಗೆ ಬಂದು ನೂತನ ದಂಪತಿಗಳಿಗೆ ಆಶೀರ್ವದಿಸುವ ಜೊತೆಗೆ ಉಪ್ಪಿನ್ ಕುಟುಂಬ ನೀಡಿದ ಸಸಿಗಳನ್ನು ಎಸೆಯದೆ ಮನೆ ಮುಂದಿನ ಜಾಗದಲ್ಲೋ ತೋಟದಲ್ಲೋ ಅವುಗಳನ್ನು ಬೆಳೆಸುವ ಮೂಲಕ ಹಸಿರು ಜಾಗೃತಿಗೆ ಸ್ಪೂರ್ತಿ ತುಂಬಬೇಕು ಎಂದು ಕಳಕಳಿಯಿಂದ ಉಪ್ಪಿನ್ ಕುಟುಂಬಸ್ಥರು ಈ ಸಂದರ್ಭದಲ್ಲಿ ಮನವಿ ಮಾಡುವ ಮೂಲಕ ಗಿಡ ಮರ ಬೆಳೆಸಲು ಪ್ರೋತ್ಸಾಹಿಸಿದರು.