ಪ್ರಮುಖ ಸುದ್ದಿ
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಜೈಲಾ? ಜಾಮೀನಾ?
ದೆಹಲಿ: ಬಂಧನದ ಭೀತಿಯಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮಂಗಳವಾರ ರಾತ್ರಿಯಿಂದ ನಾಪತ್ತೆ ಆಗಿದ್ದಾರೆ. ಐ.ಎನ್.ಎಕ್ಸ್. ಮೀಡಿಯಾ ಅವ್ಯವಹಾರ ಕೇಸ್ ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ಬಂಧನದ ಭೀತಿಯಲ್ಲಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ ನಿನ್ನೆಯಿಂದಲೇ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪರ ವಕೀಲರು ಸಲ್ಲಿಸಿದ್ದ ನಿರಿಕ್ಷಣಾ ಜಾಮೀನು ಅರ್ಜಿ ಮಂಗಳವಾರ ದೆಹಲಿ ಉಚ್ಛನ್ಯಾಯಾಲಯವು ತಿರಸ್ಕರಿಸಿದೆ. ಪರಿಣಾಮ ಸಿಬಿಐ ಮತ್ತು ಇಡಿ ಅಧಿಕಾರಿಗಳ ತಂಡ ಚಿದಂಬರಂ ಬಂಧನಕ್ಕಾಗಿ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಎರಡು ಸಲ ನವದೆಹಲಿಯ ಜೋರ್ ಭಾಗ್ ನಲ್ಲಿರುವ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಚಿದಂಬರಂ ಅವರು ಪತ್ತೆ ಆಗಿಲ್ಲ. ನಿರೀಕ್ಷಣಾ ಜಾಮೀನು ಮೇಲ್ಮನವಿ ಅರ್ಜಿ ಇಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು ಯಾವ ತೀರ್ಪು ಹೊರಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.