ಕವಿ ವರವರರಾವ್ ಬಿಡುಗಡೆಗೊಳಿಸುವಂತೆ ಟಿ.ಶಶಿಧರ ಆಗ್ರಹ
ವರವರರಾವ್ ಬಿಡುಗಡೆಗೊಳಿಸಿ ಟಿ.ಶಶಿಧರ ಆಗ್ರಹ
ಶಹಾಪುರಃ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್ ಜತೆ ಸಂಬಂಧ ಹೊಂದಿದ ಆರೋಪ ಹೊತ್ತಿರುವ ಜನಪರ ಕವಿ ಹೋರಾಟಗಾರ ವರವರರಾವ್ ಮುಂಬೈ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿ ಆತಂಕಕ್ಕೆ ಗುರಿ ಮಾಡಿದೆ. ತಕ್ಷಣವೇ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ವೈಚಾರಿಕ ಚಿಂತಕ ಟಿ.ಶಶಿಧರ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡುರವ ಅವರು, ಮುಂಬೈಯಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವಿಷಯ ತಿಳಿದು ನಮಗೆಲ್ಲ ನೋವು ತಂದಿದೆ. ಅತ್ಯುತ್ತಮ ಚಿಕಿತ್ಸೆಗೆ ಮಹಾರಾಷ್ಟ್ರ ಸರ್ಕಾರ ತಕ್ಷಣ ವ್ಯವಸ್ಥೆ ಮಾಡಬೇಕು. ಜನಪರ ಕಾಳಜಿಗಳ ವರವರರಾವ್ ಮೇಲೆ ಆಪಾದನೆ ಏನೇ ಇರಲಿ ಅದನ್ನು ವಿಚಾರಣೆ ಮಾಡುವ ಬಗ್ಗೆ ನಮ್ಮ ತಕರಾರಿಲ್ಲ.
ದೇಶದ ನ್ಯಾಯಾಂಗದ ಮೇಲೆ ನಮಗೆ ಗೌರವವಿದೆ. ವ್ಯಕ್ತಿಯ ಸೈದ್ಧಾಂತಿಕ ಹಿನ್ನೆಲೆ, ರಾಜಕೀಯ ಬದ್ಧತೆ ಏನೇ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಚಾರಣಾಧೀನ ಖೈದಿಗೂ ಮಾನವ ಹಕ್ಕುಗಳಡಿ ನೋಡಬೇಕಾಗುತ್ತದೆ. ಆರೋಗ್ಯ ಸುಧಾರಣೆ ಆದ ಮೇಲೆ ಕೋರ್ಟ್ ವಿಚಾರಣೆ ನಡೆಸಲಿ. ತದ ನಂತರ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಲಿ. ವಿಚಾರಣೆ ಮುಂದುವರೆಯಲಿ ಅವರ ವಯಸ್ಸು, ಆರೋಗ್ಯ ಇವುಗಳನ್ನು ಗಮನಿಸಿ ತುರ್ತಾಗಿ ಅವರಿಗೆ ಸೌಲಭ್ಯ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.




