ನಾಯಿ ಮಾಂಸ ಸಾಗಾಟ ಆರೋಪ: ಈ ವರದಿ ಆಧರಿಸಿ ಕಾನೂನು ಕ್ರಮ – ಆಹಾರ ಇಲಾಖೆ

ಬೆಂಗಳೂರು: ಬೆಂಗಳೂರು ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಅವರು ಆರೋಪಿಸಿದ್ದಾರೆ.
ಆರೋಪ ಕೇಳಿಬಂದ ನಂತರ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಶನಿವಾರ ಪಾರ್ಸೆಲ್ಗಳಲ್ಲಿ ಪತ್ತೆಯಾದ ಪ್ರಾಣಿಗಳ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಲ್ಯಾಬ್ ವರದಿ ಬಂದ ನಂತರ ವರದಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್ ತಿಳಿಸಿದೆ.
ರೈಲ್ವೆ ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ರೈಲಿನಲ್ಲಿ ಜೈಪುರದಿಂದ ರಟ್ಟಿನ ಪೆಟ್ಟಿಗೆಗಳಲ್ಲಿ ಲೋಡ್ ಮಾಡಲಾದ ಸುಮಾರು ಮೂರು ಟನ್ ತೂಕದ ಮಾಂಸ ಬೆಂಗಳೂರಿಗೆ ಸಾಗಿಸಲಾಗಿದ್ದು, ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕೆಲವು ಹಿಂದೂಪರ ಕಾರ್ಯಕರ್ತರು ಅದರಲ್ಲಿ ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಮಾಂಸ ಸಾಗಾಟ ಮಾಡಿದ ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್, ಈ ಆರೋಪವನ್ನು ತಳ್ಳಿಹಾಕಿದರು ಮತ್ತು ಇದು ಕುರಿ ಮಾಂಸ ಎಂದು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್, ‘ಪೊಲೀಸ್ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಜುಲೈ 26ರಂದು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪಾಸಣೆ ವೇಳೆ ಪಾರ್ಸೆಲ್ಗಳಲ್ಲಿ ಮಾಂಸ ಬಂದಿರುವುದು ಪತ್ತೆಯಾಗಿದೆ. ಒಟ್ಟು 90 ಪಾರ್ಸೆಲ್ ಗಳಿದ್ದು, ಪರಿಶೀಲನೆ ನಡೆಸಿದಾಗ ಪಾರ್ಸೆಲ್ ಗಳಲ್ಲಿ ಪ್ರಾಣಿ ಮಾಂಸ ಪತ್ತೆಯಾಗಿದೆ.
ಅದು ಯಾವ ಪ್ರಾಣಿಗಳ ಮಾಂಸ ಎಂಬುದನ್ನು ತಿಳಿಯಲು ಮಾಂಸದ ಮಾದರಿ ಸಂಗ್ರಹಿಸಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ವರದಿ ಬಂದ ನಂತರ ಅದರ ಆಧಾರದ ಮೇಲೆ ಕಾನೂನು ಕ್ರಮ ಕೈಗೊಕೊಳ್ಳಲಾಗುವುದು. ಪಾರ್ಸೆಲ್ ಕಳುಹಿಸುವವರ ಮತ್ತು ಸ್ವೀಕರಿಸುವವರ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪರವಾನಗಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಯಾವುದೇ ವ್ಯತ್ಯಾಸಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅದು ಹೇಳಿದೆ.