ಬೆಂಗಳೂರಿನಲ್ಲಿ ಜಾಲಿ ರೈಡ್ಃ ಶಹಾಪುರ ಯುವಕನ ಸಾವು
ಡಿವೈಡರ್ ಗೆ ಬೈಕ್ ಡಿಕ್ಕಿ ಯುವಕನ ಸಾವು, ಬಡಾವಣೆಯಲ್ಲಿ ನೀರವ ಮೌನ
ಯಾದಗಿರಿಃ ಯುವಕನೋರ್ವ ಪರೀಕ್ಷೆ ಬರೆಯಲೆಂದು ಬೆಂಗಳೂರಿಗೆ ತೆರಳಿದ್ದು ಸ್ನೇಹಿತರ ಮನೆಯಲ್ಲಿದ್ದು, ಪರೀಕ್ಷೆ ಬರೆದಿದ್ದಾನೆ. ನಂತರ ಶನಿವಾರ ಸ್ನೇಹಿತರಿಬ್ಬರು ಸೇರಿ ಜಾಲಿ ರೈಡ್ ಎಂದು ಬಿಡದಿ ಸಮೀಪದ ರಸ್ತೆ ಮೇಲೆ ಬೈಕ್ ಓಡಿಸುತ್ತಿರುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜರುಗಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕ ಜಿಲ್ಲೆಯ ಶಹಾಪುರ ನಗರದ ಗುತ್ತಿಪೇಟೆಯ ನಿವಾಸಿ, ಮಲ್ಲಿಕಾರ್ಜುನ ತಂದೆ ಶಿವಪ್ಪ ಜೀರ್ (20) ಎಂದು ತಿಳಿದು ಬಂದಿದೆ.
ಮೃತ ಯುವಕನ ಪಾಲಕರು ಸುದ್ದಿ ಕೇಳಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಬಡಾವಣೆಯಲ್ಲಿ ಸುದ್ದಿ ತಿಳಿದು ಯುವಕನ ಮನೆ ಮುಂದೆ ಜನ ನೆರೆದಿದ್ದಾರೆ. ಪಾಲಕರಲ್ಲಿ ಧೈರ್ಯ ತುಂಬಿ ಮೃತ ಯುವಕನ ತಂದೆಯನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತ ದೇಹದ ಪರೀಕ್ಷೆ ನಡೆಸಿದ್ದು, ಸೋಮವಾರ ಬೆಳಗ್ಗೆ ಸಂಬಂಧಿಸಿದ ಪಾಲಕರಿಗೆ ಮೃತ ದೇಹ ಒಪ್ಪಿಸಲಾಗುತ್ತಿದೆ ಎಂದು ಪಾಲಕರ ಜೊತೆಯಲ್ಲಿದ್ದವರು ಉದಯವಾಣಿಗೆ ತಿಳಿಸಿದ್ದಾರೆ.
ಸೋಮವಾರ ರಾತ್ರಿವರೆಗೂ ಮೃತ ದೇಹ ಶಹಾಪುರಕ್ಕೆ ಬರಲಿದೆ ಎಂದು ಸಂಬಧಿಕ ಬಸವರಾಜ ಹೂಗಾರ ತಿಳಿಸಿದ್ದಾರೆ.
ಮೃತ ಯುವಕ ಪಾಲಕರಿಗೆ ಒಬ್ಬನೇ ಮಗನಾಗಿದ್ದು, ಇನ್ನೋರ್ವ ಹೆಣ್ಣು ಮಗುವಿದೆ ಎನ್ನಲಾಗಿದೆ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ನಮ್ ಹುಡುಗಂದು ಡಿಪ್ಲೋಮಾ ಮುಗಿದದ. ಅದ್ಯಾವ ಪರೀಕ್ಷೆ ಬರೆಯುವದಿದೆ ಎಂದು ಬೆಂಗಳೂರಿಗೆ ಹೋಗಿದ್ದ. ಪರೀಕ್ಷೆ ಮುಗಿಸಿ ಬರ್ತೀನಿ ಅಂದಿದ್ದ. ಆದರೆ ಮುಗಿದ್ ಮೇಲೆ ನಮ್ ದೋಸ್ತರ ಮನೆಯಲ್ಲಿದ್ದೀನಿ ಎರಡು ದಿನ ಬಿಟ್ಟು ಬರ್ತೀನಿ ಅಂದಿದ್ದ. ಈಗ ನೋಡಿದ್ರ ಹೀಂಗ್ ಆಗ್ಯಾದ್..(ಕಣ್ನೀರಿಟ್ಟರು.)
–ಶಿವಪ್ಪ ಜೀರ್ (ಮೃತ ಯುವಕನ ತಂದೆ).