ಪ್ರಮುಖ ಸುದ್ದಿ

ಯೋಗದಿಂದ ಆಯುಷ್ಯ ವೃದ್ಧಿ, ಸಾಮಾನ್ಯ ಸಭೆಯಲ್ಲಿ ಆರೋಗ್ಯ ಪಾಠ ಮಾಡಿದ ಡಾ.ಮಾಲಕರಡ್ಡಿ

ತಾಪಂ ಪ್ರಗತಿ ಪರಿಶೀಲನಾ ಸಭೆಶಾಸಕರ ಬದುಕಿನ ಕಥೆಗೆ ತಲೆ ತೂಗಿದ ಅಧಿಕಾರಿಗಳು

ಯಾದಗಿರಿಃ ಯೋಗದಿಂದ ಆಯುಷ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನದಿಂದ ಬದುಕು ಸಾಮರಸ್ಯವಾಗಿರುತ್ತದೆ ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು. ಜಿಲ್ಲೆಯ ಶಹಾಪುರ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಯಾದಗಿರಿ ಕ್ಷೇತ್ರಕ್ಕೊಳಪಟ್ಟ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ನೌಕರರು ತಮ್ಮ ಜವಬ್ದಾರಿಯ ಅರಿತು ಜನ ಸಾಮಾನ್ಯರ ಸೇವೆಗೆ ಮುಂದಾಗಬೇಕು. ಸರ್ಕಾರಿ ಯೋಜನೆಗಳನ್ನು ಸಮಗ್ರವಾಗಿ ನಿಗದಿತ ಅವಧಿಯೊಳಗೆ ಅನುಷ್ಟಾನಗೊಳಿಸುವ ಮೂಲಕ ಅರ್ಹರಿಗೆ ಸೌಲಭ್ಯ ಒದಗಿಸಬೇಕು. ಆ ಮೂಲಕ ಅಭಿವೃದ್ಧಿಗೆ ಪೂರಕ ಕಾರ್ಯವನ್ನು ಸೇವಾ ಮನೋಭಾವದೊಂದಿಗೆ ನರೆವೇರಿಸಬೇಕು. ನೌಕರರು ತಮ್ಮ ಕರ್ತವ್ಯವನ್ನು ಕ್ರಮಬದ್ಧವಾಗಿ ನಿರ್ವಹಿಸಿದ್ದಲ್ಲಿ ಯಾವುದೆ ಸಮಸ್ಯೆಗಳು ಬರುವದಿಲ್ಲ ಮತ್ತು ಜನರಿಗೆ ಅನುಕೂಲವಾಗಲಿದೆ ಎಂದರು.

ಹೊರ ರಾಷ್ಟ್ರಗಳಾದ ಆಫ್ರೀಕಾ, ಅಮೇರಿಕ ದೇಶಗಳು ಅಮೋಘ ಅಭಿವೃದ್ಧಿ ಹೊಂದಿವೆ. ನಮ್ಮ ದೇಶದಲ್ಲಿ ಇನ್ನೂ ಮೂಲಭೂತ ಸೌಕರ್ಯಗಳಿಂದ ಜನರು ವಂಚಿತಗೊಂಡಿದ್ದಾರೆ. ಇದು ದೇಶಾಡಳಿತದ ಪರಿಸ್ಥಿತಿ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಹಿಯಾಳಿಸಿದರು.

ನೌಕರರು ಸಹ ಭಾರತದ ಸಂವಿಧಾನ ಓದಿಕೊಳ್ಳಬೇಕು. ದೇಶದ ಕಾನೂನು ಬಗ್ಗೆ ಅರಿತು ಕರ್ತವ್ಯ ನಿಭಾಯಿಸಬೇಕು. ಸಮಯಕ್ಕೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಮತ್ತೇ ತಮ್ಮ ಬದುಕಿನ ಇತಿಹಾಸ ಬಿಚ್ಚಿಟ್ಟ ಶಾಸಕರು, ತಾಯಿ ತವರೂರನ್ನು ಸಭೆಯಲ್ಲಿ ಪರಿಚಯಿಸಿದರು. ತಮ್ಮ ಅಧಿಕಾರದ ಕೊನೆಯಂಚಿನಲ್ಲಿ ನಡೆದ ಈ ಅಭಿವೃದ್ದಿ ಸಭೆ ಒಟ್ಟಾರೆ ಕಾಟಾಚಾರದಲ್ಲಿ ಆರಂಭಿಸಿ ಬದುಕಿನ ಹಲವು ಮಜಲಿನೆ ಪಾಠಗಳನ್ನು ಹೇಳುವ ಮೂಲಕ ಮುಕ್ತಾಯವಾಯಿತು. ಒಟ್ಟಾರೆ ಸಭೆ ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಹಿಂದಿನ ವರದಿಗಳನ್ನೇ ನೀಡಿ ಕೈತೊಳೆದುಕೊಂಡರು. ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಟಕ್ಕಳಕಿ ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನೆ ನಡೆಯದ ಕಾಟಾಚಾರದ ಸಭೆ

ಬೇಸಿಗೆ ಪಾದಾರ್ಪಣೆ ಸಂದರ್ಭದಲ್ಲಿ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯಾವ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯದಿರುವುದು ದುರಂತ.

ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದೆ. ಅಲ್ಲದೆ ಹಲವು ಯೋಜನೆಗಳ ಕಾಮಗಾರಿ ಕುರಿತು ಯಾವುದೆ ಸಮರ್ಪಕ ಮಾಹಿತಿ ಒದಗಿಬರಲಿಲ್ಲ. ಒಟ್ಟಾರೆ ಕೊನೆಯ ಪ್ರಗತಿ ಪರಿಶೀಲನಾ ಸಭೆ ಕಾಟಾಚಾರದಕ್ಕಾಗಿ ನಡೆದಿರುವುದು ಕಂಡು ಬಂದಿತು. ಯಾವುದೆ ಜನಪರ ಚರ್ಚೆ, ಸಮಸ್ಯೆಗಳ ಪರಿಹಾರಕ್ಕೆ ಕ್ರಮಗಳು ತೆಗೆದುಕೊಳ್ಳದೆ ಮುಕ್ತಾಯವಾಯಿತು.

Related Articles

Leave a Reply

Your email address will not be published. Required fields are marked *

Back to top button