ಶಹಾಪುರಃ ವೈದ್ಯೋ ನಾರಾಯಣೋ ಹರಿಃ ಎಲ್ಲಡೆ ಚಪ್ಪಾಳೆ ತಟ್ಟಿ ಕೃತಜ್ಞತೆ
ವೈದ್ಯರಿಗೆ, ಪೌರಕಾರ್ಮಿಕರಿಗೆ ಗಂಟೆ, ಶಂಖ ನಾದದಿಂದ ಸಲಾಂ
ಶಹಾಪುರ: ಕೊರೊನಾ ವೈರಸ್ ಸೋಂಕು, ಈ ದೇಶದಿಂದ ಮೂಲೋಚ್ಛಾಟನೆಯಾಗಬೇಕು ಎಂದು ಹಗಲಿರುಳು ಸೈನಿಕರಂತೆ ಸೇವೆಸಲ್ಲಿಸುತ್ತಿರುವ ಭಗವಂತನ ಪ್ರೀತಿಗೆ ಪಾತ್ರರಾದ ವೈದ್ಯರಿಗೆ, ಶುಚಿತ್ವ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಆರಕ್ಷಣೆ ನೀಡುತ್ತಿರುವ ಪೊಲೀಸ್ ಇಲಾಖೆಗೆ, ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ಸಾಮೂಹಿಕವಾಗಿ ನಗರದ ಹಳೆಪೇಟೆ ಬಂಧುಗಳಿಂದ ಚಪ್ಪಾಳೆ ತಟ್ಟುವ, ಜಾಗಟೆ ಬಾರಿಸುವ, ಶಂಖ ಊದುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ ಹಿರಿಯರಾದ ಕೋನೇರಾಚಾರ್ಯ ಅವರು, ಕೊರೊನಾ ತೊಲಿಗಿಸಲು ಹಗಲಿರಳು ದುಡಿಯುತ್ತಿರುವ ಆರೊಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ, ಪೌರ ಕಾರ್ಮಿಕರು, ಮಾಧ್ಯಮದವರು ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಅಗತ್ಯವಿದೆ.
ಅವರೆಲ್ಲ ಜೀವದ ಹಂಗು ತೊರೆದು ದೇಶದ ಸೈನಿಕರಂತೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ನೀಡಿದ ಸಲಹೆ ಸೂಚನೆಯಂತೆ ನಾವೆಲ್ಲ ಪಾಲನೆ ಮಾಡುವದು ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶಾಮಾಚಾರ್ಯ, ಕಲ್ಲಪ್ಪ ಮಾಳಗಿ, ನಾರಾಯಣ ಪತ್ತಾರ, ಬಾಹುರಾವ, ಮಲ್ಲಿಕಾರ್ಜುನ ಹೂಗಾರ, ಮಹೇಶ, ಪರಶುರಾಮ, ಶ್ರೀದೇವಿ ಸಗರ, ಮತ್ತು ಮಕ್ಕಳು ಇದ್ದರು.

ಶಹಾಪುರ ನಗರದ ಚರಬಸವೇಶ್ವರ ನಗರ, ಬಸವೇಶ್ವರ ನಗರ, ಗುತ್ತಿಪೇಟೆ, ಜಾಲಗಾರ ಮೊಹಲ್ಲಾ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಜನರು ಸಂಜೆ ಮನೆಯಿಂದ ಹೊರ ಬಂದು ಪ್ರಧಾನಿ ಮೋದಿ ನೀಡಿದ ಕರೆ ಮೇರೆಗೆ ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ ಎಲ್ಲರಿಗೂ ಚಪ್ಪಾಳೆ ಮತ್ತು ಜಾಗಟೆ, ಗಂಟೆ ಬಾರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.