ಒತ್ತಡ ನಿರ್ವಹಣೆಗೆ ಜೀವನ ಕೌಶಲ್ಯ ಅರಿಯಿರಿ
ಯಾದಗಿರಿ: ವೈಜ್ಞಾನಿಕತೆ ಹಾಗೂ ಆಧುನಿಕತೆಯ ಬೆನ್ನು ಬಿದ್ದಿರುವ ಮನುಷ್ಯರಿಗೆ ಮಾನಸಿಕ ಒತ್ತಡವೆಂಬ ಮಹಾಮಾರಿ ಹೆಗಲೇರಿದ್ದು ಇದರಿಂದ ಕ್ರಿಯಾಶೀಲತೆ, ಚಟುವಟಿಕೆಗಳು ಕುಂಠಿತಗೊಳ್ಳಲು ಕಾರಣವಾಗಿವೆ ಆದ್ದರಿಂದ ಒತ್ತಡದಿಂದ ಮುಕ್ತರಾಗುವತ್ತ ಹೆಚ್ಚು ಗಮನಹರಿಸಬೇಕು ಎಂದು ಪ್ರಾಚಾರ್ಯ ರಘುನಾಥರಡ್ಡಿ ಪಾಟೀಲ್ ಹೇಳಿದರು.
ನಗರದ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಜೀವನ ಕೌಶಲ್ಯ ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯಿಂದ ಎಷ್ಟೋ ಅನುಕೂಲಗಳಾಗಿದ್ದರೂ ಅದರ ಅಡ್ಡ ಪರಿಣಾಮಗಳಾಗಿ ಮನುಷ್ಯರ ಬದುಕಿನಲ್ಲಿ ಸಂಕಷ್ಟ ಸೃಷ್ಟಿಸಿದೆ. ಇದನ್ನು ನಿರ್ವಹಿಸಲು ಎಲ್ಲರೂ ಒತ್ತಡ ಮುಕ್ತರಾಗಬೇಕು ಒತ್ತಡದಿಂದ ಮುಕ್ತಿ ಹೊಂದಲು ಜೀವನ ಕೌಶಲ್ಯ ಅರಿಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ರಾ.ಸೇ.ಯೋ. ಅಧಿಕಾರಿ ಮಲ್ಲಯ್ಯ ಮಠಪತಿ, ಹಿರಿಯ ಉಪನ್ಯಾಸಕರಾದ ವೆಂಕಟರಾವ ಕುಲಕರ್ಣಿ, ಅಶೋಕ ಅವಂಟಿ, ಪ್ರಕಾಶರೆಡ್ಡಿ, ಎಸ್.ವಿ.ಪಾಟೀಲ್, ರಾಘವೇಂದ್ರ ರಡ್ಡಿ, ಯುವ ಸ್ಪಂದನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿಲ್ಪಾದೇವಿ, ರಮೇಶ, ವೆಂಕೋಬಾ, ಶಿಲ್ಪಾ ಹರಸೂರ, ಮರಿಲಿಂಗ ಭಾಗವಹಿಸಿದ್ದರು. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಮಲ್ಲಿಕಾರ್ಜುನ ಅಂಗಡಿ ಪ್ರಾಸ್ತವಿಕ ಮಾನತಾಡಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು.