ಜೆಡಿಎಸ್ ಪಕ್ಷದ ಮತ್ತೊಂದು ವಿಕೆಟ್ ಔಟ್?
ಮೈಸೂರು: ಐವತ್ತು ವರ್ಷದಿಂದ ರಾಜಕೀಯದಲ್ಲಿದ್ದೇನೆ. ಆದರೆ ದೋಸ್ತಿ ಸರ್ಕಾರದಲ್ಲಿ ನನಗಿಷ್ಟದ ಖಾತೆ ಸಿಗಲಿಲ್ಲ. ಪುತ್ರ ಹರೀಶಗೌಡನೇ ಅಬ್ಯರ್ಥಿ, MLC ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಹೇಳುತ್ತ ಹೋದರೆ ರಾಶಿ ಇದೆ. ರಾಜಕಾರಣದಿಂದ ನೊಂದಿದ್ದೇನೆ, ಸಾಕಿನ್ನು ರಾಜಕೀಯ ಎಂದು ಹೇಳುವ ಮೂಲಕ ಮಾಜಿ ಸಚಿವ , ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಯಾರ ಹಂಗಿನಲ್ಲೂ ಬದುಕು ನಡೆಸಿಲ್ಲ, ನನಗೆ ಯಾರೂ ರಾಜಕೀಯ ಗುರುಗಳೂ ಇಲ್ಲ. ದೇವೇಗೌಡರು, ಕುಮಾರಸ್ವಾಮಿ, ಸಿದ್ಧರಾಮಯ್ಯ ಯಾರಿಂದಲೂ ನಯಾಪೈಸೆಯ ಸಹಾಯ ಆಗಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಕಿಡಿಕಾರಿದ್ದಾರೆ.
ನೂತನ ಸಿಎಂ ಯಡಿಯೂರಪ್ಪ ಸದನದಲ್ಲಿ ಲೇಖಾನುದಾನ ಮತ್ರು ಧನವಿನಿಯೋಗ ವಿಧೇಯಕ ಮಂಡಿಸುವ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿಧೇಯಕದ ಪರ ದನಿಗೂಡಿಸಿದ್ದರು. ಇದೀಗ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.