ಸಯ್ಯದ್ ಚಾಂದಸಾಬ ಫೂಲಛಡಿ ಅವರ ವ್ಯಕ್ತಿತ್ವ ಮತ್ತು ಸಾಧನೆ
‘ಸಮನ್ವಯ ಚೇತನ’ ಪುಸ್ತಕ ಬಿಡುಗಡೆ’
ಗೋ ಹತ್ಯೆ ಹೆಸರಿನಲ್ಲಿ ನರಬಲಿ ಡಾ.ಅಂಬಲಿಗಿ ಆರೋಪ
ಯಾದಗಿರಿ,ಶಹಾಪುರ: ಭಾವೈಕ್ಯತೆಯ ತಾಣ ಕಲ್ಯಾಣ ಕರ್ನಾಟಕವಾಗಿದೆ. ಜಾತಿಯ ಹಾಗೂ ಧರ್ಮದ ಸೋಂಕು ಇಲ್ಲದೆ ನಾವೆಲ್ಲರೂ ಸೋದರತ್ವದ ಭಾವನೆಯಲ್ಲಿ ಕಾಲ ಕಳೆಯುತ್ತಿದ್ದೆವೆ ಎನ್ನುವದಕ್ಕೆ ಚಾಂದಸಾಬ್ ಮೇಸ್ಟ್ರು ನಮ್ಮೆಲ್ಲರಿಗೆ ಪ್ರೇರಣೆ ಹಾಗೂ ದಾರಿ ದೀಪವಾಗಿದ್ದಾರೆ ಎಂದು ಸಾಹಿತಿ ಡಾ.ಕಾಶಿನಾಥ ಅಂಬಲಗಿ ಹೇಳಿದರು.
ಇಲ್ಲಿನ ಚರಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸಯ್ಯದ ಚಾಂದಸಾಬ್ ಇನಾಮದಾರ (ಫೂಲ್ ಛಡಿ) ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಸಂಪಾದಿಸಿದ “ಸಮನ್ವಯ ಚೇತನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಜ್ಞಾ ಪೂರ್ವಕವಾಗಿ ಮತ್ತೊಂದು ಜನಾಂಗವನ್ನು ಎತ್ತಿಕಟ್ಟಿ ದ್ವೇಷದ ವಿಷ ಬೀಜ ಬಿತ್ತುವುದು. ಪ್ರಶ್ನೆ ಕೇಳುವುದನ್ನು ದೇಶದ್ರೋಹ ಎನ್ನುವ ಆತಂಕಕಾರಿ ಬೆಳವಣಿಗೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೂಡಿಸುತ್ತಿವೆ. ನಾವೆಲ್ಲರೂ ಇನ್ನಷ್ಟು ಜಾಗೃತರಾಗಿರಬೇಕು.
ಗೋ ಹತ್ಯೆ ಹೆಸರಿನಲ್ಲಿ ನರಬಲಿಯಾಗುತ್ತಿದೆ. ನಾವು ಊಟ ಮಾಡುವ ಆಹಾರವನ್ನು ಮತ್ತೊಬ್ಬರು ಕೇಳಿ ತಿನ್ನುವಂತೆ ಆಗಿದೆ. ಕೋಮುವಾದಿಗಳು ಮನಸ್ಸುಗಳನ್ನು ಒಡೆದು ಚೂರು ಮಾಡುತ್ತಿದ್ದಾರೆ. ಕೂಡಿಬಾಳುವ ಬದುಕಿಗೆ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದೇವೆ ಎನಿಸುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಯ್ಯದ್ ಚಾಂದಸಾಬ ಸಮನ್ವಯ ವ್ಯಕ್ತಿತ್ವದೊಂದಿಗೆ ಸರ್ವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಕೃತಿ ಬಗ್ಗೆ ಮಾತನಾಡಿದ ಕಲಬುರ್ಗಿ ಕೇಂದ್ರದ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ನಾವೆಲ್ಲರೂ ವಿನಯ ಹಾಗೂ ಹಿರಿಯರ ಮಾತು ಕೇಳುತ್ತಿಲ್ಲವಾಗಿದ್ದರಿಂದ ದಾರಿ ತಪ್ಪಿದ ಮಕ್ಕಳಾಗುತ್ತಿದ್ದೇವೆ.
ಜಾತಿ, ಧರ್ಮ ಹಾಗೂ ಭಾಷೆಯನ್ನು ಮೀರಿ ಬದುಕುವ ಕಲೆಯನ್ನು ಅಣ್ಣ ಬಸವಣ್ಣನವರು ನಮಗೆ ತಿಳಿಸಿ ಕೊಟ್ಟರೆ, ಇಂದು ಎಲ್ಲದಕ್ಕಿಂತ ಸಂಬಂಧವೇ ದೊಡ್ಡದು ಎಂಬುವುದರ ಹೆಗ್ಗುರುತಿನ ಫಲವಾಗಿ ಫೂಲ್ ಛಡಿಯ ಚಾಂದಪಾಶ ಮೇಸ್ಟ್ರು ಸಮನ್ವಯದ ಚೇತನಕ್ಕೆ ಸಾಕ್ಷಿಯಾಗಿದ್ದಾರೆ.
ಜನರನ್ನು ಒಂದುಗೂಡಿಸುವುದು ದೇವರನ್ನು ಬೆಂಬಿಲಿಸಿದಂತೆ. ದೇವರು ಮತ್ತು ಗುರು ಇಬ್ಬರಲ್ಲಿ ಯಾರು ಶ್ರೇಷ್ಟರು ಎನ್ನುವಾಗ ದೇವರು ಇರುವಿಕೆ ಅರಿವು ಮೂಡಿಸಿದವರು ಗುರು ಆಗಿದ್ದಾರೆ. ಆದರಿಂದ ದೇವರಿಗಿಂತ ಗುರು ದೊಡ್ಡವರು ಆಗಿದ್ದಾರೆ. ಆದರೆ ಈಗ ಹಿಂಸೆಯನ್ನು ಧ್ಯಾನಿಸುವ ಕಾಲದಲ್ಲಿ ಮತ್ತು ಪರಸ್ಪರ ಅನುಮಾನ ಹುಟ್ಟಿಸುವ ಗಳಗೆಯನ್ನು ತೊಡೆದು ಹಾಕಲು ಇನ್ನಷ್ಟು ಚಾಂದಸಾಬ್ ನಂತಹ ಮೇಸ್ಟ್ರು ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸಮನ್ವಯ ಚೇತನ ಪುಸ್ತಕ ಸಂಪಾದಕ ರಾಘವೇಂದ್ರ ಹಾರಣಗೇರಾ, ವೇ.ಮೂ.ಬಸವಯ್ಯ ಶರಣರು, ಚಂದಾಹುಸೇನಿ ದರ್ಗಾದ ಸಯ್ಯದ ಹುಸೇನಿ, ಸಯ್ಯದ ಷಾ ಮಹಿಬೂಬು ಹುಸೇನಿ, ಕಲ್ಯಾಣದಯ್ಯ ಸ್ವಾಮಿ, ಸಂಸ್ಥೆಯ ಆಡಳಿತಾಧಿಕಾರಿ ಭೀಮಣ್ಣಗೌಡ ಇಟಗಿ, ಕಾಶಿನಾಥರಡ್ಡಿ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಪ್ರಗತಿಪರ ಚಿಂತಕ ರಾಹುಲ ಬೆಳಗಲಿ, ಗುಂಡಪ್ಪ ತುಂಬಿಗಿ, ಸಾಹಿತಿಗಳಾದ ಸಿದ್ರಾಮ ಹೊನ್ಕಲ್, ಚಂದ್ರಕಾಂತ ಕರದಳ್ಳಿ, ರವಿ ಹಿರೇಮಠ, ಸಿದ್ದಲಿಂಗಪ್ಪ ಆನೇಗುಂದಿ, ಶಿವಣ್ಣ ಇಜೇರಿ, ಗುರುಬಸವಯ್ಯ ಗದ್ದುಗೆ, ಸಣ್ಣ ನಿಂಗಪ್ಪ ನಾಯ್ಕೋಡಿ, ಆನಂದ ಸಾಸನೂರ, ಶಿವರಂಜನ ಸತ್ಯಂಪೇಟೆ, ಡಾ.ಮಹೇಶ ಗಂವ್ಹಾರ, ಪ್ರಾಚಾರ್ಯ ಸಿದ್ದಲಿಂಗಣ್ಣ ಸಾಹು, ಧರ್ಮಣ್ಣಗೌಡ ಹುಲಕಲ್, ಅನೀತಾ ಪಾಟೀಲ್, ಸಿದ್ದಣ್ಣ ಮಾನಸೂಣಗಿ, ಶುಭಲಕ್ಷ್ಮಿ ಸಿದ್ದಯ್ಯ ಸ್ವಾಮಿ ಕನ್ಯಾಕೊಳ್ಳೂರ, ಡಾ.ಶೈಲಜಾ ಬಾಗೇವಾಡಿ, ಹಣಮಂತಿ ಗುತ್ತೇದಾರ, ಭಾಗ್ಯಶ್ರೀ ದೊರೆ, ಬಸವರಾಜ ಸಿನ್ನೂರ ಇದ್ದರು.