ಇತಿಹಾಸ ಕುರಿತು ವಿದ್ಯಾರ್ಥಿಗಳಿಗೆ ಜ್ಞಾನ ಅಗತ್ಯ-ಹಾರಣಗೇರಾ
ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ತಾಣ ಸಗರಾದ್ರಿ ಬೆಟ್ಟ- ಬಡಿಗೇರ
ಯಾದಗಿರಿ, ಶಹಾಪುರಃ ನಗರದ ಬೆಟ್ಟದ ಪರಿಸರದಲ್ಲಿರುವ ಪ್ರಮುಖ ಐತಿಹಾಸಿಕ ಕೋಟೆ, ಶಾಸನಗಳು, ದೇವಾಲಯಗಳು, ತೋಪುಗಳು, ವಿವಿಧ ಸ್ಮಾರಕಗಳು ಮುಂತಾದವು ಐತಿಹಾಸಿಕ ಸಾಂಸ್ಕøತಿಕ ಪರಂಪರೆಯ ತಾಣವೇ ಈ ಸಗರಾದ್ರಿ ಬೆಟ್ಟವಾಗಿದೆ ಎಂಬುದನ್ನು ಧೃಢೀಕರಿಸುತ್ತವೆ ಎಂದು ಜೇವರ್ಗಿಯ ಮಹಾಲಕ್ಷ್ಮೀ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಧರ್ಮಣ್ಣ ಬಡಿಗೇರ ಅಭಿಪ್ರಾಯಪಟ್ಟರು.
ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಶಹಾಪುರ ಬೆಟ್ಟದ ಕೋಟೆ ಹಾಗೂ ಸ್ಮಾರಕಗಳ ವೀಕ್ಷಣೆ ಮತ್ತು ವನಭೋಜನ ಕಾರ್ಯಕ್ರಮದಲ್ಲಿ ಶಹಾಪುರದ ಕೋಟೆಗಳು ಮತ್ತು ಸ್ಮಾರಕಗಳು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸಗರಾದ್ರಿ ಎಂಬ ಹೆಸರು ಬರಲು ಕಾರಣ ಈಗಿನ ಶಹಾಪುರಕ್ಕೆ ಹಿಂದೆ ಸಗರವೆಂದು ಕರೆಯುತ್ತಿದ್ದರು. ಸಗರಾಯ ಎಂಬ ಚಕ್ರವರ್ತಿ ಇಲ್ಲಿ ಆಡಳಿತ ನಡೆಸುತ್ತಿರುವ ಕಾರಣ ಇದಕ್ಕೆ ಸಗರ ಎಂಬ ಹೆಸರಿತ್ತು. ಹೀಗಾಗಿ ಇಲ್ಲಿನ ಗುಡ್ಡಗಾಡು ಬೆಟ್ಟ ಪ್ರದೇಶಕ್ಕೆ ಸಗರಾದ್ರಿ ಎಂತಲೂ ಕರೆದಿದ್ದಾರೆ ಎಂದು ತಿಳಿಸಿದರು.
ಸಗರಾದ್ರಿ ಬೆಟ್ಟದ ಸ್ಮಾರಕಗಳ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ಮಾಡುತ್ತಿರುವ ಸಾಯಿಬಾಬಾ ಅಣಬಿ ಮಾತನಾಡಿ, ಸಗರನಾಡಿನ ಹಾಗೂ ಸಗರಾದ್ರಿ ಬೆಟ್ಟದ ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆಯನ್ನು ಕುರಿತು ಅನೇಕ ನಿರ್ಧೇಶನಗಳ ಮೂಲಕ ತಮ್ಮ ಅಧ್ಯಯನದ ಫಲಿತಗಳನ್ನು ವಿಶ್ಲೇಷಿಸಿದರು.
ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಮಾತನಾಡಿ, ಸಗರ ಚಕ್ರವರ್ತಿ, ಸಗರನಾಡು ಮತ್ತು ಸಗರಾದ್ರಿಯ ಬೆಟ್ಟದ ಇತಿಹಾಸವು ತುಂಬಾ ರೋಚಕತೆಯಿಂದ ಕೂಡಿದೆ. ಇಲ್ಲಿನ ವಿವಿಧ ಸ್ಮಾರಕಗಳು ನಾಡಿನ ಚರಿತ್ರೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದರು.
ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಮಾತನಾಡಿ, ಮಹತ್ವದ ಚಾರಿತ್ರಿಕ ದಾಖಲೆಗಳು ಮತ್ತು ನಾಡಿನ ಉಜ್ವಲ ಸಾಂಸ್ಕøತಿಕ ಪರಂಪರೆಗೆ ಮೂಕ ಸಾಕ್ಷಿಗಳಾಗಿರುವ ಈ ಬೆಟ್ಟದ ಪರಿಸರದಲ್ಲಿನ ಕೋಟೆಗಳು, ಶಾಸನಗಳು, ವಿವಿಧ ಸ್ಮಾರಕಗಳ ಕುರಿತು ಸ್ಥಳೀಯ ಇತಿಹಾಸದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂಬ ಉದ್ಧೇಶದಿಂದ ಈ ಐತಿಹಾಸಿಕ ಸ್ಮಾರಕಗಳ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಬೆಟ್ಟದಲ್ಲಿರುವ ಮಂದಾಕಿನಿ, ತಾವರೆಕೆರೆ, ವಿವಿಧ ಬಾವಿಗಳು, ಕೊಳಗಳು ಮುಂತಾದವು ಇಲ್ಲಿನ ಜಲಮೂಲಗಳಿಗೆ ಸಾಕ್ಷಿಯಾಗಿವೆ. ಮತ್ತು ಈ ಜಲಮೂಲಗಳು ಬೆಟ್ಟದ ಜೀವ ಪರಿಸರದ ಉಳಿವಿಕೆಗೆ ಕಾರಣವಾಗಿವೆ. ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಊರಿನ ಇತಿಹಾಸ ಗೊತ್ತಿರಬೇಕು. ಆ ಕಾರಣಕ್ಕೆ ವಿದ್ಯಾರ್ಥಿಗಳು ಇಲ್ಲಿನ ಕೋಟೆ, ದೇವಸ್ಥಾನ ಇತರೆ ಇತಿಹಾಸ ಕುರಿತು ಜ್ಞಾನ ಹೊಂದಿರಬೇಕು ಅಲ್ಲದೆ ಸರಂಕ್ಷಣೆ ಹೊಣೆಯು ತಮ್ಮ ಮೇಲಿದೆ ಎಂದರು.
ಇಂತಹ ಐತಿಹಾಸಿಕ ಬೆಟ್ಟ ಹಾಗೂ ವಿಶಿಷ್ಟ ಜೀವ ಪರಿಸರ ವ್ಯವಸ್ಥೆ ಉಳಿಸಿ ಬೆಳೆಸಲು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಪರಿಸರ ಸಂರಕ್ಷಣೆ ಇಲಖೆಗಳು ಸೂಕ್ತ ರಕ್ಷಣಾ ಕ್ರಮಗಳು ಕೈಗೊಳ್ಳಬೇಕಿದೆ ಎಂದರು.
ಎನ್.ಎಸ್.ಎಸ್ ಅಧಿಕಾರಿಗಳಾದ ಸಂಗಣ್ಣ ದಿಗ್ಗಿ, ಶುಭಲಕ್ಷ್ಮೀ ಬಬಲಾದಿ, ಉಪನ್ಯಾಸಕರಾದ ಸತೀಶ ತುಳೇರ, ಗಂಗಣ್ಣ ಹೊಸ್ಮನಿ, ದೇವೆಂದ್ರಪ್ಪ ಆಲ್ದಾಳ, ಅಶೋಕ ಶಹಬಾದಿ ಮುಂತಾದವರು ಇದ್ದರು.





