ಶಿಕ್ಷಕರೆಂದರೆ ರೋಲ್ ಮಾಡೆಲ್ ಆಗಿರಬೇಕು-ಬಸವಕುಮಾರ ಪಾಟೀಲ್
ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ
ಶಿಕ್ಷಕ ಸಾಮಾಜಿಕ ಬದುಕಿನ ಶಕ್ತಿ-ನ್ಯಾಯವಾದಿ ಪಾಟೀಲ್
ಯಾದಗಿರಿ, ಶಹಾಪುರಃ ಸಮಾಜದಲ್ಲಿ ಶಿಕ್ಷಕರದ್ದು ಬಹು ದೊಡ್ಡ ಪಾತ್ರವಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಶಿಕ್ಷಕರೆಂದರೆ ಪ್ರತಿಯೊಬ್ಬರಿಗೂ ಮಾದರಿ ವ್ಯಕ್ತಿಯಾಗಿರಬೇಕು. ವಿದ್ಯಾರ್ಥಿಗಳಿಗೆ ಆದರ್ಶರಾಗಿರಬೇಕು ಎಂದು ಬೀದರಿನ ನ್ಯಾಯವಾದಿ ಬಸವಕುಮಾರ ಪಾಟೀಲ್ ತಿಳಿಸಿದರು.
ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕದ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು
ಶಿಕ್ಷಕ ಎಂದರೆ ದೇಶದ ಸಾಮಾಜಿಕ ಬದುಕಿನ ಅಮೋಘ ಶಕ್ತಿ. ಶಿಕ್ಷಕರು ಪ್ರೇರಣಾ ಶಕ್ತಿಯಾಗಿದ್ದಾರೆ. ಮಕ್ಕಳಿಗೆ ಪಠ್ಯಾಭ್ಯಾಸಗಳೊಂದಿಗೆ ಸಾಮಾಜಿಕ ಚಿಂತನೆಗಳ ಮನವರಿಕೆ ಮಾಡಬೇಕು. ಬದುಕಿನ ರಹದಾರಿಗಳನ್ನು ಮನನ ಮಾಡಿಸಬೇಕು.
ಶಿಕ್ಷಕರ ವೃತ್ತಿ ಬಗ್ಗೆ ಕೀಳರಿಮೆ ಬೇಡ. ಓರ್ವ ವೈದ್ಯ ಬೆಳಗಾದರೆ ಓರ್ವ ರೋಗಿಗಳೊಡನೆ ಮಾತನಾಡಬೇಕಾಗುತ್ತದೆ. ಓರ್ವ ಇಂಜೀನಿಯರ ಬೆಳಗಾದರೆ ಸಿಮೆಂಟ್ ಕಾಂಕ್ರೀಟ್ ಜೊತೆ ಮಾತನಾಡಬೇಕಾಗಿದೆ. ಆದರೆ ಮಕ್ಕಳ ಜೊತೆ ಮಾತನಾಡುವ ಬಹು ದೊಡ್ಡ ಭಾಗ್ಯ ಶಿಕ್ಷಕರಿಗಿದೆ.
ಶಿಕ್ಷಕ ಎಂದರೆ ಬರಿ ಓದು ಬರಹ ಕಲಿಸುವ ಯಂತ್ರವಲ್ಲ. ಸತ್ಯ, ನಿಷ್ಠೆ, ಗುಣ ಶೀಲ, ಕ್ರೀಯಾಶೀಲತೆ, ಚಿಂತನಾಶೀಲ ಸಮ ಸಂಸ್ಕøತಿ ರಾಯಭಾರಿ ಸೇರಿದಂತೆ ಇತರೆ ಪ್ರಮುಖ ಗುಣಗಳನ್ನು ಹೊಂದಿದ ಚೈತನ್ಯ ಮೂರ್ತಿಯೇ ಶಿಕ್ಷಕ ಎಂಬುದು ಮರೆಯಬೇಡಿ.
ಯಾವ ಶಿಕ್ಷಕನ ಬೋಧನೆ ಮಾಡುವಾಗ ಮಕ್ಕಳು ನಗುವಿನೊಂದಿಗೆ ಮಂತ್ರಮುಗ್ಧರಾಗಿ ಶಿಕ್ಷಕ ಹೇಳುವದನ್ನೆ ಗಮನಿಸುತ್ತಿರುತ್ತಾರೋ ಅಂತಹ ಶಿಕ್ಷಕ ನಿರ್ವಹಿಸುತ್ತಿರುವ ಕರ್ತವ್ಯ ಸಾರ್ಥಕ ಪಡೆದಂತೆ.
ಶಿಕ್ಷಕರು ಕ್ಲಾಸ್ ರೂಂಗೆ ಪ್ರವೇಶ ಮಾಡಿದರೆ, ಮಕ್ಕಳ ಹೃದಯದಲ್ಲಿ ಪ್ರವೇಶಿಸಿದಂತಿರಬೇಕು. ಮಕ್ಕಳ ಹೃದಯವನ್ನು ತಟ್ಟಿ ಪಾಠ ಮಾಡುವ ಕಲೆ ಶಿಕ್ಷಕನಿಗಿರಬೇಕು. ಕಾಯಕದಲ್ಲಿ ನಿರತನಾದರೆ ಲಿಂಗಪೂಜೆಯಾದರೂ ಮರೆಯಬೇಕು ಎಂದು ವಿಶ್ವಗುರು ಬಸವಣ್ಣ ಹೇಳಿದ್ದಾರೆ.
ಹಾಗೇ ಶಿಕ್ಷಕರಾದವರು ವರ್ಗದಲ್ಲಿರುವ ಎಲ್ಲಾ ಮಕ್ಕಳು ತನ್ನ ಮಕ್ಕಳಂತೆ ಕಾಣಬೇಕು ಇದು ಉತ್ತಮ ಶಿಕ್ಷಕರ ಗುಣ ಲಕ್ಷಣ. ತಮ್ಮ ಸಂಪೂರ್ಣ ಜ್ಞಾನ ಭಂಡಾರವನ್ನು ಮಕ್ಕಳಿಗೆ ಧಾರೆ ಎರೆದು ಅವರನ್ನು ಭಾರತೀಯ ಸತ್ಪ್ರಜೆಯಾಗಿಸಬೇಕು.
ಮಕ್ಕಳಲ್ಲಿ ದೇಶ ಪ್ರೇಮ, ದೇಶದ ಪ್ರಗತಿ ದೇಶಕ್ಕಾಗಿ ನಾವೇನು ಮಾಡಬೇಕು ಎಂಬುದನ್ನು ಪ್ರಥಮ ಹಂತದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಅಹಿಂಸೆ ಕುರಿತು ಬೋಧನೆ ಮಾಡಬೇಕು. ಅಹಿಂಸಾತ್ಮಕ ನಡೆ ಕಲಿಸಬೇಕು. ಶಿಕ್ಷಕನಾದವನು ನಿತ್ಯ ವಿದ್ಯಾರ್ಥಿಯಾಗಿರಬೇಕು. ಯಾವುದೇ ಬೋಧನೆ ಮಾಡುವ ಮೊದಲು ಕನಿಷ್ಟ ಎರಡು ತಾಸು ಆ ಕುರಿತು ತಯ್ಯಾರಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಿರಿಜೆಮ್ಮ ಸದಾಶಿವಪ್ಪಗೌಡ ರೊಟ್ನಡಗಿ ಮಾತನಾಡಿ, ಗುರುವಿನ ಸ್ಥಾನ ಮಹತ್ವದ್ದಾಗಿದೆ. ಗುರು ಇಲ್ಲದೆ ಏನನ್ನು ಸಾಧಿಸಲು ಅಸಾಧ್ಯ ಎಂದರು.
ಪೌರಾಯುಕ್ತ ಬಸವರಾಜ ಶಿವಪೂಜೆ ಮತ್ತು ತಾಪಂ ಇಓ ಪಂಪಾಪತಿ ಹಿರೇಮಠ ಮಾತನಾಡಿದರು. ವೇದಿಕೆ ಮೇಲೆ ತಾಪಂ ಹಂಗಾಮಿ ಅಧ್ಯಕ್ಷೆ ಲಕ್ಷ್ಮೀ ನಾಗರಾಜ ಮಡ್ಡಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಹಣಮಂತಪ್ಪ ನಾಟೇಕಾರ, ಬಿಸಿಯೂಟ ಸಹಾಯಕ ನಿರ್ದೇಶಕ ಬಿ.ಎಚ್.ಸೂರ್ಯವಂಶಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಯಪ್ಪಗೌಡ ಹುಡೇದ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಂಪಣ್ಣಗೌಡ ಪಾಟೀಲ್ ಸೇರಿದಂತೆ ಭೀಮಣ್ಣಗೌಡ ತಳೇವಾಡ, ಬಿಆರ್ಸಿ ರೇಣುಕಾ ಪಾಟೀಲ್, ಬಸ್ಸಮ್ಮ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಶೋಕ ಚೌದ್ರಿ ಇತರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಬಸವರಾಜ ಯಾಳಗಿ ಪ್ರಾಸ್ತಿವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಶಾಂತ ಯಾಳಗಿ ನಿರೂಪಿಸಿ ವಂದಿಸಿದರು.




