ಶಹಾಪುರದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ ನಾಗರಿಕರ ಆಕ್ರೋಶ
ಚರಂಡಿಯಲ್ಲೇ ಸಂಗ್ರಹಗೊಂಡ ನೀರು, ಡೆಂಗ್ಯು ಆತಂಕ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಹಳಿಸಗರ ಭಾಗದ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವ ಕಾರಣ, ಚರಂಡಿ ನೀರು ಸರಾಗವಾಗಿ ಮುಂದೆ ಹೋಗದೆ ಸ್ಥಳದಲ್ಲಿಯೇ ಸಂಗ್ರಹಗೊಂಡಿದ್ದು, ಗಬ್ಬು ವಾಸನೆ ಬೀರುತ್ತಿದೆ ಎಂದು ಬಡಾವಣೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಚರಂಡಿ ತುಂಬೆಲ್ಲ ಹೊಲಸು ನೀರು ಸಂಗ್ರಹಗೊಂಡ ಪರಿಣಾಮ ಬಡಾವಣೆಯಲ್ಲಿ ದುರ್ವಾಸನೆ ಬೀರುತ್ತಿರುವದರಿಂದ ಅನಾರೋಗ್ಯಕರ ವಾತಾವರಣ ಉಂಟಾಗಿದೆ. ಅಲ್ಲದೆ ಮಕ್ಕಳು ವೃದ್ಧರಿಗೆ ಡೆಂಗ್ಯು ಭೀತಿ ಉಂಟಾಗಿದೆ ಎಂದು ನಿವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಕುಂಚಿಕೊರವರ ಬಡಾವಣೆ ಸೇರಿದಂತೆ ಆಸರ್ ಮೊಹಲ್ಲಾ ಪ್ರದೇಶದ ಹಲವಡೆ ಮಕ್ಕಳಲ್ಲಿ ಡೆಂಗ್ಯು ಜ್ವರ ಉಲ್ಬಣವಾಗಿದೆ.
ಅದರಂತೆ ಈ ಪ್ರದೇಶದಲ್ಲೂ ಹಲವು ರೋಗಗಳ ಭೀತಿ ಎದುರಾಗಿದೆ. ನಗರಸಭೆ ನಿರ್ಲಕ್ಷದಿಂದ ಬಡಾವಣೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ನಗರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿ ನಾಗರಿಕರ ಸಮಸ್ಯೆ ಪರಿಹಾರಕ್ಕೆ ಸ್ಪಂಧನೆ ನೀಡುತ್ತಿಲ್ಲ.
ಇಡಿ ಬಡಾವಣೆ ರೋಗಯುಕ್ತವಾಗಿ ಮಾರ್ಪಾಡಾಗುತ್ತಿವೆ. ಯಾವುದೇ ಬಡಾವಣೆಯಲ್ಲಿ ರಾಶಿಗಟ್ಟಲೇ ತ್ಯಾಜ್ಯ ಬಿದ್ದಿರುವದು, ಹಂದಿಗಳ ತಾಣವಾಗಿರುವದು, ಗಬ್ಬು ವಾಸನೆ ಕಾಣಬಹುದು. ಹೀಗಾಗಿ ಜಿಲ್ಲಾಧಿಕಾರಿಗಳು ನಗರ ಪ್ರದೇಶ ಹಲವಡೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
—————–
ಹಳಿಸಗರ ಪ್ರದೇಶ ಸೇರಿದಂತೆ ಸಾಕಷ್ಟು ವಾರ್ಡ್ಗಳ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಚರಂಡಿ ಸ್ವಚ್ಛತೆಯಿಲ್ಲ. ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಸಾಗುವದಿಲ್ಲ. ಅಲ್ಲಿಯೇ ಸಂಗ್ರಹಗೊಂಡು ಗಬ್ಬು ವಾಸನೆ ಬೀರುತ್ತಿವೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಫಾಗಿಂಗ್ ಸಿಂಪಡಣೆ ಇಲ್ಲ. ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಎಲ್ಲಡೆ ಡೆಂಗ್ಯು ಉಲ್ಬಣ ಭೀತಿ ಎದುರಾಗಿದೆ.
-ಅಪ್ಪಣ್ಣ ದಶವಂತ ಮತ್ತು ಅಶೋಕ ನಗರಸಭೆ ಸದಸ್ಯ ಶಹಾಪುರ.