ಸಗರ ಯಲ್ಲಮ್ಮ ದೇವಸ್ಥಾನಃ ಮೂಲ ಸೌಕರ್ಯ ಕಲ್ಪಿಸುವಂತೆ ಭಕ್ತರ ಆಗ್ರಹ
ಯಾದಗಿರಿ, ಶಹಾಪುರಃ ಸಗರನಾಡಿನ ಆರಾಧ್ಯ ದೇವತೆಯಾದ ತಾಲೂಕಿನ ಸಗರ ಗ್ರಾಮದ ಯಲ್ಲಮ್ಮ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಕೂಡಲೇ ತಾಲೂಕು ಆಡಳಿತ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕೆಂದು ಭಕ್ತಾಧಿಗಳು ಆಗ್ರಹಿಸಿದ್ದಾರೆ.
ಜಾತ್ರಾ ಮಹೋತ್ಸವ ಸಮೀಪಿಸುತ್ತಿದ್ದು, ತಾಲೂಕು ಆಡಳಿತ ಕೂಡಲೇ ದೇವಸ್ಥಾನ ಪ್ರದೇಶದಲ್ಲಿ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ರಸ್ತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು.
ಗಡ್ಡಕ್ಕೆ ಬೆಂಕಿ ಹೊತ್ತಿದ್ದಾಗ ಬಾವಿ ತೋಡುವ ಕೆಲಸ ಮಾಡಬಾರದು ಎಂದು ಸ್ಥಳೀಯ ಮುಖಂಡ ನಾಗಣ್ಣಗೌಡ ಪಾಟೀಲ್ ಮನವಿ ಮಾಡಿದ್ದಾರೆ.
ವರ್ಷದಲ್ಲಿ ಎರಡು ಬಾರಿ ದೇವಿಯ ಜಾತ್ರೆ ನಡೆಯುತ್ತಿದ್ದು, ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಪ್ರತಿ ವರ್ಷ ಭಕ್ತಾಧಿಗಳಿಗೆ ಮೂಲ ಸೌಲಭ್ಯ ಕೊರತೆಯಿಂದಲೇ ನರಳುವಂತಾಗಿದೆ. ಈ ಬಾರಿಯಾದರೂ ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಸಕಲ ವ್ಯವಸ್ಥೆ ಕಲ್ಪಿಸಲಿ ಎಂದು ಒತ್ತಾಯಿಸಿದರು.
ಜಾತ್ರೆಗೂ ಮುಂಚೆ ದೇವಸ್ಥಾನಕ್ಕೆ ಹೋಗುವ ಬೆಟ್ಟದಡಿಯ ರಸ್ತೆ ಮತ್ತು ಸಗರದಿಂದ ದೇವಸ್ಥಾನಕ್ಕೆ ಹೋಗುವ ಮಾರ್ಗ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆಗೆ ನೀರಿನ ಟ್ಯಾಂಕ್ ನಿರ್ಮಾಣ, ಶೌಚಾಲಯ ಇತರೆ ವ್ಯವಸ್ಥೆ ಮುಂಜಾಗೃತವಾಗಿ ಕೈಗೊಳ್ಳಬೇಕು.
ಜಾತ್ರೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಭಕ್ತಾಧಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ತಾಲೂಕು ಆಡಳೀತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬಹುದೆ ಕಾದು ನೋಡಬೇಕು.




