ಹತ್ತಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಸಲಾದಪುರ ಆಗ್ರಹ
ಹತ್ತಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಸಲಾದಪುರ ಆಗ್ರಹ
ನೊಂದ ರೈತರಿಂದಲೇ ಹಣ ವಸೂಲಿ ಸಲಾದಪುರ ಆರೋಪ
ಶಹಾಪುರಃ ಕೊರೊನಾ ವೈರಸ್ ಹಾವಳಿ ಹಿನ್ನೆಲೆ ಲಾಕ್ ಡೌನ್ ನಿಯಮ ಜಾರಿಯಿಂದ ರೈತರು ಬೆಳೆದ ಹತ್ತಿ ಮಾರಾಟ ಮಾಡಲಾಗದೆ ಮನೆಯಲ್ಲಿಯೇ ಇಟ್ಟುಕೊಳ್ಳುವ ಸ್ಥಿತಿ ಎದುರಾಗಿತ್ತು. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗಿ, ಸರ್ಕಾರ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿತು. ಆದರೆ ಖರೀದಿ ಕೇಂದ್ರದಲ್ಲಿ ದಲ್ಲಾಳಿಗ ಹಾವಳಿ ಜಾಸ್ತಿಯಾಗಿದೆ. ರೈತರಿಂದ ಹತ್ತಿ ಖರೀದಿಗೆ ಪ್ರತಿಕ್ವಿಂಟಾಲ್ಗೆ ಇಂತಿಷ್ಟು ಎಂದು ಹಣ ವಸೂಲಿ ನಡೆಯುತ್ತಿದೆ ಎಂದು ರೈತ ಮುಖಂಡ ಶರಣಪ್ಪ ಸಲಾದಪುರ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿಯೇ ಶಹಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಹತ್ತಿ ಬೆಳೆಗಾರರಿರುವ ಕಾರಣ ಶಹಾಪುರ ಹೊರವಲಯದ ಕಲಬುರ್ಗಿ ಮಾರ್ಗದಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಸರ್ಕಾರ ಹತ್ತಿ ಖರೀದಿಸಲು ಸ್ಥಳೀಯ ಕೃಷಿ ಮಾರುಕಟ್ಟೆಯಿಂದ ನೊಂದಾಯಿತ ದೃಢೀಕರಣ ಪತ್ರ ಪಡೆಯಬೇಕಾಗಿರುವದು ನಿಯಮವಿದೆ. ಇದನ್ನೆ ಬಂಡವಾಳವಾಗಿ ಬಳಸಿಕೊಳ್ಳುವ ದಲ್ಲಾಳಿಗಳು ರೈತರಿಂದ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಹತ್ತಿ ಮಾರಾಟಕ್ಕೆ ಜಿಲ್ಲೆಯ ನಾಲ್ಕು ತಾಲೂಕಿನ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಲುಗಟ್ಟಿ ದಿನಗಟ್ಟಲೇ ರೈತರು ಕಾಯಬೇಕಾದ ಸ್ಥಿತಿ ಇದೆ. ರೈತರ ಮುಗ್ಧತೆ ಬಳಸಿಕೊಂಡು ದಲ್ಲಾಳಿಗಳು ಹಣ ವಸೂಲಿ ಮಾಡುತ್ತಿದ್ದು, ಕೂಡಲೇ ಜಿಲ್ಲಾಡಳಿತ ಈ ಕುರಿತು ಪರಿಶೀಲನೆ ನಡೆಸಿ ಸೂಕ್ರ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಲ್ಲದೆ ಸುರಪುರ ಭಾಗದಲ್ಲಿಯೂ ಹತ್ತಿ ಖರೀದಿ ಕೇಂದ್ರ ತೆರಯಬೇಕು, ಜಿಲ್ಲೆಯಲ್ಲಿ ಶಹಾಪುರದಲ್ಲಿ ಮಾತ್ರ ಹತ್ತಿ ಖರೀದಿ ಕೇಂದ್ರ ತೆರೆದಿದ್ದು, ರೈತರು ಸಾಲುಗಟ್ಟಿ ದಿನಗಟ್ಟಲೇ ನಿಲ್ಲುವ ಸ್ಥಿತಿ ಬಂದಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಕೂಡಲೇ ಅಸಮರ್ಪಕ ವ್ಯವಸ್ಥೆಗೆ ತಿಲಾಂಜಲಿ ಇಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕು ಇಲ್ಲವಾದಲ್ಲಿ ರೈತರೊಂದಿಗೆ ಬೀದಿಗೆ ಇಳಿದು ಹೋರಾಟ ನಡೆಸುವದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.