ಪ್ರಗತಿಪರ ಚಿಂತಕ, ನಿಷ್ಟುರವಾದಿ ಟಿ.ಶಶಿಧರ ಇನ್ನಿಲ್ಲ
ವೈಚಾರಿಕ ವಿಚಾರವಾದಿ ಶಶಿಧರ ವಿಧವಶ
ಟಿ.ಶಶಿಧರ ಸಗರನಾಡಿನ ವಿಚಾರವಾದಿಗಳಲ್ಲಿ ಒಬ್ಬರು. ಉತ್ತಮ ಚಿಂತಕರು, ಸಾಕಷ್ಟು ಭಾರಿ ವಿಷಯಾಧರಿತ ಚರ್ಚೆಗಳನ್ನು ಮಾಡಿದ್ದೇವೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರ ವಿಚಾರಗಳು, ಉತ್ತಮ ಚಿಂತನೆಗಳನ್ನು ಬಿತ್ತುತ್ತಿದ್ದ, ಸ್ನೇಹಪರ ಜೀವಿಯಾಗಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಸಿದ್ರಾಮಯ್ಯ ಮತ್ತು ಮಾಜಿ ಸಚಿವ ಮಹಾದೇವಪ್ಪನವರ ಅಪ್ಪಟ ಅಭಿಮಾನಿಯೂ ಆಗಿದ್ದ ಸಹೋದರ ಟಿ.ಶಿಶಿಧರ ಇಂದು ನಮ್ಮೆಲ್ಲರ ಮಧ್ಯ ಇಲ್ಲ ಎಂದರೆ ಹೃದಯ ಭಾರವಾಗುತ್ತದೆ.
ಸದಾ ಹೋರಾಟ ಮನೋಭಾವ ಹೊಂದಿದ್ದ, ಉತ್ತಮ ಹೋರಾಟಗಾರರು ಆಗಿದ್ದ, ಓರ್ವ ಚಿಂತಕನನ್ನು ಕೊರೊನಾ ತೆಕ್ಕೆಗೆ ಬಡಿದುಕೊಂಡು ಹೋಗಿರವದು ದುರ್ವಿಧಿ. ಟಿ.ಶಶಿಧರ ಇನ್ನಿಲ್ಲ ಎಂದು ಬರೆಯಲು ಭಾರವೆನಿಸುತ್ತಿದೆ. ಏನು ಬರೆಯಬೇಕು ಎಂಬುದು ಹೊಳೆಯುತ್ತಿಲ್ಲ. ಅವರಿನ್ನು ನಮ್ಮ ಒಡನಾಟದಲ್ಲಿ ಇದ್ದಾರೆ ಎಂದೆನಿಸುತ್ತದೆ. ಕೆಲವೊಂದು ವಿಚಾರದಲ್ಲಿ ಭಿನ್ನತೆ ಕಂಡುಕೊಂಡರು ಅದು ವಿಚಾರ ಸಂವಾದಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದ ನನ್ನನ್ನ ತಮ್ಮನಂತೆ ಕಾಣುತ್ತಿದ್ದವರು, ಕೆಲವೊಂದು ಸುದ್ದಿ ಸಮಾಚಾರಗಳನ್ನು ತಕ್ಷಣಕ್ಕೆ ಫೋನಾಯಿಸಿ ತಿಳಿಸುತ್ತಿದ್ದರು.
ಮೊನ್ನೆ ಮೊನ್ನೆ ಲಾಕ್ ಡೌನ್ ಸಂದರ್ಭ ಗೊಂದಲ ಉಂಟಾದಾಗ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ತಕ್ಷಣ ಫೋನಾಯಿಸಿ ನನಗೆ ವಿಷಯ ತಿಳಿಸಿದ್ದರು. ಯಾದಗಿರಿ ಜಿಲ್ಲೆ ಲಾಕ್ ಡೌನ್ ಕುರಿತು ಸ್ಪಷ್ಟನೆ ಪಡೆದು ನನಗೆ ತಿಳಿಸಿದ್ದರು. ಶಶಿಧರ ಅವರು ಡಿಸಿಗೆ ಕರೆ ಮಾಡಿರುವ ಕುರಿತ ಸುದ್ದಿ ಮಾಡಿದ್ದೆ. ಜನಪರ ಕಾಳಜಿ, ಸಾಮಾಜಿಕ ಹಿತ ಬಯಸುವ ವ್ಯಕ್ತಿ ಇಂದು ಇಲ್ಲವಾಗಿರುವದು ಸಗರನಾಡಿಗೆ ನಷ್ಟವೇ ಸರಿ.
ಅಲ್ಲದೆ ಅವರ ಉದಾತ್ತ ಆಲೋಚನೆಗಳು, ಮೂಢ ನಂಬಿಕೆ ಬಗ್ಗೆ ಮೂಡಿಸುವ ವಿಚಾರಗಳು, ದಲಿತರು, ಶೋಷಿತರ ಸಮಾಜದ ಕಟ್ಟಕಡೆಯ ಜನರ ಕಾಳಜಿ ಚಿಂತನೆ ಮಾಡುವ ವ್ಯಕ್ತಿ ಶಶಿಧರ ಆಗಿದ್ದರು. ಓರ್ವ ರಾಜಕೀಯ ಚಿಂತಕ, ಪ್ರಗತಿಪರವಾದಿಯಾಗಿದ್ದ ಅವರು ಉತ್ತಮ ವಾಗ್ಮೀ ಮತ್ತು ಬರಹಗಾರರು ಹೌದು.
ವೈಚಾರಿಕತೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು, ವೈಚಾರಿಕತೆ ಪುಸ್ತಕಾಲಯವೆಂದು ಪುಸ್ತಕದ ಅಂಗಡಿ ತೆರೆದಿದ್ದರೂ, ಕಳೆದ ಮೂರು ವರ್ಷದಿಂದ ಪುಸ್ತಕಾಲಾಯ ಅಂಗಡಿ ತೆರೆದಿದ್ದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಸಾಕಷ್ಟು ಜ್ಞಾನ ಹೊಂದಿದ್ದ ಅವರು ಸಾಕಷ್ಟು ಯುವಕರಿಗೆ ಮಾರ್ಗದರ್ಶಕರು ಆಗಿದ್ದರು. ಯಾವುದೇ ವಿಷಯವಿರಲಿ ನಿಷ್ಠುರವಾಗಿ ಖಂಡಿಸುತ್ತಿದ್ದರು. ನೇರನಡೆ ನುಡಿ ಅಳವಡಿಸಿಕೊಂಡಿದ್ದ ಅವರಿಗೆ ದೇವರ ಕರೆ ಬರಬಾರದಿತ್ತು. ಭಗವಾನ್ ಬುದ್ಧ ಅವರು ಕಂಡುಕೊಂಡ ದೇವರಲ್ಲಿ ಒಬ್ಬರು. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಒದಗಿಸಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ವಿನಯವಾಣಿ ಬಳಗ ಪ್ರಾರ್ಥಿಸುತ್ತದೆ.
ಕೊರೊನಾ ದೃಢಪಟ್ಟ ಹಿನ್ನೆಲೆ ಯಾದಗಿರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಟಿ.ಶಶಿಧರ. ಕಳೆದ ನಾಲ್ಕಾರು ದಿನದಿಂದ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ಹೆಚ್ಚಿನ ಚಿಕಿತ್ಸೆಗಾಗೊ ಕಲಬುಗಿಯ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಚಿಕಿತ್ಸೆಗೆ ಸ್ಪಂಧಿಸದೆ ಟಿ.ಶಶಿಧರ ಕೊನೆಯುಸಿರು ಎಳೆದಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
-ಮಲ್ಲಿಕಾರ್ಜುನ ಮುದನೂರ.
ಸಂಪಾದಕರು. ವಿನಯವಾಣಿ.
ತುಂಬಾ ದುಃಖದ ಸಂಗತಿ