ಸೋಮವಾರ ಸಂತ್ರಸ್ಥರಿಗೆ ಪರಿಹಾರ ತಲುಪಿಸಿ-ಸಚಿವ ಚವ್ಹಾಣ
ಸೋಮವಾರ ಸಂತ್ರಸ್ತರಿಗೆ ಪರಿಹಾರ ನೀಡಲು ಸಚಿವ ಚವ್ಹಾಣ ಸೂಚನೆ
ಯಾದಗಿರಿ : ಜಿಲ್ಲೆಯ ವಡಿಗೇರಾ ತಾಲೂಕಿನಲ್ಲಿ ಕೃಷ್ಣಾ – ಭೀಮಾ ನೆರೆ ಪ್ರವಾಹದಿಂದ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟದಲ್ಲಿದ್ದಾರೆ. ಸೋಮವಾರ ಸಂಜೆವೊಳಗೆ ಆಯಾ ಸಂತ್ರಸ್ತ ಕುಟುಂಬಸ್ಥರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ಹಣ ಅವರವರ ಖಾತೆಗಳಿಗೆ ಜಮಾ ಮಾಡಿ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸಹಾಯಕ ಆಯುಕ್ತರಿಗೆ ಸೂಚಿಸಿದರು.
ರವಿವಾರ ಮಧ್ಯಾಹ್ನ ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾ ನದಿಯಿಂದ ಜಲಾವೃತಗೊಂಡ ಶಿವನೂರ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ನದಿಗಳ ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಆ ಗ್ರಾಮಗಳ ಜನರ ಬೇಡಿಕೆಯಂತೆ ಬೇರೆಡೆ ಸ್ಥಳಾಂತರ ಮಾಡುವದಲ್ಲದೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರವಾಹ ಭೀತಿ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.
ವಡಗೇರಾ ತಾಲೂಕಿನಲ್ಲಿ 20 ಗ್ರಾಮಗಳ ರೈತರ ಸುಮಾರು 7864 ಹೆಕ್ಟೇರ್ ಭತ್ತ, ಹತ್ತಿ ಹಾಗೂ ತೊಗರಿ ಬೆಳೆ ನಾಶವಾಗಿದೆ.
ಪ್ರವಾಹ ಕಡಿಮೆಯಾದ ನಂತರ ಅಧಿಕಾರಿಗಳ ಸಮಿತಿ ರಚನೆ ಮಾಡಿ ಮತ್ತೊಮ್ಮೆ ಸರ್ವೆ ಮಾಡಿಸಿ ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಡಿಗೇರಾ ತಹಸೀಲ್ದಾರರಿಗೆ ಸಚಿವರಿಂದ ಎಚ್ಚರಿಕೆ!
ಕಳೆದ ನಾಲ್ಕು ದಿನಗಳಿಂದ ಈ ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಆದರೆ ತಹಸೀಲ್ದಾರರು ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ದೂರು ಜನರಿಂದ ಬಂದಿದೆ. ಇಂತಹ ಸಂದರ್ಭ ಮಾನವೀಯತೆಯಿಂದ ಕೆಲಸ ಮಾಡಬೇಕು ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಚವ್ಹಾಣ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಕೃಷಿ ಜಂಟಿ ನಿರ್ದೇಶಕಿ ಆರ್. ದೇವಿಕಾ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಗೌಡ ಮಾಗನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್, ಸಿದ್ದಣ್ಣಗೌಡ ಕಾಡಂನೋರ್, ಸಿದ್ರಾಮರೆಡ್ಡಿ ಚನ್ನೂರ, ಪರ್ವತರೆಡ್ಡಿ ಬೆಂಡೆಬೆಂಬಳಿ, ವೀರುಪಾಕ್ಪ ರೆಡ್ಡಿ ಮಾಚನೂರ, ಶಂಕ್ರಪ್ಪ ಗೌಡ ಗೋನಾಳ ಇತರರು ಇದ್ದರು.