ಕಥೆ

ಶಾಂತಿ, ಸಮಾಧಾನ ದೊರೆಯಬೇಕೆ.? ಈ ಕಾರ್ಯ‌ ಅಗತ್ಯ

ಶಾಂತಿ, ಸಮಾಧಾನ‌ ಪಡೆಯಲು ಈ ಕಾರ್ಯ‌ ಅಗತ್ಯ- ಡಾ.ಈಶ್ವರಾನಂದ ಸ್ವಾಮೀಜಿ

ನಮ್ಮ ಜೀವನವು ಪವಿತ್ರವೂ, ಪರಿಶುದ್ಧವೂ, ಪ್ರಶಾಂತವೂ ಆಗಿರುವಂತೆ ಮಾಡುವ ಬ್ರಹ್ಮವಿದ್ಯೆಯು ಅಮೂಲ್ಯ, ಅದ್ವಿತೀಯ! ದೀಪವು ಹೊರಗಿನ ಕತ್ತಲೆ ಕಳೆದರೆ, ಜ್ಞಾನದೀಪವು ನಮ್ಮೊಳಗಿನ ಕತ್ತಲೆ ಕಳೆಯುವುದು.

ನಮ್ಮ ಮನದಲ್ಲಿ ಬೆಳಕು, ಮಾತಿನಲ್ಲಿ ಸೌರಭ, ಕಾರ್ಯಗಳಲ್ಲಿ ಸೌಂದರ್ಯ ಸದಾ ತುಂಬಿರಲಿ. ನಾವು ಯಾವಾಗಲೂ ಮನೆ, ಮಠದ ಚಿಂತನೆ ಮಾಡದೆ, ಆಗೀಗ ರವಿ,ತಾರೆ, ಶಶಿಗಳಿಂದಾದ ಈ ವಿಶಾಲ ವಿಶ್ವದ ಚಿಂತನೆಯನ್ನೂ ಮಾಡಬೇಕು.

ಜೀವನವೆಂದರೆ ಕೇವಲ ವಿಚಾರ ಮಾಡುವುದಲ್ಲ, ಬರೀ ಕನಸುಗಳನ್ನು ಕಾಣುವುದಲ್ಲ, ಒಂದಿಷ್ಟು ಸತ್ಕಾರ್ಯಗಳನ್ನೂ ನಾವು ಮಾಡಬೇಕು. ನಮ್ಮಿಂದ ಪ್ರತಿದಿನ ಒಂದಾದರೂ ಹೂವು ಅರಳಬೇಕು, ದೀಪ ಬೆಳಗಬೇಕು. ಅದು ನಮಗೂ, ಇತರರಿಗೂ ಶಾಂತಿ-ಸಮಾಧಾನ ನೀಡುತ್ತದೆ. ಇದು ಯತಿ ಜೀವನ! ಉಪನಿಷತ್‌ ವಿದ್ಯೆ !

ಎಣ್ಣೆ, ಬತ್ತಿ, ಪಣತಿ ಮೂರು ಸೇರಿಯೇ ಜ್ಯೋತಿ ಬೆಳಗಿದೆ. ಹಾಗೇ ತನು, ಮನ, ಬುದ್ಧಿ ಮೂರು ಸೇರಿಯೇ ಜೀವನ ಜ್ಯೋತಿ, ಆತ್ಮಜ್ಯೋತಿ ಬೆಳಗಿದೆ. ದೇಹವು ಕಣ್ಣಿಗೆ ಕಾಣುತ್ತದೆ, ಮನಸ್ಸು ಅಥವಾ ಆತ್ಮವು ಕಣ್ಣಿಗೆ ಕಾಣುವುದಿಲ್ಲ.

ಹಾಗೇ ಪ್ರಪಂಚವು ಕಣ್ಣಿಗೆ ಕಾಣುತ್ತದೆ, ಪರಮಾತ್ಮನು ಕಣ್ಣಿಗೆ ಕಾಣುವುದಿಲ್ಲ. ಕಾಣುವ ಪ್ರಪಂಚಕ್ಕೆಲ್ಲ ಪರಮಾತ್ಮನೇ ಪರಮಾಧಾರ. ಕಾಣುವ ಈ ಪ್ರಪಂಚವೆಲ್ಲವೂ ಒಂದು ದಿನ ಕಾಣದಂತೆ ಮರೆಯಾಗಿ ಹೋಗುತ್ತದೆ.

ಕಾಣದ ಆ ಪರಮಾತ್ಮನು ಮಾತ್ರ ಅಮರನು! ಅದ್ವಿತೀಯನು ! ಹೊರಗಿರುವ ನಶ್ವರವಾದ ಪ್ರಪಂಚವನ್ನೇ ಯಾವಾಗಲೂ ತಲೆಯೊಳಗೆ ಹಾಕಿಕೊಂಡಿರುವುದೇ ಸಂಸಾರ. ಹೊರಗಿನ ಹೊಲ-ಮನೆ ಹೊರಗಿರಲಿ, ಒಳಗಿನ ಜ್ಯೋತಿ ನಿರಂತರ ಬೆಳಗುತಿರಲಿ, ಇದುವೇ ಶುದ್ಧ ಸನ್ಯಾಸ ಜೀವನ!

ಕಾಶ್ಮೀರ ದೇಶದಲ್ಲಿ ಲಲ್ಲೇಶ್ವರಿ ಎಂಬ ಹೆಸರಿನ ಸಂತಳಿದ್ದಳು. ಅವಳು ಯಾವಾಗಲೂ ಮೈಮೇಲೆ ಒಂದು ಶುಭ್ರವಾದ, ತೆಳುವಾದ ಹೊದಿಕೆ ಹೊತ್ತುಕೊಂಡಿರುತ್ತಿದ್ದಳು. ಸದಾವಕಾಲ ದೇವರ ನಾಮಸ್ಮರಣೆ ಮಾಡುತ್ತ ಅವಳು ಊರಿನಲ್ಲಿ ಸುತ್ತಾಡುತ್ತಾ ಸುಜ್ಞಾನ, ಸದ್ಭಕ್ತಿಯ ಸುಗಂಧ ಪಸರಿಸುತ್ತಿದ್ದಳು.

ಕೆಲವರು ಅವಳ ಪರಿಶುದ್ಧ, ಪವಿತ್ರ ಜೀವನವನ್ನು ಕೊಂಡಾಡಿದರೆ, ಮತ್ತೆ ಕೆಲವರು ಇವಳಿಗೆ ಮಾಡುವ ಕೆಲಸವಿಲ್ಲವೆಂದು ನಿಂದಿಸುತ್ತಿದ್ದರು. ದ್ವಂದ್ವಮಯವಾದ ಈ ಪ್ರಪಂಚದಲ್ಲಿ ಟೀಕೆ-ಟಿಪ್ಪಣಿ ಎಲ್ಲಾ ಇದ್ದದ್ದೇ. ಶ್ರೇಷ್ಠ ದೈವಭಕ್ತಳಾಗಿದ್ದ ಲಲ್ಲೇಶ್ವರಿಯು ಸ್ತುತಿ-ನಿಂದನೆಗಳನ್ನು ಸಮನಾಗಿ ಸ್ವೀಕರಿಸುತ್ತಿದ್ದಳು.

ಯಾರಾದರೂ ಸ್ತುತಿಸಿದರೆ ತಾನು ಹೊತ್ತಿದ್ದ ಹೊದಿಕೆಯ ಎಡಗಡೆ ಒಂದು ಗಂಟು ಹಾಕುತ್ತಿದ್ದಳು; ತೆಗಳಿದರೆ ಬಲಗಡೆ ಒಂದು ಗಂಟು ಹಾಕುತ್ತಿದ್ದಳು. ಒಂದು ದಿನ ಗುರುಗಳು ‘ಇದೇನಮ್ಮ?’ ಎಂದು ಕೇಳಿದರು.

ಲಲ್ಲೇಶ್ವರಿ ಕೊಟ್ಟ ಉತ್ತರ ಎಷ್ಟು ಸುಂದರವಾಗಿದೆ ನೋಡಿ ‘ಪೂಜ್ಯರೇ, ಊರೊಳಗಿಂದ ನಾನು ತಿರುಗಿ ನನ್ನ ಸ್ಥಳಕ್ಕೆ ಬರುತ್ತಲೇ ಜನರ ಸ್ತುತಿ-ನಿಂದನೆಗಳ ಈ ಗಂಟನ್ನು ಕೆಳಗಿಳಿಸಿ ಕಣ್ತುಂಬ ನಿದ್ರೆ ಮಾಡುತ್ತೇನೆ!’ ಎಂಥ ಸುಂದರವಾದ ಉಪಾಯವಲ್ಲವೆ? ನಾವು ಕೂಡಾ ಜನರ ಸ್ತುತಿ-ನಿಂದನೆಗಳನ್ನು ಬೆಳಗಿನಿಂದ ಸಂಜೆಯವರೆಗೆ ಒಂದು ಹಾಳಿಯಲ್ಲಿ ಕೆಂಪು-ನೀಲಿ ಬಣ್ಣದಿಂದ ಗುರುತಿಸಿ ಮರೆತು ಮಲಗಿದರೆ ಅದೆಷ್ಟು ಸುಂದರವಾಗಿರುತ್ತದೆ ಅಲ್ಲವೇ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button