ಐಪಿಎಲ್ ಬೆಟ್ಟಿಂಗ್ ಪ್ರಕರಣಃ ಸರ್ಕಾರ ಮೌನ ಏಕೆ.? ಶಾಸಕ ಪ್ರಿಯಾಂಕ್ ಪ್ರಶ್ನೆ
ಕಲ್ಬುರ್ಗಿಃ ಐಪಿಎಲ್ ಬೆಟ್ಟಿಂಗ್ ಆರೋಪ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಸಂಬಂಧಿಯೊಬ್ಬರು ತಲೆ ಮರೆಸಿಕೊಂಡಿದ್ದು, ಈ ಕುರಿತು ಸರಕಾರ ಮೌನವಾಗಿರುವುದು ಗಮನಿಸಿದರೆ ಆರೋಪಿಗಳನ್ನು ರಕ್ಷಿಸುತ್ತಿರುವಂತೆ ಕಂಡುಬರುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು ಮುಖ್ಯಮಂತ್ರಿಯಾಗಲೀ ಹಾಗೂ ಗೃಹಸಚಿವರಾಗಲೀ ಗುಪ್ತಚರ ಇಲಾಖೆಯಿಂದ ಪ್ರತಿನಿತ್ಯ ಮಾಹಿತಿ ಪಡೆದುಕೊಂಡಂತೆ ಕಂಡುಬರುತ್ತಿಲ್ಲ. ಯಾಕೆಂದರೆ, ಐಪಿಎಲ್ ಬೆಟ್ಟಿಂಗ್ ಕುರಿತು ಸೋಲಾಪೂರ ಪೊಲೀಸರ ದಾಳಿ ನಡೆದ ನಂತರ ಬಿಜೆಪಿ ಶಾಸಕರ ಸಂಬಂಧಿಯೊಬ್ಬರು ಪರಾರಿಯಾಗಿದ್ದಾರೆ.

ಘಟನೆ ನಡೆದು ಐದು ದಿನಗಳಾದರೂ ಸರಕಾರ ಮೌನವಾಗಿದೆ. ಇದನ್ನು ಗಮನಿಸಿದರೆ, ಸರಕಾರ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂದು ಟೀಕಿಸಿದ್ದಾರೆ. ಸರ್ಕಾರ ಈ ಕೂಡಲೆ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು. ದಂಧೆಯಲ್ಲಿ ಭಾಗಿಯಾದ ಅವರನ್ನು ಬಂಧಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.