ಪ್ರಮುಖ ಸುದ್ದಿ

ಬಿಜೆಪಿ ಆಡಳಿತದಲ್ಲಿ ಹಲವು ಅಕ್ರಮ ದಂಧೆಗಳಿಗೆ ಕುಮ್ಮಕ್ಕು ಖರ್ಗೆ ಗಂಭೀರ ಆರೋಪ

ಬಿಜೆಪಿ ಆಡಳಿತದಲ್ಲಿ ಹಲವು ಅಕ್ರಮ ದಂಧೆಗಳಿಗೆ ಕುಮ್ಮಕ್ಕು ಖರ್ಗೆ ಗಂಭೀರ ಆರೋಪ

ಕಲ್ಬುರ್ಗಿಃ -ಗಾಂಜಾ & ಮಾದಕ ವಸ್ತುಗಳು
-ಜೂಜು
-IPL ಬೆಟ್ಟಿಂಗ್‌
-ಅಕ್ರಮ ಮರಳು ಗಣಿಗಾರಿಕೆ
-ಅಕ್ರಮ ಮದ್ಯ ಮಾರಾಟ
-ಉದ್ಯಮಿಗಳಿಗೆ ಕಿರುಕುಳ
-ನಿಷೇಧಿತ ಗುಟ್ಕಾ ದಂಧೆ
-ನಾಗರಿಕರಿಂದ ಸುಲಿಗೆ
ಇತ್ಯಾದಿ ಅಕ್ರಮ ಚಟುವಟಿಕೆಗಳು ಕಲಬುರಗಿಯಲ್ಲಿ ಹೇರಳವಾಗಿ ನಡೆಯುತ್ತಿದ್ದು ಇದಕ್ಕೆಲ್ಲ ಬಿಜೆಪಿ ಆಡಳಿತವೇ ಹೊಣೆಯಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಲಿಖಿತ ರೂಪದಿ ಉಲ್ಲೇಖಿಸಿದ ಅವರು,

ಮಾನ್ಯ ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳರವರೇ, ಇದು ಕಲಬುರಗಿ ಗೃಹ ಇಲಾಖೆ ಅಕ್ರಮ ವ್ಯವಹಾರಕ್ಕಾಗಿ ಸಿದ್ದಪಡಿಸಿರುವ ವಸೂಲಿ ರೇಟ್ ಕಾರ್ಡ್. ಕಲಬುರಗಿ ಯುವಕರ ಭವಿಷ್ಯ ಹಾಳಾದರೂ ಪರವಾಗಿಲ್ಲ, ನಾವು ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುತ್ತೇವೆ ಎಂಬ ವರ್ತನೆ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಅಕ್ರಮ ದಂಧೆಗೆ ₹1 ಲಕ್ಷದಿಂದ ₹12 ಲಕ್ಷವರೆಗೆ ಪ್ರತಿ ತಿಂಗಳು ಹಫ್ತಾ ವಸೂಲಿ‌ ನಡೆಯುತ್ತಿದೆ ಎಂದು ಆರೋಪಿಸಿದರು.

ಅಕ್ರಮ ದಂಧೆಗಳ ರೇಟ್ ಬೋರ್ಡ್

▪️ನಗರದ ಪ್ರತಿ ವೈನ್ ಶಾಪ್‌ನಿಂದ ಪ್ರತಿ ತಿಂಗಳು ₹1350 ರಂತೆ ಪ್ರತಿ ತಿಂಗಳು ₹120000 ಹಫ್ತಾ ವಸೂಲಿ‌ ಮಾಡಲಾಗುತ್ತಿದೆ
▪️ಗುಟ್ಕಾ ವ್ಯವಹಾರದಿಂದ ಪ್ರತಿ ತಿಂಗಳು ₹5,00,000
▪️ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಾಣೆಯಿಂದ ₹6,00,000
▪️80 ಟಿಪ್ಪರ್ ಗಳಲ್ಲಿ ಸಾಗಿಸುವ ಅಕ್ರಮ ಮರಳು ದಂಧೆಕೋರದಿಂದ ₹12,00,000
▪️ಇಸ್ಪೀಟ್ ಅಡ್ಡೆಗಳ ಮಾಲೀಕರಿಂದ ₹5,00,000
▪️ಅಕ್ರಮ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿರುವವರಿಂದ ₹1,00,000 ವಸೂಲಿ‌ ಮಾಡಲಾಗುತ್ತಿದೆ ಎಂದು ಗುಡುಗಿದರು.

ಕಲಬುರಗಿಗೆ ಆಂಧ್ರ ಪ್ರದೇಶದಿಂದ ಜನ ಜೂಜಾಡಲು ಬರುತ್ತಿದ್ದಾರೆ. ಖಣದಾಳ್, ಸೇಡಂ ಹಾಗೂ ಆಳಂದ ರಸ್ತೆಯಲ್ಲಿ ಮೂರು ಜೂಜು ಅಡ್ಡೆಗಳಿವೆ. ಇಲ್ಲಿ ಪ್ರತಿ ಅಡ್ಡೆಗೆ ದಿನವೊಂದಕ್ಕೆ ₹60 ಸಾವಿರ ಬಾಡಿಗೆ ಇದೆ. ಈ ಎಲ್ಲಾ ಹಣ ಕಲಬುರಗಿ ಯುವಕರ ಜೇಬಿಂದ ಕಸಿಯಲಾಗುತ್ತಿದೆ ಎಂದರು.

IPL ಬೆಟ್ಟಿಂಗ್ ಹಾಗೂ ಜೂಜಾಟವನ್ನು ಯಾರು ಪ್ರೋತ್ಸಾಹಿಸುತ್ತಿದ್ದಾರೆ.? Recreational ಕ್ಲಬ್‌ಗಳಿಗೆ ಯಾರು ಮತ್ತು ಏಕೆ ಅನುಮತಿ ನೀಡುತ್ತಿದ್ದಾರೆ.? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಹೊರಗಿನ ಪೊಲೀಸರು ಅಕ್ರಮ ದಂಧೆಗಳ ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಗಾಂಜಾ ಜಪ್ತಿ ಮಾಡಿದ್ದು ಬೆಳಗಾವಿ/ಬೆಂಗಳೂರು ಸಿಸಿಬಿ ಪೊಲೀಸರು, IPL ದಂಧೆ ಬಯಲಿಗೆಳೆದಿದ್ದು ಸೊಲ್ಲಾಪುರ ಪೊಲೀಸರು ಎಂದು ವಿವರಿಸಿದ್ದಾರೆ.

ಸ್ಥಳೀಯ ಪೊಲೀಸ್ ರ ಕೈ ಕಟ್ಟಿಹಾಕುವಂತೆ ಮಾಡಲು ಇಲ್ಲಿನ ಬಿಜೆಪಿ ನಾಯಕರುಗಳೇ ಈ ದಂಧೆಗಳಿಂದ ಲಾಭ ಗಳಿಸುತ್ತಿದ್ದಾರೆ ಎಂದು ಬಲವಾಗಿ ಆಪಾದಿಸಿದ್ದಾರೆ.

ಈ ಎಲ್ಲಾ‌ ಅಕ್ರಮ ಚಟುವಟಿಕೆಗಳು ಈಗ ಜಿಲ್ಲೆಯಲ್ಲಿ ‌ರಾಜಾರೋಷವಾಗಿ ತಲೆ ಎತ್ತಿವೆ. ಇದು ಕಲಬುರಗಿ ನಗರದ ಮಾಹಿತಿ ಮಾತ್ರ, ಈ ನಿಟ್ಟಿನಲ್ಲಿ ತಾವು ದಯವಿಟ್ಟು ಕಲಬುರಗಿಯಲ್ಲಿ ಸಭೆಯನ್ನು ಮಾಡಿ, ನಾನು ನಿಮಗೆ ಜಿಲ್ಲೆಯ ಮಾಹಿತಿಯನ್ನು ಮತ್ತು ಅದಕ್ಕೆ ಜವಾಬ್ದಾರರಾಗಿರುವ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತೇನೆ.

ಜಿಲ್ಲೆಯನ್ನು ಕಾಯಬೇಕಾದವರೇ ಹಣದಾಸೆಗೆ ಜಿಲ್ಲೆಯನ್ನು ಬಲಿ ಕೊಡುತ್ತಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಕೃಪಕಾಟಕ್ಷವಿದ್ದು, ಅವರ ಮೂಗಿನ ನೇರದಲ್ಲೇ ಇದೆಲ್ಲವೂ ನಡೆಯುತ್ತಿದೆ. ಕಲಬುರಗಿ ಯುವಕರ ಭವಿಷ್ಯಕ್ಕೆ ಈ ಬಿಜೆಪಿ ಸರ್ಕಾರದಲ್ಲಿ ಬೆಲೆ ಇದೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button