ಪ್ರಮುಖ ಸುದ್ದಿ

ಶಹಾಪುರಃ ಕೃಷ್ಣಾ ಕಾಡಾ ಅಧ್ಯಕ್ಷರಾಗಿ ತಳವಾರ ಪದಗ್ರಹಣ

ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪಿಸುವ ಪ್ರಯತ್ನ ಮಾಡುವೆ – ತಳವಾರ

yadgiri, ಶಹಾಪುರಃ ಕೃಷ್ಣಾ ಕಾಡಾ ವ್ಯಾಪ್ತಿ ಬರುವ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪದಿರುವದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ ಎಂಬುದು ನನ್ನ ಗಮನಕ್ಕೆ ಇದೆ. ಮೊದಲನೇಯದಾಗಿ ಈ ಸಮಸ್ಯೆ ಕುರಿತು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭೀಮರಾಯನ ಗುಡಿ ಕೃಷ್ಣಾ ಕಾಡಾದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕಲಬುರ್ಗಿಯ ಬಿಜೆಪಿ ಮುಖಂಡ ಶರಣಪ್ಪ ತಳವಾರ ತಿಳಿಸಿದರು.

ಗುರುವಾರ ಭೀಮರಾಯನ ಗುಡಿ ಕಾಡಾ ಕಚೇರಿಯಲ್ಲಿ ಕಾಡಾ ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ಪದಗ್ರಹಣ ಮಾಡಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಕೃಷ್ಣಾ ಕಾಡಾ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನನ್ನನ್ನು ನೇಮಿಸಿರುವದಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ತಮ್ಮ ಪಕ್ಷದ ಎಲ್ಲಾ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದ ಅವರು, ನಾನು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಪಕ್ಷದ ತತ್ವಾ ಸಿದ್ಧಾಂತಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸುತ್ತೇನೆ.

ಪಕ್ಷದ ಸಂಘಟನೆ ಚಟುವಟಿಕೆಯಲ್ಲಿ ಪಕ್ಷ ನೀಡಿದ ಜವಬ್ದಾರಿಯನ್ನು ಇಲ್ಲಿವರೆಗೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಕಾಡಾ ಅಧ್ಯಕ್ಷ ಸ್ಥಾನವು ಜವಬ್ದಾರಿಯುತವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಅಭಿವೃದ್ಧಿ ಪಥದಲ್ಲಿ ಕಾರ್ಯಯೋಜನೆಗಳನ್ನು ರೂಪಿಸುತ್ತೇನೆ. ಅಲ್ಲದೆ ಪ್ರಾಮುಖ್ಯವಾಗಿ ಈ ಭಾಗದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದು ಕಾಡಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈತಾಪಿ ಜನರ ಜೀವನಾಡಿಯಾಗಿ ಕೃಷ್ಣಾ ಕಾಡಾ ಬೆಳೆಯಲು ಕೆಲಸ ಮಾಡುವೆ ಎಂದು ಭರವಸೆ ನೀಡಿದರು.

ಕಾಡಾ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಪಡೆಯುತ್ತೇನೆ. ನಮ್ಮ ಪಕ್ಷದ ಹಿರಿಯರ ಸಲಹೆ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುತ್ತೇನೆ. ರೈತರ ಹಿತ ಕಾಪಾಡುವಲ್ಲಿ ಶ್ರಮಿಸುತ್ತೇನೆ. ನಾನು ಕೂಡ ರೈತನ ಮಗನಾಗಿದ್ದು, ರೈತರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

ಅಲ್ಲದೆ ಕಾಡಾ ನೀರು ಬಳಕೆದಾರರ ಸಂಘದ ಸಭೆ ಕರೆದು ಅಭಿವೃದ್ಧಿ ಕುರಿತು ಚರ್ಚಿಸುವೆ. ನೀರು ಬಳಕೆದಾರರ ಸಂಘದ ಸದುಪಯೋಗ ಕುರಿತು ಮನಗಂಡು ಸಮಗ್ರ ಅಭಿವೃದ್ಧೀಗೆ ಕ್ರಿಯಾಯೋಜನೆಗಳನ್ನು ರೂಪಿಸಿ ಮುಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ವೆಂಕಟರಡ್ಡಿ ತುಮಕೂರ, ರಾಜೂಗೌಡ ಉಕ್ಕಿನಾಳ, ಮಾಜಿ ಜಿಪಂ ಸದಸ್ಯ ದೇವರಾಜ ನಾಯಕ, ಶೇಖರ ದೊರೆ, ಮಲ್ಲಿಕಾರ್ಜುನ ಚಿಲ್ಲಾಳ ಸೇರಿದಂತೆ ಇತರರು ಸನ್ಮಾನಿಸಿ ಶುಭಕೋರಿದರು. ಕಾಡಾ ಅಧಿಕಾರಿಗಳು ನೂತನ ಅಧ್ಯಕ್ಷ ತಳವಾರ ಅವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಕೋಲಿ ಸಮಾಜದಿಂದ ಮಾಜಿ ನಗರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ, ಸಚಿನ್ ನಾಸಿ, ಭೀಮು ಶಖಾಪುರ, ಹಯ್ಯಾಳಪ್ಪ ಹಯ್ಯಾಳಕರ್ ಸೇರಿದಂತೆ ಇತರರು ಸನ್ಮಾನಿಸಿ ಗೌರವಿಸಿದರು.

Related Articles

Leave a Reply

Your email address will not be published. Required fields are marked *

Back to top button