ಯಾದಗಿರಿ ಜಿಲ್ಲೆಯಲ್ಲಿ ಖಡಕ್ ನಾಥ ಕೋಳಿ ಸಾಕಾಣಿಕೆ
ಯಾದಗಿರಿಗೆ ಬಂದಿವೆ ಖಡಕ್ ನಾಥ ಕೋಳಿ
ಖಡಕ್ ನಾಥ ಕೋಳಿಗಳಿಗೆ ಬೇಡಿಕೆ ಜಾಸ್ತಿ
ಯಾದಗಿರಿ, ಸುರಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಖಡಕ್ ನಾಥ ಕೋಳಿ ಸಾಕಾಣಿಕೆ ಬಗ್ಗೆ ಮಾತನಾಡಿದ್ದಾಗ ರೈತರ ಚಿತ್ತ ಅತ್ತ ನೆಟ್ಟತ್ತು. ಆದರೆ ತಾಲ್ಲೂಕಿನ ದೇವರಗೋನಾಲದ ರೈತ ಹಣಮಂತರಾಯ ದೊರೆ ತಮ್ಮ ಪ್ರಕೃತಿ ಫಾರ್ಮ್ ನಲ್ಲಿ ಸದ್ದುಗದ್ದಲವಿಲ್ಲದೆ ಖಡಕ್ ನಾಥ ಕೋಳಿ ಸಾಕಾಣಿಕೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ನಮ್ಮ ನಾಟಿ ಕೋಳಿಯಂತೆ ಬಣ್ಣ ಇರುವುದಿಲ್ಲ. ಮೈಯೆಲ್ಲಾ ಕಪ್ಪುಬಣ್ಣ ಆಗಿದ್ದು ನೋಡಲು ಆಕರ್ಷಣೆಯಾಗಿರುತ್ತವೆ. ತುಸು ಗಿಡ್ಡವಾಗಿವೆ. ನಿರಂತರವಾಗಿ ಮೊಟ್ಟೆ ಹಾಕುತ್ತವೆ. ಆದರೆ ನಮ್ಮ ನಾಟಿ ಕೋಳಿಯಂತೆ ಚಾಲಕಿತನ ಇಲ್ಲ. ಬೇರೆ ಕೋಳಿಯ ಜೊತೆ ಬೇರೆಯದೆ ತಮ್ಮ ಸಂಗಾತಿ ಕೋಳಿಯ ಜೊತೆ ಓಡಾಡುತ್ತವೆ.
ದಿನಾಲು ಹೆಚ್ಚಾಗಿ ಭತ್ತದ ಕಾಳು ಹಾಕುತ್ತೇನೆ. ಸುಮಾರು 15 ನಾಟಿ ಕೋಳಿಯ ಜೊತೆಯಲ್ಲಿ ಈಗ ಸದ್ಯಕ್ಕೆ ಎಂಟು ಖಡಕ್ ನಾಥ ಕೋಳಿ ಸಾಕಿರುವೆ. ವಿದ್ಯಾವಂತ ಯುವಕರು ಬಂದು ಕೋಳಿ ಮಾರಾಟ ಮಾಡುವಂತೆ ಕೇಳುತ್ತಿದ್ದಾರೆ ನಾನು ನೀಡಿಲ್ಲ ಎನ್ನುತ್ತಾರೆ ಅವರು.
ನಮ್ಮ ತಮ್ಮ ಪ್ರಕಾಶ ನಾಯಕ ಬ್ಯಾಂಕ್ ಅಧಿಕಾರಿಯಾಗಿದ್ದು, ಅವರು ಖಡಕ್ ನಾಥ ಕೋಳಿಯನ್ನು ಸಾಕಾಣಿಕೆಗೆ ಪ್ರೇರಣೆ ನೀಡಿದ್ದಾರೆ. ಆದರೆ ಅನಕ್ಷರಸ್ಥರಾಗಿರುವ ನಮಗೆ ಖಡಕ್ ನಾಥ ಕೋಳಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ನಮಗೆ ಸೂಕ್ತ ಮಾಹಿತಿ ಹಾಗೂ ಕೋಳಿ ಸಾಕಾಣಿಕೆಗೆ ನೆರವು ನೀಡಿದರೆ ಸಾಕಷ್ಟು ಪ್ರಮಾಣದಲ್ಲಿ ಖಡಕ್ ನಾಥ ಕೋಳಿ ಸಾಕಾಣಿಕೆ ಮಾಡಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಖಡಕ್ ನಾಥ್ ಕೋಳಿಗಳಿಗೆ ಬೇಡಿಕೆ ಜಾಸ್ತಿ ಇದೆ. ಖಡಕ್ ನಾಥ್ ಕೋಳಿ ಕೆಜಿಗೆ ಸಾವಿರ ರೂ.ದರವಿದೆ. ಇದು ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ. ವಿದೇಶಕ್ಕೆ ಈ ಕೋಳಿಗಳ ಮಾಂಸ ರಫ್ತಾಗುತ್ತದೆ. ಹಲವು ಔಷಧ ತಯಾರಿಕಾ ಕಂಪನಿಗಳಿಗೂ ಖಡಕ್ ನಾಥ್ ಕೋಳಿಗಳ ರಕ್ತ, ಮಾಂಸ ಅಗತ್ಯತೆ ಇದೆ.
ಇದನ್ನು ಮನಗಂಡೆ ಮೋದಿಯವರು ರೈತರಿಗೆ ಈ ಖಡಕ್ ನಾಥ್ ಕೋಳಿ ಸಾಕಾಣಿಕೆ ಕುರಿತು ಮಾಹಿತಿ ನೀಡಿರುವದು ಸ್ಮರಿಸಬಹುದು. ಜಿಲ್ಲೆಯಲ್ಲಿ ಪ್ರಥಮವಾಗಿ ಖಡಕ್ ನಾಥ ಕೋಳಿ ಸಾಕಾಣಿಕೆಗೆ ಮಾಡುತ್ತಿರುವ ರೈತರಿಗೆ ಈ ಭಾಗದ ಸಾಕು ಪ್ರಾಣಿಗಳ ತಜ್ಞರು ಸಂಬಂಧಿಸಿದ ಕೃಷಿ ಇಲಾಕೆ ಅಧಿಕಾರಿಗಳು ಈ ರೈತನಿಗೆ ಸಮರ್ಪಕ ಮಾಹಿತಿ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ.