ಲಂಚ ಹಗರಣ ಪ್ರಕರಣ: ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿಗೆ ಜಾಮೀನು ಮಂಜೂರು
ನವದೆಹಲಿ: ಉದ್ಯೋಗಕ್ಕಾಗಿ ಲಂಚ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಗುರುವಾರ (ಸೆ.26) ಜಾಮೀನು ಮಂಜೂರು ಮಾಡಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಸೆಂಥಿಲ್ ಬಾಲಾಜಿ 2023ರ ಜೂನ್ ನಿಂದ ಜೈಲಿನಲ್ಲಿದ್ದರು. ದಿ.ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಬಾಲಾಜಿ ತಮಿಳುನಾಡು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ 2011 ಹಾಗೂ 2015ರ ನಡುವೆ ಈ ಹಗರಣ ನಡೆದಿರುವುದಾಗಿ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಜೂನ್ ನಲ್ಲಿ ಜಾರಿ ನಿರ್ದೇಶನಾಲಯ ಬಾಲಾಜಿ ಅವರನ್ನು ಬಂಧಿಸಿತ್ತು. ಡಿಎಂಕೆಯ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದಲ್ಲಿ ಬಾಲಾಜಿ ಇಂಧನ ಖಾತೆ ಸಚಿವರಾಗಿದ್ದ ವೇಳೆ ಬಂಧನವಾಗಿತ್ತು.ಕಳೆದ ವರ್ಷ ಆಗಸ್ಟ್ 12ರಂದು ಜಾರಿ ನಿರ್ದೇಶನಾಲಯ ಬಾಲಾಜಿ ವಿರುದ್ಧ ಬರೋಬ್ಬರಿ 3,000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು.
ಅಲ್ಲದೇ ಕಳೆದ ವರ್ಷ ಅಕ್ಟೋ ಬರ್ 19ರಂದು ಹೈಕೋರ್ಟ್ಬಾಲಾಜಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದೇ ರೀತಿ ಸ್ಥಳೀಯ ನ್ಯಾಯಾಲಯ ಕೂಡಾ ಮೂರು ಬಾರಿ ಬಾಲಾಜಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.