ಕಲ್ಯಾಣ ನಾಡಿನಲ್ಲಿ ತಾಲಿಬಾನ್ ಸಂಸ್ಕೃತಿ ಬಿತ್ತಬೇಡಿ: ಕನ್ನೇರಿ ಶ್ರೀ
ಶಹಾಪುರದಲ್ಲಿ ಇತಿಹಾಸ ನಿರ್ಮಿಸಿದ ಬೃಹತ್ ಹಿಂದೂ ಸಮಾವೇಶ
ಶಹಾಪುರದಲ್ಲಿ ಇತಿಹಾಸ ನಿರ್ಮಿಸಿದ ಬೃಹತ್ ಹಿಂದೂ ಸಮಾವೇಶ
ಕಲ್ಯಾಣ ನಾಡಿನಲ್ಲಿ ತಾಲಿಬಾನ್ ಸಂಸ್ಕೃತಿ ಬಿತ್ತಬೇಡಿ: ಕನ್ನೇರಿ ಶ್ರೀ
ವಿನಯವಾಣಿ ಸಮಾಚಾರ
Yadagiri, ಶಹಾಪುರ: ಕೆಲವರು ಬಸವಣ್ಣನವರ ಮುಖವಾಡ ಹಾಕಿಕೊಂಡು, ಕಮ್ಯುನಿಸ್ಟ್ ಅಜೆಂಡ ಅನುಸರಿಸುತ್ತಿರುವ ದುಷ್ಟ ಮನಸ್ಥಿತಿಯನ್ನು ಮತ್ತು ಕಲ್ಯಾಣ ನಾಡಿನಲ್ಲಿ ತಾಲಿಬಾನ್ ಸಂಸ್ಕೃತಿ ಬಿತ್ತುತ್ತಿರುವ ಮತ್ತು ಹಿಂದೂ ಧರ್ಮದ ನಾಶ ಮಾಡುತ್ತಿರುವವರ ವಿರುದ್ಧವಾಗಿ ಬೃಹತ್ ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಸಿಪಿಎಸ್ ಶಾಲೆಯ ಮೈದಾನದಲ್ಲಿ ಭವ್ಯ ವೇದಿಕೆಯಲ್ಲಿ ಆಯೋಜಿಸಿದ್ದ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಕೃಷ್ಣನ ನಿಂದನೆ, ಪರಶಿವನ ನಿಂದನೆ, ದೇವಾನು ದೇವತೆಗಳನ್ನು ಅಪಹಾಸ್ಯ ಮಾಡುವ ವಿಚಿತ್ರ ಸ್ವಭಾವದ ಸ್ವಾರ್ಥಕ್ಕಾಗಿ ಮನಸ್ಸಿಗೆ ಬಂದಿದ್ದನು ಪ್ರಚುರ ಪಡಿಸುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಹಿಂದೂ ಸಮಾಜ ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ತಾಲಿಬಾನ್ ಸಂಸ್ಕೃತಿ ಬಿತ್ತಲು ಹೊರಟವರಿಗೆ ಬುದ್ಧಿ ಕಲಿಸಬೇಕಿದೆ.

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿದ ಅವರು ಇಲ್ಲ ಸಲ್ಲದ ಮಾತನಾಡುತ್ತ ಹೊರಟಿರುವದು ಅದು ಹಿಂದುತ್ವವನ್ನು ದಿಕ್ಕರಿಸಿ ಬಂದಿದ್ದಾನೆ ಎಂಬ ಕಪೋಕಲ್ಪಿತ ಕಥೆ ಹೇಳುವವರ ಮಾತು ಯಾರು ಬುವದಿಲ್ಲ.
ಕಾಯಕ, ದಾಸೋಹ, ಅರ್ಚನೆ, ಸಮಾನತೆಯ ಪರಂಪರೆ ಮುನ್ನಡೆಸಿಕೊಂಡು ಹೋಗುತ್ತಿರುವವರು ನಿಜವಾದ ಬಸವ ಅಭಿಮಾನಿಗಳು ಎಂಬುವುದು ನೆನಪಿರಲಿ. ಬಸವಣ್ಣನವರನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸುವ ಕಾರ್ಯ ಬೇಡ, ಎಲ್ಲಾ ಸಮಾಜವನ್ನು ಒಗ್ಗೂಡಿಸಿದ ದಾರ್ಶನಿಕರ ವಚನಗಳು ಪ್ರಸ್ತುತವಾಗಿವೆ. ಹಿಂದೂ ಸಮಾಜದ ಅಸ್ಥಿರತೆಗೆ ಪ್ರಯತ್ನಿಸುತ್ತಿರುವ ಕ್ಷುಲ್ಲಕ ಮನಸ್ಥಿತಿಯವರ ಬಗ್ಗೆ ಹಿಂದೂ ಸಮಾವೇಶ ಎಚ್ಚರಿಕೆಯ ಗಂಟೆಯಾಗಲಿ, ಸನಾತನ ಹಿಂದೂ ಧರ್ಮಕ್ಕೆ ಹಿಂದಿನಿಂದಲೂ ಎಂತಹದೇ ಕಠಿಣ ಸಂದರ್ಭ ನಶಿಸಿ ಹೋಗಿಲ್ಲ. ಸನಾತನ ಧರ್ಮ ಎಂದಿಗೂ ಅಳಿಯುವದಿಲ್ಲ.
ಬಸವಣ್ಣ ಹಿಂದೂ ಧರ್ಮ ಬಿಟ್ಟವನಿಲ್ಲ. ಧಾರ್ಮಿಕತೆಯನ್ನು ಸರಳೀಕರಣಗೊಳಿಸಿದವರು. ಜಗತ್ತಿಗೆ ಭಕ್ತಿ ಮಾರ್ಗ ತೋರಿದ ಮಹಾನ್ ದಾರ್ಶನಿಕರು. ಹತ್ತಾರು ವಚನ ಬಾಯಿಪಾಠ ಮಾಡಿಕೊಂಡು ಬರಿ ಮಾತನಾಡುವದಲ್ಲ ಬಸವಣ್ಣನವರ ತತ್ವ. ಮಾತಿಗಿಂತ ಕೃತಿಲೇಸು ಎಂದವರು ಶರಣರು. ಕಾಯಕ ಬಹು ಮುಖ್ಯ. ಬರಿ ಮಠದಾಗಿನ ಸಂಪತ್ತು ಬಳಸಿಕೊಂಡು ಎಸಿ ಹಾಕೊಂಡು ಒಂದೆರಡು ವಚನ ಹೇಳೋದಲ್ಲ ಬಸವಣ್ಣನವರ ತತ್ವ. ಬದುಕಿನಲ್ಲಿ ಅನುಸರಿಸವದು ಬಹು ಮುಖ್ಯ. ನಾನು ಕಾಯಕ ಜೀವಿ ನನಗೆ ನೂರು ಪ್ರಕಾರ ಕೆಲಸ ಬರುತ್ತದೆ. ಗೌಂಡಿ ಕೆಲಸ ಸಹ ನಾನು ಮಾಡುತ್ತೇನೆ. ಕೃಷಿ ಕಾಯಕ, ನನ್ನ ಗೋವು ಶಾಲೆಯಲ್ಲಿ 2 ಸಾವಿರ ಹಸು ಸಾಕಿದ್ದೇನೆ. ಅದರಿಂದ ಎಷ್ಟೊಂದು ಲಾಭವಿದೆ ಗೊತ್ತಾ..? ಅದನ್ನು ಅನುಸರಿಸಿದರೆ ಗೊತ್ತಾಗಬೇಕಲ್ಲವೇ..? ಯಾರೋ ಮಾತು ಕೇಳಿ ರೈತರು ಹಸುಗಳನ್ನು ಸಾಕುವದು ನಿಲ್ಲಿಸಿದ್ದಾರೆ. ಪ್ರಸ್ತುತ ಟ್ರ್ಯಾಕ್ಟರ್ ಬಳಸಿ ಬೇಡ ಎನ್ನುವದಿಲ್ಲ ಜೊತೆಗೆ ಎರಡು ಹಸು ಸಾಕಿ ಅದರ ಸಮೃದ್ಧತೆ, ಆರೋಗ್ಯ ಎಲ್ಲವೂ ನಿಮ್ಮದಾಗಲಿದೆ ಎಂದರು.
ಕೃಷಿಯ ಬಗ್ಗೆ ಮಾಹಿತಿ: ಮನೆಯಲ್ಲಿ ಶಾಂತಿ ಸಮಾಧಾನವಿರಲಿ ಕನಿಷ್ಠ ಎರಡು ಆಕಳು ಕಟ್ಟಿ ಸಮೃದ್ಧಿ, ಆರೋಗ್ಯ ವಿರುತ್ತದೆ ಗೋಮೂತ್ರ, ಸಗಣಿಯಿಂದ ಭೂಮಿಗೆ ಗೊಬ್ಬರವಾಗುತ್ತದೆ ಶಕ್ತಿಯುತ ಆರೋಗ್ಯದ ಕಾಳಜಿ ಇರಲಿ. ಸಾಕಷ್ಟು ಉದಾಹರಣೆ ಸಮೇತ ಕನ್ಮೇರಿ ಶ್ರೀಗಳು ತಿಳಿಸಿದರು. ಮುಂಚಿತವಾಗಿ ಮಾತನಾಡಿದ ಸಮಾವೇಶದ ರೂವಾರಿ ಸೂಗುರೇಶ್ವರ ಶಿವಾಚಾರ್ಯರು, ತಿಂಗಳಿಂದ ಸುಮಾರು 31 ಸಮುದಾಯದ ಪ್ರಮುಖರನ್ನು ಕರೆದು ಸಾಕಷ್ಟು ಬಾರಿ ಸಭೆ ನಡೆಸಿ ಈ ಸಮಾವೇಶ ರೂಪರೇಷೆ ಸಿದ್ಧಪಡಿಸಿದ್ದೇವೆ. ಆರಂಭದಲ್ಲಿ ಕೆಲವರು ಸಾಕಷ್ಟು ಅಡೆತಡೆವೊಡ್ಡುವ, ಬೆದರಿಕೆಯೊಡ್ಡುವ ಕೆಲಸ ಮಾಡಿದರು. ನಾವೇನು ಅಂಜಲಿಲ್ಲ ಅದಕ್ಕೆಲ್ಲ ಬಗ್ಗಲಿಲ್ಲ ಜಗ್ಗಲಿಲ್ಲ. ನಮ್ಮ ವಿರುದ್ಧ ವಿಷಕಾರುವ ಕಾಟಾಚಾರದ ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರು. ಇವತ್ತಿನ ನಮ್ಮ ಕಾರ್ಯಕ್ರಮ ಅವರಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದರು. ಗುಂಬಳಾಪುರದ ಸಿದ್ಧೇಶ್ವರ ಶಿವಾಚಾರ್ಯರು, ಬಸವಯ್ಯ ಶರಣರು, ಆಂದೋಲಾದ ಸಿದ್ಧೇಶ್ವರ ಶ್ರೀಗಳು ಸೇರಿದಂತೆ ಬಾಗಲಕೋಟ್, ವಿಜಯಪುರ, ಗದಗ, ಬೆಳಗಾವಿ ಇತರಡೆಯಿಂದ ಆಗಮಿಸಿದ ಮುನ್ನೂರಕ್ಕೂ ಹೆಚ್ಚು ಸ್ವಾಮೀಜಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಿಜೆಪಿ ಮುಖಂಡರಾದ ಅಮೀನರಡ್ಡಿ ಯಾಳಗಿ, ಮಹೇಶಗೌಡ ಮುದ್ನಾಳ,ಡಾ.ಚಂದ್ರಶೇಖರ ಸುಬೇದಾರ, ಚಂದ್ರಶೇಖರ ಮಾಗನೂರ, ಬಸವರಾಜ ವಿಭೂತಿಹಳ್ಳಿ,ರಾಜುಗೌಡ ಉಕ್ಕಿನಾಳ, ಕರಣ ಸುಬೇದಾರ ಸೇರಿದಂತೆ ಇತರರಿದ್ದರು.
ಆನೆ ಬೀದಿಯಲ್ಲಿ ಬರಲು ಶ್ವಾನ ತಾ ಬೊಗಳುವುದೆ:
ಧರ್ಮ ಸಂಸ್ಕೃತಿ ವಿರೋಧಿಸುವವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಡಿ, ಆನೆ ಬೀದಿಯಲ್ಲಿ ಬರಲು ಶ್ವಾನ ಬೊಗಳಿದರೆ ಆಗುವುದಾದರೇನು? ಹಿಂದಿನಿಂದಲೂ ಹಿಂದೂ ಧರ್ಮಕ್ಕೆ ಪೆಟ್ಟು ನೀಡುತ್ತಲೇ ಬಂದಿದ್ದಾರೆ, ಪ್ರತಿಯೊಬ್ಬರೂ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮಾತನಾಡಬೇಕು, ಹಿಂದೂ ಧರ್ಮ ಸಣ್ಣ ಸಣ್ಣ ಸಮಾಜಗಳಿಂದ ಕೂಡಿದ್ದು, ಧರ್ಮವೆಂದರೆ ಮತ್ತೊಬ್ಬರ ಕಣ್ಣೀರು ಒರಿಸುವುದು, ಹಸಿದವರಿಗೆ ಉಣ್ಣಿಸುವುದು, ಕಾಯಕದಲ್ಲಿ ಶ್ರೇಷ್ಠತೆ ಉಂಟು ಮಾಡುವುದಾಗಿದೆ ಎಂದು ಹೇಳಿದ ಕನ್ನೇರಿ ಶ್ರೀಗಳು ಕತ್ತೆ ಮತ್ತು ನಾಯಿಯ ಕಥೆಯೊಂದು ಹೇಳುವ ಮೂಲಕ ಈ ಸಮಾವೇಶ ವಿರೋಧಿಸಿ ಮೇ. 15 ರ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲ ಸ್ವಾಮೀಜಿಗಳ ಮಾತಿಗೆ ಪ್ರತ್ಯುರವಾಗಿ ಅವರನ್ನು ಮೂರ್ಖ ನಾಯಿಗಳಿಗೆ ಪರೋಕ್ಷವಾಗಿ ಹೋಲಿಸುವ ಮೂಲಕ ಟಾಂಗ್ ನೀಡಿದರು.
ಮಹಾರಾಷ್ಟ್ರದ ನಾಗಣಸೂರು ಮಠದ ಶ್ರೀಕಂಠ ಶಿವಾಚಾರ್ಯರು ಮಾತನಾಡಿ, ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲ ಒಂದಾಗಬೇಕಿದೆ. ಧರ್ಮ ಉಳಿದರೆ ನಾವು ಉಳಿಯುತ್ತೇವೆ. ಸನಾತನ ಧರ್ಮ ಕಗ್ಗೊಲೆ ಮಾಡುವವರಿಗೆ ತಕ್ಕ ಉತ್ತರ ನೀಡಿ ಎಂದು ತಿಳಿಸಿದರು.
ಮುಖಂಡರಾದ ಅಮೀನರೆಡ್ಡಿ ಯಾಳಗಿ ಮಾತನಾಡಿ, ಹಿಂದೂ ಸಮಾವೇಶಗಳು ಹಿಂದೂ ಧರ್ಮ ರಕ್ಷಣೆಗೆ ಹೊರತಾಗಿ ಯಾರ ವಿರುದ್ಧವೂ ಅಲ್ಲವೆಂದು ತಿಳಿಸಿದರು.
ಡಾ.ಚಂದ್ರಶೇಖರ ಸುಬೇದಾರ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುಂಚೆ ನಗರದಲ್ಲಿ ನೂರಾರು ಸಂಖ್ಯೆಯ ಪೂಜ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಸರ್ವ ಶರಣರ ಭಾವಚಿತ್ರಗಳು ಭವ್ಯ ಶೋಭಾಯಾತ್ರೆ ಜರುಗಿತು. ಸುಮಾರು ೮ ರಿಂದ ೧೦ ಸಾವಿರ ಜನ ಪಾಲ್ಗೊಂಡಿದ್ದರು. ಎರಡು ಸಾವಿರದ ಒಂದು ಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಾರೋಟದಲ್ಲಿ ತಾಯಿ ಭಾರತಾಂಬೆ ಮತ್ತು ಬಸವಣ್ಣ ಸೇರಿದಂತೆ ಸರ್ವ ಶರಣರಿದ್ದ ಭಾವಚಿತ್ರವಿಟ್ಟು ಶೋಭಾ ಯಾತ್ರೆ ಉದ್ದಕ್ಕೂ ಭಕ್ತಾಧಿಗಳು ಹೂಮಳೆಗರೆದು ನಮಿಸುವದು ಕಂಡು ಬಂದಿತು.
ಕಾರ್ಯಕ್ರಮದ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಚಂದ್ರಶೇಖರ್ ಗೋಗಿ ತಂಡ ಸಂಗೀತ ಸೇವೆ ನೆರವೇರಿಸಿಕೊಟ್ಟರು. ನಟರಾಜ ನೃತ್ಯ ಅಕಾಡೆಮಿ ತಂಡದಿಂದ ಭಾರತಾಂಬೆಯ ನೃತ್ಯ ಪ್ರದರ್ಶಿಸಿದರು.
ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಹಿಂದೂ ಸಮಾವೇಶ ಮಾಡಲು ಸಾಕಷ್ಟು ಅಡೆತಡೆ ಬಂದರೂ, ಸಮಸ್ತ ಸಮಾಜದ ಒಗ್ಗಟ್ಟಿನ ಸಂಕಲ್ಪದಿಂದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮತ್ತು ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರರ ಮಾರ್ಗದರ್ಶನದಲ್ಲಿ ಯಶಸ್ಸು ಕಂಡಿದೆ, ಹಿಂದೂ ಸಮಾಜ ಗಟ್ಟಿಯಾಗಲು ಸನ್ನದ್ಧರಾಗಿ.
– ಅಮೀನರಡ್ಡಿ ಪಾಟೀಲ್ ಯಾಳಗಿ. ಬಿಜೆಪಿ ಶಹಾಪುರ ಮತಕ್ಷೇತ್ರ ಮುಖಂಡರು.




