ರಾಜಕೀಯಕ್ಕೆ ಬರ್ತಾರಾ ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡರು?
ಮಾತಿನ ಮಲ್ಲ ಪ್ರೊ.ಕೃಷ್ಣೇಗೌಡರು ತಮ್ಮ ಮಾತಿನ ಮೂಲಕವೇ ನಾಡಿನ ಜನರ ಮನ ಗೆದ್ದಿದ್ದಾರೆ. ಕೃಷ್ಣೇಗೌಡರ ಮಾತೆಂದರೆ ಟಿವಿ ಚಾನಲ್ ಬದಲಾಗೋದೇ ಇಲ್ಲ. ಕೃಷ್ಣೇಗೌಡರ ಕಾರ್ಯಕ್ರಮವಿದೆ ಅಂದರೆ ಸಾಕು ಊರ ಜನ ಮನೇಲಿರೋದೆ ಇಲ್ಲ. ಎಲ್ಲರೂ ಕಾರ್ಯಕ್ರಮದ ವೇದಿಕೆ ಮುಂದೆ ಹಾಜರಿರುತ್ತಾರೆ. ನಕ್ಕು ನಲಿಯುವುದರ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರದ ಪಾಠವನ್ನು ಹೇಳುವ ಒಳ್ಳೇ ಮೇಷ್ಟ್ರು ಕೃಷ್ಣೇಗೌಡರು. ಆದರೆ, ಅಂತ ಅಪರೂಪದ ಮೇಷ್ಟ್ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬಂದಿವೆ.
ಆದರೆ, ಈ ಬಗ್ಗೆ ಇಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರೊ.ಕೃಷ್ಣೇಗೌಡರು ಮಾತ್ರ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ರಾಜಕೀಯ ನನ್ನ ಬದುಕು ಅಲ್ಲ. ಅದು ನನ್ನ ತಟ್ಟೆಯಲ್ಲಿರುವ ಆಹಾರ ಅಲ್ಲ ಅಂದಿದ್ದಾರೆ. ರಾಜಕೀಯದ ಬಗ್ಗೆ ಆಸಕ್ತಿ ಇದೆ. ಆದರೆ, ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲಕ್ಕೆ ಮಾತ್ರ ಸೀಮಿತ ಅಷ್ಟೇ ಅಂದಿದ್ದಾರೆ. ಹೂವಿನ ಅಂಗಡಿಯಲ್ಲಿ ಮಾಂಸ ಮಾರಾಟ ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು ನಾನೂ ರಾಜಕೀಯಕ್ಕೆ ಬರೋಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಮುಖಂಡರು ಎದುರಾದಾಗ ರಿಟೈರ್ಡಮೆಂಟ್ ಆಗಿದೆಯಲ್ಲಾ ಬಂದುಬಿಡಿ ರಾಜಕೀಯಕ್ಕೆ ಅಂದದ್ದುಂಟು. ಆದರೆ, ನಾನು ಅದನ್ನು ಸಿರೀಯಸ್ ಆಗಿ ತೆಗೆದುಕೊಂಡಿಲ್ಲ. ಸಿಎಂ ಸಿದ್ಧರಾಮಯ್ಯ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆಂಬ ಸುದ್ದಿ ಹರಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಈವರೆಗೆ ಸಿಎಂ ಈ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಒಂದು ವೇಳೆ ಮುಖ್ಯಮಂತ್ರಿಗಳೇ ಆಹ್ವಾನಿಸಿದರೂ ಸಹ ರಾಜಕೀಯ ನನ್ನ ಕ್ಷೇತ್ರವಲ್ಲ ಎಂದೇ ಹೇಳುತ್ತೇನೆ ಅನ್ನುವ ಮೂಲಕ ನೋ ಪಾಲಿಟಿಕ್ಸ್ ಎಂದು ಹಾಸ್ಯದರಸ ಪ್ರೊ.ಕೃಷ್ಣೇಗೌಡರು ಸ್ಪಷ್ಟಪಡಿಸಿದ್ದಾರೆ.