ಸಿದ್ಧ ಭಾಷಣ ಓದಿದ ಸಿಎಂ; ಸಿದ್ಧ ಭಾಷಣ ಓದಲ್ಲಾ ಎಂದ ಚಂಪಾ ಭಾಷಣ ಹೇಗಿತ್ತು?
ಮೈಸೂರು : ಸಿಎಂ ಸಿದ್ಧರಾಮಯ್ಯ 83 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಸಿದ್ಧ ಭಾಷಣ ಓದಿದರು. ಆ ಮೂಲಕ ಸಿದ್ಧರಾಮಯ್ಯ ಅವರ ಭರ್ಜರಿ ಭಾಷಣ ಕೇಳುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡಿಸಿದರು.
ಆದರೆ, ತದನಂತರ ಭಾಷಣಕ್ಕೆ ನಿಂತ ಸಮ್ಮೇಳನ ಅದ್ಯಕ್ಷ ಚಂದ್ರಶೇಖರ ಪಾಟೀಲ್ ನನ್ನ 40ನಿಮಿಷದ ಲಿಖಿತ ಭಾಷಣ ಸಿದ್ಧವಾಗಿದೆ. ಆದರೆ, ನಾನು ಅದನ್ನು ಓದುವುದಿಲ್ಲ ಎಂದು ಪಕ್ಕಕ್ಕಿಟ್ಟು ನಿಮ್ಮ ಮುಂದೆ ನಾನು 30 ರಿಂದ 40 ನಿಮಿಷ ಭಾಷಣ ಮಾಡ್ತೀನಿ. ಎಲ್ಲರೂ ತಾಳ್ಮೆಯಿಂದ ಕೇಳುತ್ತಿರಾ ? ಎಂದು ಪ್ರಶ್ನಿಸಿ ಭಾಷಣ ಆರಂಭಿಸಿದರು. ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಭಾಷಣ ಆರಂಭಿಸಿದ ಚಂಪಾ ಮಹಾಸಭೆಗೆ ನನ್ನ ವಂದನೆ. ಸಿಎಂ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವ ವೇಳೆ ದೀಪ ಹಚ್ಚುವಾಗ ನನ್ನ ಕೈ ಹಿಡಿದುಕೊಳ್ಳಿ ಎಂದರು. ಆಗ ಅವರೊಂದಿಗೆ ಕೈ ಜೋಡಿಸಿದೆ. ಕನ್ನಡಕ್ಕೆ ದೀಪ ಹಚ್ಚುವವರ ಕೈ ಹಿಡಿಯೋಣ. ಆದರೆ ಕನ್ನಡಕ್ಕೆ ಬೆಂಕಿ ಹಚ್ಚುವ ಕೈಗಳನ್ನು ಎಂದಿಗೂ ಹಿಡಿಯೋದು ಬೇಡ. ಬೆಂಕಿ ಹಚ್ಚುವ ಕೈಗಳಿಗೆ ಯಾರು ಸಾಥ್ ನೀಡಲ್ಲ ಎಂದರು. ಇಡೀ ಸಭೆ ಒಂದು ಕ್ಷಣ ಮಂತ್ರಮುಗ್ಧವಾಯಿತು.