ಶಹಾಪುರದ ಶಾಸಕ ಶಿರವಾಳ್ ಹೋರಾಟಕ್ಕೆ ಸೈ ಅಂತಾರಾ ಸಿಎಂ ಸಿದ್ಧರಾಮಯ್ಯ?
ಯಾದಗಿರಿ: ಶಹಾಪುರ ಮತಕ್ಷೇತ್ರದ ವ್ಯಾಪ್ತಿಯ ಸುರಪುರ ತಾಲೂಕಿನ 12 ಗ್ರಾಮಗಳನ್ನು ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಶಹಾಪುರ ಮತಕ್ಷೇತ್ರದ ಬಿಜೆಪಿ ಶಾಸಕ ಗುರು ಪಾಟೀಲ್ ಶಿರವಾಳ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಶಾಸಕ ಗುರು ಪಾಟೀಲ್ ಅವರು ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಬಂದು ಭರವಸೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಹಿಂಪಡೆಯುವಂತೆ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ. ಹೀಗಾಗಿ, ಡಿಸೆಂಬರ್ 16, ರವಿವಾರ ಸಿಎಂ ಸಿದ್ಧರಾಮಯ್ಯ ಯಾದಗಿರಿ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ರವಿವಾರ ಸಂಜೆ 7ಗಂಟೆ ಸುಮಾರಿಗೆ ಯಾದಗಿರಿ ನಗರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಬೇಡಿಕೆ ಈಡೇರಿಸುವ ಭರವಸೆ ನೀಡಲಿದ್ದಾರೆ. ಆ ಮೂಲಕ ಶಾಸಕ ಗುರು ಪಾಟೀಲ್ ನೇತೃತ್ವದಲ್ಲಿ ನಡೆಯಲಿರುವ ಧರಣಿ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ನಿಜಕ್ಕೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧರಣಿ ನಿರತ ಬಿಜೆಪಿ ಶಾಸಕರ ಬೇಡಿಕೆಗೆ ಸ್ಪಂದಿಸಲಿದ್ದಾರೆಯೇ ಎಂಬುದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕರ ಹೋರಾಟಕ್ಕೆ ಮಣಿದರೆ ಕಾಂಗ್ರೆಸ್ಸಿಗೆ ಮೈನಸ್ ಆಗಲಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿ ಶಾಸಕ ಗುರು ಪಾಟೀಲ್ ಗೆ ಮತ್ತಷ್ಟು ಬಲ ಬರಲಿದೆ. ಮತ್ತೊಂದು ಕಡೆ ಜನಪರ, ರೈತಪರ ಧರಣಿ ನಿರತ ಶಾಸಕರ ಹೋರಾಟಕ್ಕೆ ಕ್ಯಾರೆ ಅನ್ನದಿದ್ದರೆ ಅದೂ ಸಹ ಜನ ಕಾಂಗ್ರೆಸ್ ಸರ್ಕಾರದತ್ತಲೇ ಬೆಟ್ಟು ಮಾಡುವ ಸ್ಥಿತಿ ತರಲಿದೆ ಎಂದು ರಾಜಕೀಯ ಮುಖಂಡರು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ. ಹೀಗಾಗಿ, ಸಿಎಂ ಸಿದ್ಧರಾಮಯ್ಯ ಈ ಇಕ್ಕಟ್ಟಿನ ಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.