ಪ್ರಮುಖ ಸುದ್ದಿ

ಸೆರೆಯಾದ ಪುಂಡಾನೆಗೆ ಏಳಾನೆಗಳ ಎಸ್ಕಾರ್ಟ್ : ಹೇಗಿದೆ ಗೊತ್ತಾ ಕಾಡಾನೆ ಕಾರ್ಯಾಚರಣೆ, ಫುಲ್ ಡಿಟೇಲ್ಸ್ ಇಲ್ಲಿದೆ

 

ಜನರ ನೆಮ್ಮದಿ ಕೆಡಿಸಿದ್ದ ಪುಂಡಾನೆ ಸೆರೆ!

-ಮಲ್ಲಿಕಾರ್ಜುನ ಮುದನೂರ್

ದಾವಣಗೆರೆ: ಕಳೆದ ಒಂದು ತಿಂಗಳಿನಿಂದ ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಆಂಧ್ರದ ಗಡಿ ಭಾಗದ ಜನರ ನೆಮ್ಮದಿ ಕೆಡೆಸಿದ್ದ ಪುಂಡಾನೆ ಕೊನೆಗೆ ಸೆರೆ ಸಿಕ್ಕಿದೆ. ಕಳೆದ ಒಂದು ವಾರದಿಂದ ಸುಮಾರು 70ಜನ ಅರಣ್ಯ ಇಲಾಖೆ ಸಿಬ್ಬಂದಿ ಮೈಸೂರಿನ ದಸರಾ ಆನೆ ಅಭಿಮನ್ಯು ನೇತೃತ್ವದ ಐದು ಆನೆಗಳು ಹಾಗೂ ಶಿವಮೊಗ್ಗದ ಸಕ್ರೆಬೈಲ್ ನ ಎರಡು ಹೆಣ್ಣಾನೆಗಳನ್ನು ಬಳಸಿಕೊಂಡು ಪುಂಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು.

ಕಳೆದ ಒಂದು ತಿಂಗಳಿನಿಂದ ಒಟ್ಟು ಐವರ ಬಲಿ ಪಡೆದಿದ್ದ ಪುಂಡಾನೆ 20ಜನರನ್ನು ಗಾಯಗೊಳಿಸಿತ್ತು. ಹೀಗಾಗಿ, ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ಆದರೆ, ಕಳೆದ ಒಂದು ವಾರದಿಂದ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡಾನೆ ಎಸ್ಕೇಪ್ ಆಗಿತ್ತು. ಕೊನೆಗೂ ನಿನ್ನೆ ಸಂಜೆ ವೇಳೆ ಪುಂಡಾನೆ ಪತ್ತೆಯಾಗಿದ್ದು ಅರವಳಿಕೆ ಚುಚ್ಚುಮದ್ದು ನೀಡಿ ಏಳು ಸಾಕಾನೆಗಳ ಸೆಕುರಿಟಿ ಮದ್ಯೆ ಕಾಡಾನೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು.

ಕಾಡಾನೆ ಕಾರ್ಯಾಚರಣೆ ಹೀಗಿತ್ತು…

ನುರಿತ ಅರಣ್ಯ ಸಿಬ್ಬಂದಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬರಾಣಿ, ಮನಮಟ್ಟಿ ಕಾಡಿನ ಹೊಳ ಹೊಕ್ಕು ಪುಂಡಾನೆ ಪತ್ತೆಗೆ ಜಾಲ ಬೀಸಿದ್ದರು. ಶಾರ್ಪ್ ಶೂಟರ್ ಗಳ ತಂಡ ಶಸ್ತ್ರ ಸಮೇತರಾಗಿ ಆನೆ ಜಾಡು ಹಿಡಿದು ಒಂದು ವಾರದಿಂದ ಕಾಡಿನ ಮೂಲೆ ಮೂಲೆ ತಡಕಾಡಿದ್ದರು. ಕಾರ್ಯಾಚರಣೆಯ ಎರಡನೇ ದಿನವೇ ಪುಂಡಾನೆ ಸಿಕ್ಕಿದ್ದು ಅರಣ್ಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಬಂದಿದ್ದರು. ಸಾಕಾನೆಗಳ ಜೊತೆಗೆ ತೆರಳಿ ಅರಣ್ಯದಿಂದ ಪುಂಡಾನೆಯನ್ನು ಹೊರ ತರಲು ಮುಂದಾಗುವಷ್ಟರಲ್ಲಿ ಆದ್ಯಾವ ಮಾಯದಲ್ಲೋ ಗೊತ್ತಿಲ್ಲ ಪುಂಡಾನೆ ಎಸ್ಕೇಪ್ ಆಗಿತ್ತು.

ಮುಂದುವರೆದ ಕಾರ್ಯಾಚರಣೆ ವೇಳೆ  ಮತ್ತೊಂದು ಕಾಡಾನೆ ಪತ್ತೆಯಾಗಿದ್ದು ಅಭಿಮನ್ಯು ಜೊತೆ ಕಾಳಗಕ್ಕೆ ಇಳಿದಿತ್ತು. ಕಾಳಗದ ವೇಳೆ ಅರಣ್ಯ ಸಿಬ್ಬಂದಿಯತ್ತ ಧಾವಿಸುತ್ತಿದ್ದ ಕಡಾನೆಯನ್ನು ತಡೆದ ಅಭಿಮನ್ಯು ಕಾಡಾನೆಯ ದಂತ ಮುರಿದಿದ್ದ. ದಂತ ಭಗ್ನಗೊಂಡ ಕಾಡಾನೆ ಎಸ್ಕೇಪ್ ಆಗಿತ್ತು. ಬಳಿಕ ಎರಡು ದಿನಗಳ ಹಿಂದಷ್ಟೇ ದಂತ ಭಗ್ನಗೊಂಡಿರುವ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ನಾಡಿಗೆ ನಗ್ಗಿ ಉಪಟಳ ನೀಡಿದ್ದ ಪುಂಡಾನೆ ಮಾತ್ರ ಸಿಕ್ಕಿರಲಿಲ್ಲ.

ಪುಂಡಾನೆಗೆ ಹನಿಟ್ರ್ಯಾಪ್!

ಸಕ್ರೆಬೈಲ್ ನಿಂದ ಕರೆತರಲಾಗಿದ್ದ ಎರಡು ಹೆಣ್ಣಾನೆಗಳನ್ನು ಕಾಡಿನಲ್ಲಿ ಬಿಟ್ಟು ಕಾಡಿನ ಪುಂಡಾನೆಯನ್ನು ಸೆಳೆಯುವ ಪ್ರಯತ್ನ ನಡೆದಿತ್ತು. ಕೊನೆಗೂ ನಿನ್ನೆ ಹೆಣ್ಣಾನೆಗಳನ್ನು ಕಂಡು ಸನಿಹಕ್ಕೆ ಬಂದ ಪುಂಡಾನೆ ನಿನ್ನೆ ಸಂಜೆ ವೇಳೆ ಬಲೆಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಏಳು ಆನೆಗಳ ಸೆಕುರಿಟಿಯಲ್ಲಿ ಪುಂಡಾನೆಯನ್ನು ಮರಕ್ಕೆ ಕಟ್ಟಿ ಹಾಕಿದ್ದರು. ಅಲ್ಲದೆ ಪುಂಡಾನೆ ಎದ್ದು ಹೋಗದಂತೆ ಕಾಲಿಗೂ ಹಗ್ಗ ಬಿಗಿಯಲಾಗಿತ್ತು.

ಏಳಾನೆಗಳ ಎಸ್ಕಾರ್ಟ್!

ಇಂದು ಬೆಳಗ್ಗೆ ಪುಂಡಾನೆಯನ್ನು ಕಾಡಿನಿಂದ ಹೊರ ತರುವ ಕಾರ್ಯಾಚರಣೆ ನಡೆದಿದ್ದು ಏಳಾನೆಗಳ ಎಸ್ಕಾರ್ಟನಲ್ಲಿ ಕಾಡಾನೆಯಲ್ಲಿ ಮುನ್ನಡೆಸಲಾಗುತ್ತಿದೆ. ಕಾಡಾನೆಯ ಕಾಲು ಮತ್ತು ಎರಡು ಕಾಲಿಗೆ ಹಗ್ಗವನ್ನು ಕಟ್ಟಲಾಗಿದೆ. ಪುಂಡಾನೆಗೆ ಕಟ್ಟಿದ ಹಗ್ಗವನ್ನು ದಸರಾ ಆನೆ ಅಭಿಮನ್ಯು ಮತ್ತೆರಡು ಆನೆಗಳಿಗೆ ಕಟ್ಟಲಾಗಿದೆ. ಮುಂದೊಂದು ಆನೆ ಮತ್ತು ಪಕ್ಕದಲ್ಲಿ ಎರಡು ಆನೆ ಹಾಗೂ ಹಿಂಬದಿಯಲ್ಲಿ ಎರಡು ಆನೆಗಳಿದ್ದು ಎರಡು ಹೆಣ್ಣಾನೆಗಳು ಪುಂಡಾನೆಗೆ ಕಾಣದಂತೆ ಪೂರ್ಣ ಹಿಂಭಾಗದಲ್ಲಿ ಚಲಿಸುತ್ತಿವೆ. ಆದರೂ, ಪುಂಡಾನೆ ಕಾಡಿನಿಂದ ಹೊರ ಬರಲು ಹಿಂದೇಟು ಹಾಕುತ್ತಿದೆ. ಹೀಗಾಗಿ, ಸಾಕಾನೆಗಳು ಸೊಂಡಿಲು,  ಕೋರೆಯಿಂದ ತಿವಿಯುತ್ತ ಪುಂಡಾನೆಯನ್ನು ಮುಂದೆ ತಳ್ಳುತ್ತ ಸಾಗಿವೆ. ಸೆರೆಯಾದ ಪುಂಡಾನೆ ಕಾಡಿನಿಂದ ಹೊರಬರುತ್ತಿದ್ದಂತೆ ಲಾರಿ ಮೂಲಕ ಶಿವಮೊಗ್ಗದ ಸಕ್ರೆಬೈಲ್ ಗೆ ಸಾಗಿಸಲಾಗುವುದೆಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button