ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ವಂಚನೆ ಆರೋಪ
ಯಾದಗಿರಿಃಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ಸ್ಥಾಪಿತವಾದ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ವಂಚನೆಯಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿತು.
ತೊಗರಿ ಶಾಂಪಲ್ ಹೆಸರಿನಲ್ಲಿ ಪ್ರತಿ 50 ಕೆಜಿಗೆ 2 ಕೆಜಿಯಷ್ಟು ತೊಗರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಅಲ್ಲದೆ ಹಮಾಲಿ ಹೆಸರಿನಲ್ಲಿ ಕ್ವಿಂಟಲ್ಗೆ 50 ರಿಂದ 100 ರೂ. ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಒಟ್ಟಾರೆ ರೈತರಿಂದ ಹಣ ಸುಲಿಗೆ ನಿರಂತರ ನಡೆಯುತ್ತಿದ್ದು, ನಿತ್ಯ ಶ್ರಮದ ಕೂಲಿಯು ರೈತನಿಗೆ ದೊರಕದಾಗಿದೆ. ಕಾರಣ ಜಿಲ್ಲಾಧಿಕಾರಿಗಳು ಕೂಡಲೇ ತೊಗರಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ಮತ್ತು ಆನ್ ಲೈನ್ ಅರ್ಜಿಯಲ್ಲೂ ಬಾರಿ ಪ್ರಮಾಣ ಅಕ್ರಮ ನಡೆದಿದೆ. ಗಂಜ್ ಪ್ರದೇಶದಲ್ಲಿರುವ ದಲ್ಲಾಳಿಗಳು ತಮ್ಮ ತೊಗರಿಯನ್ನು ಸಣ್ಣ ರೈತರ ಹೆಸರಿಲ್ಲಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ತಾವು ದುಡ್ಡು ಪಡೆಯುತ್ತಿದ್ದು, ಸರ್ಕಾರಕ್ಕೂ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗಾದ ಮೋಸ, ವಂಚನೆ ಸರಿಪಡಿಸುವರಾರು. ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ತೊಗರಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮಲ್ಲಗೌಡ ಪರಿವಾಣ, ಸಿದ್ರಾಮಪ್ಪಗೌಡ ಮದರಕಲ್, ಭೀಮರಾಯಗೌಡ ಹುಲಕಲ್, ಚಂದ್ರಶೇಖರ ಸಲಾದಪುರ, ನಿಂಗಣ್ಣ ವಡಿಗೇರಿ, ಚಂದ್ರಶೇಖರ ಬ್ಯಾರಿ, ಭೀಮಾಶಂಕರ ಸಲಾದಪುರ, ಮಲ್ಲಪ್ಪ ಮುಡಬೂಳ, ಅಂಬರೀಶ, ಪರಶುರಾಮ ಮುಡಬೂಳ ಸೇರಿದಂತೆ ಇತರರಿದ್ದರು.