ಕಣ್ಣೀರ ಕಹಾನಿ! ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ…
ಚಿತ್ರದುರ್ಗ: ಸೋದರತ್ತೆಯ ಮಗಳೊಂದಿಗೆ ಪ್ರೇಮ ಸಲ್ಲಾಪವಾಡಿದ ನಟ ಭಯಂಕರ ಮತ್ತೋರ್ವ ಸೋದರತ್ತೆಯ ಮಗಳೊಂದಿಗೆ ಮದುವೆ ಆಗಲು ಸಜ್ಜಾಗಿ ತಗ್ಲಾಕಿಕೊಂಡಿದ್ದಾನೆ. ಜೋಡಿ ಚಿಕ್ಕೇನಹಳ್ಳಿಯ ಮಧು ಎಂಬ ಯುವಕ ಸೋದರತ್ತೆ ಮಗಳೊಂದಿಗೆ ಕಳೆದ ಮೂರು ವರ್ಷಗಳಿಂದ ಲವ್ವಿ ಡವ್ವಿಯಲ್ಲಿ ತೊಡಗಿದ್ದಾನೆ. ಆದರೆ, ಪೋಷಕರು ವಿರೋಧ ವ್ಯಕ್ತಪಡಿಸಿದಾಕ್ಷಣ ಮತ್ತೋರ್ವ ಸೋದರತ್ತೆಯ ಮಗಳೊಂದಿಗೆ ವಿವಾಹಕ್ಕೆ ಸಜ್ಜಾಗಿದ್ದಾನೆ. ಅವನು ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗ್ಗೆ 9ಗಂಟೆಗೆ ಮೂಹೂರ್ತ ನೆರವೇರಬೇಕಿತ್ತು.
ಆದರೆ, ಸುಮ್ಮನಿಲ್ಲದೆ ಇರುವೆ ಬಿಟ್ಟುಕೊಂಡರು ಅಂತಾರಲ್ಲ ಹಾಗೇ ಈ ನಟ ಭಯಂಕರ ನಿನ್ನೆ ರಾತ್ರಿಯೇ ಹಳೇ ಲವರ್ ಜೊತೆಗೆ ಫೋನ್ ಸಂಭಾಷಣೆ ನಡೆಸಿದ್ದಾನೆ. ಮೊದಲು ನಿನಗೇ ತಾಳಿ ಕಟ್ಟಿ ಆಮೇಲೆ ನನ್ನ ಪೋಷಕರು ಹೇಳಿದವಳೊಂದಿಗೆ ಮದುವೆ ಆಗ್ತೀನಿ. ಅಂದಿದ್ದಾನೆ. ಅಲ್ಲದೆ ಚಿತ್ರದುರ್ಗಕ್ಕೆ ಬಂದು ಬಿಡು ಬೆಳಗ್ಗೆ 8ಕ್ಕೆ ನಿನಗೆ ತಾಳಿಕಟ್ಟುತ್ತೇನೆ. ಆಮೇಲೆ ಹೋಗಿ ನಿಶ್ಚಯ ಆಗಿರುವವಳ ಜೊತೆ ಹಸೆಮಣೆ ಏರುತ್ತೇನೆ ಅಂದಿದ್ದನಂತೆ.
ಹಳೇ ಹುಡುಗಿ ಚಿತ್ರದುರ್ಗಕ್ಕೆ ಬಂದರೆ ವರ ಮಹಾಶಯ ನಾಪತ್ತೆಯಾಗಿದ್ದಾನೆ. ಪರಿಣಾಮ ಆತಂಕಗೊಂಡ ಯುವತಿ ಮಹಿಳಾ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ತಕ್ಷಣಕ್ಕೆ ಪೊಲೀಸರು ಈರಜ್ಜನಹಟ್ಟಿಗೆ ತೆರಳಿ ವರ ಮಹಾಶಯನನ್ನು ಹಿಡಿದು ತಂದಿದ್ದಾರೆ. ಆಗಲೂ ಹಳೇ ಹುಡುಗಿ ಜೊತೆ ಲವ್ ಎಮೋಷನಲ್ ಗೇಮ್ ಪ್ಲಾನ್ ಗೆ ಯತ್ನಿಸಿ ವಿಫಲನಾಗಿದ್ದಾನೆ. ತನ್ನ ಆಟವಿನ್ನು ನಡೆಯೋಲ್ಲ ಅಂತ ತಿಳಿದ ಬಳಿಕ ಠಾಣೆಯಲ್ಲಿ ಮೌನಕ್ಕೆ ಶರಣಾಗಿದ್ದಾನೆ. ಹೀಗಾಗಿ, ಒಂದು ಕಡೆ ಹಳೇ ಹುಡುಗಿ ವಂಚನೆ ಮತ್ತು ಬಲತ್ಕಾರ ಕೇಸು ದಾಖಲಿಸಿದ್ದಾಳೆ. ಮತ್ತೊಂದು ಕಡೆ ಮದುವೆಗೆ ಬ್ರೇಕ್ ಬಿದ್ದಿದ್ದು ಮಧುವಣಗಿತ್ತಿ ಸಮೇತ ಪೋಷಕರು ಠಾಣೆಗೆ ಬಂದಿದ್ದು ಮಧು ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.
ಸೋದರತ್ತೆಯ ಮಕ್ಕಳ ಬಾಳಿಗೆ ಕೊಳ್ಳಿ ಇಟ್ಟಿರುವ ಮಧುಗೆ ಈಗ ವಿಷ ಗಳಿಗೆ ಶುರುವಾಗಿದೆ. ಹುಡುಗಿಯರೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದ ಮಧುಗಿನ್ನು ಜೈಲು ಕಂಬಿ ಎಣಿಸುವ ಗತಿ ಬಂದೊಂದಗಿದೆ. ಪೊಲೀಸರು ಇಂಥ ನಯವಂಚಕರಿಗೆ ಸರಿಯಾದ ಕಾನೂನು ಶಿಕ್ಷೆ ಕೊಡಿಸಬೇಕಿದೆ. ಆ ಮೂಲಕ ಹುಡುಗಿಯರ ಬಾಳಲ್ಲಿ ಚಲ್ಲಾಟ ಆಡುವ ಇಂಥ ವಂಚಕರಿಗೆ ಸರಿಯಾದ ಪಾಠ ಕಲಿಸಬೇಕಿದೆ.