ಪ್ರಮುಖ ಸುದ್ದಿ

ಹೆಚ್ಚುತ್ತಿರುವ ಅಪಘಾತಗಳು ನಾಗರಿಕರಿಂದ ಕಳವಳಃ ಸೂಕ್ತ ಕ್ರಮಕ್ಕೆ ಎಸಿ ಮಂಜುನಾಥ ಭರವಸೆ

ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಇಲ್ಲಿನ ನಾಗರಿಕ ಯುವ ವೇದಿಕೆವತಿಯಿಂದ ನಗರದ ಸಿಬಿ ಕಮಾನ್‍ದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಶುಕ್ರವಾರ ಜರುಗಿತು.

ನಗರದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಮರ್ಪಕ ಸಂಚಾರಿ ನಿಯಮ ಪಾಲನೆಗೆ ಒತ್ತು ನೀಡಬೇಕಿದೆ. ಅಲ್ಲದೆ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಅಗತ್ಯವಿದೆ. ಅದಕ್ಕೂ ಮುಂಚಿತವಾಗಿ ಅಗತ್ಯ ಕ್ರಮಕೈಗೊಳ್ಳುವ ಮೂಲಕ ಅಪಘಾತ ತಡೆಗೆ ಎಚ್ಚರಿಕೆಹಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಕಳೆದ 6 ತಿಂಗಳಲ್ಲಿ 7 ಜನ ಸಹೋದರರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಮೊನ್ನೆ ಮೊನ್ನೆ ನಗರದ ಕನ್ಯಾಕೋಳೂರ ಅಗಸಿ ಹತ್ತಿರ ಸುರಪುರ ಮಾರ್ಗ ಹೆದ್ದಾರಿಯಲ್ಲಿ ಸಹೋದರ ಗಿರಿ ಜಾಕಾ ಮತ್ತು ಸಂತೋಷ ಹಳಿಮನಿ ಎಂಬ ಯುವಕರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಅಲ್ಲದೆ ಮುಂಚಿತವಾಗಿ ಮಹಿಬೂಬ್ ಮತ್ತು ಜ್ಞಾನೇಶ್ವರ, ಮೌನೇಶ ವಿಶ್ವಕರ್ಮ ಸೇರಿದಂತೆ ಇತರರು ಅಪಘಾತಕ್ಕೊಳಗಾಗಿ ಮೃತಪಟ್ಟವರಾಗಿದ್ದು, ಮನೆಯ ಜವಬ್ದಾರಿ ಹೊತ್ತವರೇ ಅಪಘಾತಗಳಲ್ಲಿ ಮೃತಪಟ್ಟಾಗ, ಆ ಮನೆ ಅಕ್ಷರಶಃ ಬೀದಿಗೆ ಬಂದಂತೆ. ಅಂತಹ ಕುಟಂಬಗಳಲ್ಲಿ ನಿತ್ಯ ರೋದನೆ ಕಂಡು ಬರುತ್ತಿದೆ ಇದಕ್ಕೆಲ್ಲ ಯಾರು ಜವಬ್ದಾರರು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಾರಣ ಇಲ್ಲಿನ ಅವೈಜ್ಞಾನಿಕ ಸಂಚಾರ ನಿಯಮ, ಯಾವುದೇ ಸಂಚಾರ ನಿಯಮ ಪಾಲನೆ, ಟ್ರಾಫಿಕ್ ಜಾಸ್ತಿಯಾಗಿದೆ. ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಅಗತ್ಯವಿದೆ. ಸಂಚಾರಿ ದೀಪಗಳು ಅಳವಡಿಸಲಾಗಿದೆ ಆದರೆ ಕಾರ್ಯಾಚರಣೆ ಇಲ್ಲ, ಸ್ಥಗಿತಗೊಂಡು ಬಹಳದಿನಗಳೇ ಕಳೆದಿವೆ. ಹೀಗಾಗಿ ಕೂಡಲೇ ಅಪಘಾತ ತಡೆಗೆ ರೋಡ್ ಡಿವೈಡರ್ ಮತ್ತು ಸಂಚಾರಿ ದೀಪಗಳು ಸೇರಿದಂತೆ ಸಿಸಿ ಕ್ಯಾಮೆರಾಗಳನ್ನು ನಗರದ ಹಲವಡೆ ಅಳವಡಿಸಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಮಂಜುನಾಥ ಸ್ವಾಮಿ ಮನವಿ ಸ್ವೀಕರಿಸಿ ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಾಗರಿಕ ಯುವ ವೇದಿಕೆ ಕಾರ್ಯಕರ್ತರು ಸೇರಿದಂತೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ ಸೋಮಶೇಖರ ಅರಳಗುಂಡಗಿ ಇದ್ದರು. ಇದೇ ಸಂದರ್ಭ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಿದರು. ಸಿಪಿಐ ನಾಗರಾಜ ಜೆ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

 ಸಿಟಿ ಹೊರಗಡೆ ಭಾರಿ ಗಾತ್ರದ ವಾಹನ ಚಾಲಕರ ತಪಾಸಣೆ ಅಗತ್ಯ

ನಗರದಿಂದಲೇ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವದರಿಂದ ವಾಹನಗಳ ಭರಾಟೆ ಜಾಸ್ತಿ ಇದೆ. ಮರಳು ಸಾಗಾಣಿಕೆ ಟಿಪ್ಪರ್‍ಗಳು ಮತ್ತು ಕಬ್ಬು ಸಾಗಾಣಿಕೆ ಲಾರಿಗಳು ರಾತ್ರಿ ಹಗಲು ಎಡೆಬಿಡದೆ ಸಂಚಾರವಿದೆ. ಲಾರಿ ಚಾಲಕರು ಕುಡಿದ ಅಮಲಿನಲ್ಲಿ ವಾಹನ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಲಾರಿ, ಟಿಪ್ಪರ್ ಚಾಲಕರನ್ನು ನಗರದೊಳಗಡೆ ಪ್ರವೇಶಿಸುವಾಗ ತಪಾಸಣೆಗೆ ಒಳಪಡಿಸಿದ ನಂತರ ನಗರ ಪ್ರವೇಶ ಅವಕಾಶ ಕಲ್ಪಿಸುವ ಅಗತ್ಯವಿದೆ.

ಸಾಕಷ್ಟು ಅಪಘಾತಗಳಲ್ಲಿ ಚಾಲಕರ ನಿರ್ಲಕ್ಷ, ಕುಡಿದ ಅಮಲಿನಿಂದಲೆ ಘಟನೆಗಳು ಸಂಭವಿಸಿವೆ. ಇದಕ್ಕೆಲ್ಲ ಕಡಿವಾಣ ಅಗತ್ಯವೆಂದು ಪ್ರತಿಭಟನಾನಿರತ ನಾಗರಿಕರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button