ಮಹಿಳಾ ವಾಣಿ

‘ಕೌದಿ’ ಬರೀ ಬಣ್ಣದ ಹೊದಿಕೆ ಅಲ್ಲ ಭಾವಗಳ ಬೆಸುಗೆ, ಹೂವಿನ ಹಾಸಿಗೆ

‘ಕೌದಿ ಆಯಿ’ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ

– ಮಲ್ಲಿಕಾರ್ಜುನ ಮುದನೂರ್

ಕೌದಿ ಅದು ಬರೀ ಬಣ್ಣದ ಹೊದಿಕೆ ಅಲ್ಲ. ಭಾವಗಳ ಬೆಸುಗೆ, ಹೂವಿನ ಹಾಸಿಗೆ. ಮಧುರ ನೆನಪುಗಳ ಸಾಗರ, ಪ್ರೀತಿ-ಮಮತೆಯ ಆಗರ. ಅಪ್ಪನ ಧೋತ್ರ, ಅಮ್ಮನ ಸೀರೆ, ಅಣ್ಣನ ಅಂಗಿ, ತಂಗಿಯ ಲಂಗ… ಎಲ್ಲವೂ ಸೇರಿ ಕೌದಿ ಆಗಿರುತ್ತದೆ. ಪ್ರತಿ ರಾತ್ರಿ ಕೌದಿ ಹಾಸಿದರೆ ಸಾಕು ಸಾವಿರ ಸಾವಿರ ನೆನಪುಗಳ ಚಿತ್ತಾರ ಕಣ್ಮನಗಳಲ್ಲಿ ಸರಿದಾಡುತ್ತವೆ. ತವರುಮನೆಯವರು ಉಡಿತುಂಬಿದ ಸೀರೆ, ನಾಗರ ಪಂಚಮಿಗೆ ಅಣ್ಣ ಕೊಡಿಸಿದ ಪ್ರೀತಿಯ ಸೀರೆ. ಅಪ್ಪ ಕೊಡಿಸಿದ ಬಣ್ಣದ ಅಂಗಿ, ಅಣ್ಣ ಕೊಡಿಸಿದ ಮಮತೆಯ ಚೂಡಿದಾರ. ಅರೇ, ಈ ಡ್ರೆಸ್ ಕೊಡಿಸಲು ಅಣ್ಣ ಸಾಲ ಮಾಡಿದ್ದ. ಇದು ಹಠ ಮಾಡಿ ಅಪ್ಪನಿಂದ ಒದೆ ತಿಂದು ತೆಗೆದುಕೊಂಡ ಡ್ರೆಸ್. ಹೀಗೆ ಬಿಚ್ಚಿಕೊಳ್ಳುತ್ತ ಸಾಗುತ್ತದೆ ನೆನಪಿನ ಬುತ್ತಿ. ಅಂತಹ ಭಾವಗಳ ಬೆಸುಗೆಯ ಕೌದಿ ನಿಜಕ್ಕೂ ಹೂವಿನ ಹಾಸಿಗೆಯೇ ಸರಿ. ಕೌದಿ ಹಾಸಿ ಹೊದ್ದು ಮಲಗಿದರೆ ಹೂವಿನ ಪಲ್ಲಕ್ಕಿಯ ಅನುಭವ.

ಹೌದು ಇಷ್ಟೆಲ್ಲಾ ಪೀಠಿಕೆ ಯಾಕಂತೀರಾ ನಮ್ಮ ನಾಡಿನ ಕೌದಿ ಕಲೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯ ಶಾಣಮ್ಮ ಮ್ಯಾಗೇರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ 1ಲಕ್ಷ ರೂಪಾಯಿ ನಗದು, 20ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ನಿಜಕ್ಕೂ ನಮ್ಮ ನಾಡಿನ ಕೌದಿ ಕಲೆಗೆ ಲಭಿಸಿದ ಗೌರವವದು. ಶಾಣಮ್ಮ ಮ್ಯಾಗೇರಿ ಸುಮಾರು 400ಕೌದಿಗಳನ್ನು ಒಲಿದಿದ್ದಾರೆ. ವಿಶೇಷ ಅಂದರೆ ಶಾಣಮ್ಮ ತತ್ವಪದ, ಭಜನೆ ಹಾಡುಗಳನ್ನು ಹಾಡುತ್ತಲೇ ಕೌದಿಗಳನ್ನು ಒಲೆಯುತ್ತಾರೆ. ಇಳಿ ವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳದೆ ಕಣ್ಣಲ್ಲಿ ಕಣ್ಣಿಟ್ಟು ಕೌದಿ ಒಲೆಯುವ ಶಾಣಮ್ಮ ಆಯಿ ನಿಜಕ್ಕೂ ಮಾದರಿ ತಾಯಿ. ಆದರೆ, ಸರ್ಕಾರವೇನೋ ಕೌದಿ ಕಲೆಯ ಪ್ರತಿಭೆಯನ್ನು ಗುರುತಿಸಿ ಶಾಣಮ್ಮ ಮ್ಯಾಗೇರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ, ಕಡು ಬಡತನದಲ್ಲಿರುವ ಶಾಣಮ್ಮ ಮ್ಯಾಗೇರಿಗೆ ಇರಲು ಸೂರು ಕಲ್ಪಿಸಬೇಕಿದೆ ಎಂಬುದು ಕುಟುಂಬದವರ ಮನವಿಯಾಗಿದೆ.

ಮಲ್ಲಿಕಾರ್ಜುನ ಮುದನೂರ್, ಲೇಖಕರು

ಸೂಜಿ ಹಿಡಿದು ತಲೆ ಬಗ್ಗಿಸಿ ಕೌದಿ ಒಲೆಯುವುದು ಸುಲಭದ ಮಾತಲ್ಲ. ಅದೊಂದು ಏಕಾಗ್ರತೆ ಸಾಧಿಸುವ ಧ್ಯಾನವೆನ್ನಬಹುದು. ಸೀರೆ ಒಲೆಯಲು ಮೊದಲು ಲ್ಯಾವಿ ಹಾಕುವ ಸಂಪ್ರದಾಯವಿದೆ. ಬಳಿಕ ಎರಡು ಸೀರೆಗಳ ಮದ್ಯೆ ಬಟ್ಟೆಯ ತುಂಡುಗಳನ್ನು ಸೇರಿಸಿ ಒಲೆಯಬೇಕು. ಅಲ್ಲದೆ ಕೌದಿಯ ನಾಲ್ಕು ಮೂಲೆಗಳಲ್ಲಿ ಬಣ್ಣ ಬಣ್ಣದ ತುಂಡು ಬಟ್ಟೆಗಳನ್ನು ಬಳಸಿ ಗುಬ್ಬಿ ಚಿತ್ರ, ಚಂದ್ರ, ಸೂರ್ಯ, ನವಿಲು ಹೀಗೆ ನಾನಾ ಬಗೆಯ ಚಿತ್ರಗಳನ್ನು ಬಿಡಿಸಲಾಗುತ್ತದೆ. ಮದ್ಯದಲ್ಲೂ ನಾಲ್ಕಾರು ಬಣ್ಣದ ಬಟ್ಟೆಗಳನ್ನು ಜೋಡಿಸಿ ಚೌಕಾಕಾರ, ಮನೆಯ ಚಿತ್ರ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕೌದಿಯ ಮೇಲ್ಭಾಗದ ಮೂಲೆಗಳಲ್ಲಿ ಹಾಗೂ ಮದ್ಯ ಭಾಗದಲ್ಲಿ ಮನೆ ಮಂದಿಯ ಒಂದೊಂದು ಬಟ್ಟೆ ತುಂಡುಗಳು ಕಾಣಿಸುವಂತೆ ಕೌದಿಯನ್ನು ಒಲೆಯಲಾಗುತ್ತದೆ. ಹೀಗೆ ಕೌದಿ ಒಲೆಯುವುದೂ ಒಂದು ಅಪರೂಪದ ಕಲೆಯಾಗಿದ್ದು ಉತ್ತರ ಕರ್ನಾಟಕ ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಕೌದಿ ಒಲೆಯುವ ಕಲೆ ಹೆಚ್ಚಾಗಿ ಕಂಡು ಬರುತ್ತದೆ. ಎನಿವೇ ಕೌದಿ ಕಲೆಗೆ ನಮ್ಮ ನಾಡಿನ ಶಾಣಮ್ಮ ಆಯಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಮತ್ತೊಮ್ಮೆ ಶಾಣಮ್ಮ ಮ್ಯಾಗೇರಿ ಅವರಿಗೆ ವಿನಯವಾಣಿ ಬಳಗದ ಪರವಾಗಿ ಅಭಿನಂದನೆಗಳು…

Related Articles

One Comment

  1. ವಾವ್ ಅದ್ಬುತ ಸಾಲುಗಳು. ಚುಮು‌ಚುಮು‌ ಚಳಿಯಲಿ ಕೌದಿಯ ಹೆಸರೇ ಬೆಚ್ಚನೆಯ ಅನುಭವ ನೀಡುತ್ತೆ…

Leave a Reply

Your email address will not be published. Required fields are marked *

Back to top button