ಪ್ರಮುಖ ಸುದ್ದಿ

ದೋರನಹಳ್ಳಿಯಲ್ಲಿ ಮಾದರಿ ನಿರಾಶ್ರಿತ ಕೇಂದ್ರ ನಿರ್ಮಾಣ-ಮುದ್ನಾಳ

3.97 ಕೋಟಿ ವೆಚ್ಚದ ನಿರಾಶ್ರಿತರ ಕೇಂದ್ರಕ್ಕೆ ಅಡಿಗಲ್ಲು

yadgiri, ಶಹಾಪುರಃ ಜಿಲ್ಲೆಯ ನಿರಾಶ್ರಿತರಿಗಾಗಿ ಮಾದರಿ ಕೇಂದ್ರವೊಂದು ನಿರ್ಮಿಸಲಾಗುತ್ತಿದ್ದು, ನಿರ್ಮಿತ ಕೇಂದ್ರದ ಅಧಿಕಾರಿಗಳು ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕಟ್ಟಡಗಳು ಜನಮಾನಸದಲ್ಲಿ ಹೆಸರು ಮಾಡಲಿವೆ ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ ತಿಳಿಸಿದರು.

ಯಾದಗಿರಿ ಮತಕ್ಷೇತ್ರದ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಿರಾಶ್ರಿತ ಕೇಂದ್ರ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ದೋರನಹಳ್ಳಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನ ಸಾಂದ್ರತೆ ಹೊಂದಿದೆ. ಈ ಮೊದಲು 5 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಪ್ರಸ್ತುತ 3.97 ಕೋಟಿ ವೆಚ್ಚದಲ್ಲಿ ನಿರಾಶ್ರಿತ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ.

ನಿರ್ಮಿತ ಕೇಂದ್ರದ ಅಧಿಕಾರಿಗಳು ಕಟ್ಟಡ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿರದಂತೆ ಎಚ್ಚರಿಕೆವಹಿಸಬೇಕು. ಕಳಪೆ ಕಾಮಗಾರಿ ಎಂದು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಈ ಭಾಗದ ಯಾವುದೇ ಸಮಸ್ಯೆ ಪರಿಹಾರಕ್ಕೆ ನಾನು ಸದಾ ಸಿದ್ಧನಿದ್ದು, ಅಧಿಕಾರದ ಕೊನೆಗಳಿಗೆವರೆಗೂ ನಾನು ಅಭಿವೃದ್ಧಿಗಾಗಿ ಶ್ರಮಿಸುವೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಎಸ್. ಚೆನ್ನಬಸವ ಪ್ರಾಸ್ತವಿಕವಾಗಿ ಮಾತನಾಡಿ, ಈ ಕಟ್ಟಡ ಬಹುಜನರಿಗೆ ಆಶ್ರಯತಾಣ ಆಗಲಿದೆ. ಇದು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಬೇಕಿತ್ತು, ಆದರೆ ಶಾಸಕರ ಮತ್ತು ಈ ಭಾಗದ ಮುಖಂಡರುಗಳ ವಿಶೇಷ ಕಾಳಜಿಯಿಂದ ಈ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗಣ್ಣಗೌಡ ಪೋ.ಪಾಟೀಲ್, ದೊಡ್ಡಪ್ಪ ದೇಸಾಯಿ, ಗೊಲ್ಲಾಳಪ್ಪ ಗೋಲಗೇರಿ, ಕಲ್ಲಪ್ಪ ಖಾನಾಪೂರ್, ಬಾಲಪ್ಪ ಕಶೆಟ್ಟಿ, ಬಸ್ಸಪ್ಪ ಹುರಸಗುಂಡಗಿ, ಮಲ್ಲಿನಾಥ ಮಲಗೊಂಡ, ಚಿದಾನಂದ ಛಲವಾದಿ, ಮಲ್ಲಿಕಾರ್ಜುನ್ ಸಗರ್, ಶರಣಪ್ಪ ಗುಂಟನೂರ್, ಜೆಟ್ಟೆಪ್ಪ ಬಿರಾಳ್, ಹಣಮಂತ ಗುಂಡಕನಾಳ್, ಷಣ್ಮುಖಪ್ಪ ಕಕ್ಕೇರಿ, ಪ್ರಭುರಾಯ ಮಲಗೊಂಡ, ಡಿಟಿ ಸಂಗಮೇಶ, ಆರ್‍ಐ ದೇವರಾಜ, ವಿಎ ಭೀಮರೆಡ್ಡಿ ಸೇರಿದಂತೆ ಇತರರಿದ್ದರು.

ಪ್ರಸ್ತುತ ದೋರನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ನಿರಾಶ್ರಿತ ಕೇಂದ್ರದ ಜಮೀನಿನಲ್ಲಿ ನಾನು ಈ ಮೊದಲಿನಿಂದಲೂ ಅಂದಾಜು 20 ವರ್ಷದಿಂದ ಉಳುಮೆ ಮಾಡುತ್ತಾ ಬಂದಿರುವೆ. ನನಗೆ ಯಾವುದೇ ಭೂಮಿ ಇರುವದಿಲ್ಲ. ನಾನು ಉಳುಮೆ ಮಾಡುತ್ತಾ ಬಂದಿರುವದು ಸರ್ಕಾರಿ ಜಮೀನು, ಇದರಲ್ಲಿಯೇ ನಿರಾಶ್ರಿತ ಕೇಂದ್ರ ನಿರ್ಮಾಣವಾಗುತ್ತಿದೆ. ಇದರಿಂದ ನನ್ನ ಕುಟುಂಬ ನಾನು ಬೀದಿ ಪಾಲಾಗಿದ್ದೇವೆ ಎಂದು ರೈತ ದೇವಿಂದ್ರಪ್ಪ ಅವಗೊಂಡ ಕಣ್ಣೀರು ಹಾಕಿದ್ದಾರೆ.

ಅಲ್ಲದೆ ಸರ್ಕಾರ ನಮಗೆ ಬದುಕಲು ನನಗೆ ಕೆಲಸ ಕೊಡಬೇಕು. ಇಲ್ಲ ಬೇರೆ ಜಮೀನು ನೀಡಲಿ, ನಾನು ಕುಟುಂಬದ ಬದುಕಿನ ನಿರ್ವಹಣೆ ಹೇಗೆ ಮಾಡಲಿ. ಹಲವಾರು ವರ್ಷಗಳಿಂದ ಈ ಭೂಮಿಯನ್ನೆ ನಂಬಿ ಬದುಕುತ್ತಿದ್ದೇವು. ಇದೀಗ ಅದು ಕೈಜಾರಿದ್ದು, ನಾವು ಹೇಗೆ ಬದುಕಬೇಕು.? ಕುಟುಂಬ ಬದುಕಿಸಲು ಒಂದು ಮಾರ್ಗ ತೋರಿಸಿ ನಿರಾಶ್ರಿತ ಕೇಂದ್ರ ನಿರ್ಮಿಸಿ ಎಂದು ಆತ ತನ್ನ ಅಳಲನ್ನು ಮಾಧ್ಯಮದ ಎದುರು ತೋಡಿಕೊಂಡಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button