
ಶಹಾಪುರ ಗದ್ದುಗೆಯಲ್ಲಿ ಮಹಿಳಾ ಮಹೋತ್ಸವ
ಶುದ್ಧ ಶ್ರಾವಣದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
yadgiri, ಶಹಾಪುರಃ ನಗರದ ಶ್ರೀಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಲೋಕ ಕಲ್ಯಾಣಾರ್ಥವಾಗಿ ಸಂಗೀತ ಸೇವಾ ಸಮಿತಿಯಿಂದ ಶ್ರಾವಣ ಮಾಸದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ಮೂಲಮಠ ಬಾಡಿಯಾಲದ ಚನ್ನವೀರ ಶಿವಾಚಾರ್ಯರು ಮಾತನಾಡಿ, ಅನಾದಿಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಪುರಾಣದಲ್ಲಿ ಉಲ್ಲೇಖಿಸಿದಂತೆ ಮಹಿಳೆಯರಿಗೆ ಎಲ್ಲಿ ಗೌರವ ನೀಡಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಅಕ್ಷರಶಃ ಸತ್ಯ. ಆ ನಿಟ್ಟಿನಲ್ಲಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಕಳೆದ 14 ವರ್ಷದಿಂದ ಮುತೈದೆಯರಿಗೆ ಉಡಿ ತುಂಬುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯವಾಗಿದೆ.
ಮುತೈದೆಯರಿಗೂ ಉಡಿ ತುಂಬಿಕೊಳ್ಳುವ ಕಾರ್ಯಮವೆಂದರೆ ಧಾರ್ಮಿಕವಾಗಿ ಅಷ್ಟೆ ಇಷ್ಟವೂ ಹೌದು. ಅವರ ಕುಟುಂಬ ರಕ್ಷಣೆಗೆ ಉಡಿ ತುಂಬಿಸಿಕೊಳ್ಳುವ ಕಾರ್ಯ ಮಹಿಳೆಯರಲ್ಲಿ ಅತೀವ ಸಂತಸವನ್ನು ನೀಡುವದಾಗಿದೆ. ಮಹಿಳೆಯರು ಮನಸ್ಪೂರ್ವಕವಾಗಿ ಹರಸುವದರಿಂದ ಅವರ ಹರಕೆಯಂತೆ ಮನೋಅಭಿಲಾಷೆ ಈಡೇರಲಿದೆ ಎಂಬ ನಂಬಿಕೆ ಜೀವಂತವಾಗಿದೆ ಎಂದರು.
ಉಡಿ ತುಂಬುವ ಕಾರ್ಯಕ್ರಮವನ್ನು ಭಾರತಿ ಶರಣಬಸಪ್ಪಗೌಡ ದರ್ಶನಪುರ ಉದ್ಘಾಟಿಸಿದರು. ಮಹಿಳಾ ಘಟಕದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷೆ ಮಂಜೂಳಾ ಗೂಳಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಮೋದಿ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪೂರ, ಬಿಜೆಪಿ ಯಾದಗಿರಿ ನಗರ ಘಟಕ ಅಧ್ಯಕ್ಷೆ ಕವಿತಾ ವಿನಯ್ ಪಾಟೀಲ್ ಇತರರು ಉಪಸ್ಥಿತರಿದ್ದರು. ಶರಣು ಬಿ.ಗದ್ದುಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಬಸ್ಸಯ್ಯ ಶರಣರು ಸಾನಿಧ್ಯವಹಿಸಿದ್ದರು. ನೂರಾರು ಮಹಿಳೆಯರು ಭಾಗವಹಿಸಿದ್ದರು.