ಜನರ ಹೃದಯಗಳಿಗೆ ಲಗ್ಗೆ ಹಾಕುವ ಶಕ್ತಿ ರಂಗ ಕಲೆಗಿದೆಃ ಸಾಗನೂರ
ಗಮನ ಸೆಳೆದ ಜಿಲ್ಲಾಮಟ್ಟದ ಕಾಲೇಜು ರಂಗೋತ್ಸವ
ಯಾದಗಿರಿಃ ಬೇರೆ ಮಾಧ್ಯಮಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಜನರ ಹೃದಯಗಳಿಗೆ ಲಗ್ಗೆ ಹಾಕುವ ಶಕ್ತಿ ರಂಗಕಲೆಗಿದೆ. ಅಲ್ಲದೆ ಸಹೃದಯಿಗಳಿಗೆ ತನ್ನೊಡನೆ ಕರೆದುಕೊಂಡು ಹೋಗುವ ಸ್ಫೂರ್ತಿಯೂ ಇದೆ ಎಂದು ಯಾದಗಿರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ, ರಂಗಾಯಣ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ, ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲೆಯೆಂಬುದು ಯಾವುದೇ ವರ್ಗದ ಆಸ್ತಿಯಲ್ಲ. ಕಲೆಗಳ ಎಲ್ಲ ನೆಲೆಗಳನ್ನು ಗೌರವಿಸಬೇಕಾಗುತ್ತದೆ. ಪ್ರಸ್ತುತ ದಿನಗಳಲ್ಲಿ ರಂಗಕಲೆ ಉಳಿಯುವಂತಾಗಲು ಓಣಿ ಗಲ್ಲಿಗಳ ಕಲೆಗಳು ಹಳ್ಳಿಗಳ ಹಾಡುಗಳು ಮುಂಚೂಣಿಗೆ ಬರಬೇಕು. ಅಂದಾಗ ಮಾತ್ರ ಜನ ಕಲೆ ನಾಡಿನ ಕಲೆಯಾಗುತ್ತದೆ. ಈ ದಿಸೆಯಲ್ಲಿ ಕಾಲೇಜು ರಂಗೋತ್ಸವ ಕಾರ್ಯಕ್ರಮದಿಂದ ಹೈದ್ರಾಬಾದ ಕರ್ನಾಟಕ ಪ್ರದೇಶದ ಯುವ ಸಮೂಹಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಂಗಕಲೆ ಜಾನಪದ ಕಲೆ ಉಳಿದು ಬೆಳೆಯಬೇಕು ಎಂಬುದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಹದುದ್ದೇಶವಾಗಿದೆ. ರಂಗೋತ್ಸವದಲ್ಲಿ ಪಾಲ್ಗೊಂಡು ನಾಟಕ, ಜಾನಪದದಲ್ಲಿ ಗೆದ್ದ ಕಲಾತಂಡಗಳಿಗೆ ಸೂಕ್ತ ಬಹುಮಾನ ನೀಡಿ ಮತ್ತಷ್ಟು ಪ್ರೇರಣೆ ನೀಡಲಾಗುತ್ತಿದೆ ಎಂದರು.
ನಾಟಕ ಅಕಾಡೆಮಿ ಸದಸ್ಯ ಸಂದೀಪ ಮಾತನಾಡಿ, ನಾಟಕ ಕಲೆ ಒಳ್ಳೆ ಮಾಧ್ಯಮವಾಗಲು ರಂಗಕಲೆಯನ್ನು ಪ್ರೋತ್ಸಾಹಿಸಬೇಕು, ಕನ್ನಡ ರಂಗಭೂಮಿಯ ಕ್ಷೇತ್ರ ನಾಟಕದಿಂದ ಮೌಲ್ಯಾಧಾರಿತವಾಗಿ ವಿಕಾಸವಾಗಬೇಕು ಎಂದರು. ನಾಟಕಕಾರ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತ ಎಲ್.ಬಿ.ಕೆ.ಆಲ್ದಾಳ ಮಾತನಾಡಿ, ಬದುಕಿನ ಮಧ್ಯ ಸೇತುವೆಯಾಗಿರುವ ರಂಗಕಲೆ ಅತ್ಯಂತ ಉತ್ಕೃಷ್ಟವಾಗಿದ್ದು ಅದರಿಂದ ಬರುವ ಸಂದೇಶಗಳು ಜೀವನಕ್ಕೆ ದಾರಿ ದೀಪವಾಗಿವೆ, ನಾಟಕ ಜಾನಪದ ಕಲೆ ಬದುಕಿಗೆ ಮಾರ್ಗದರ್ಶಿಯಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಫಕೀರೇಶ್ವರ ಮಠದ ಗುರುಪಾದ ಸ್ವಾಮಿ ಮಾತನಾಡಿ, ಹಲವಾರು ರಂಜನೀಯ ಮಾಧ್ಯಮದ ವೇಗ ನಡುವೆಯು ಕನ್ನಡ ಕಲೆ ಸಂಸ್ಕøತಿಯ ಭಾಗವಾದ ನಾಟಕ, ಸಂಗೀತ, ಜಾನಪದ ಮನಸ್ಸಿಗೆ ಮುದ ನೀಡುವಂಥ ಕಲೆಯಾಗಿದ್ದು, ಇಂಥ ಕಲೆ ಉಳಿಯುವಲ್ಲಿ ಸರ್ಕಾರದ ಜೊತೆಗೆ ಸಮಾಜ ಒಗ್ಗೂಡಿ ಕಾರ್ಯನಿರ್ವಹಿಸಬೇಕು.
ಎಲೆ ಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಬೇಕು, ಮೌಲ್ಯಯುಕ್ತ, ಗುಣಾತ್ಮಕ ನಾಟಕಗಳು ಜೀವನಕ್ಕೆ ಮೇಲ್ಪಂಕ್ತಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭೀ.ಗುಡಿ ಕೃಷಿ ಕಾಲೇಜಿನ ಡೀನ್ ಡಾ.ಸುರೇಶಪಾಟೀಲ, ಉಪನ್ಯಾಸಕ ಡಾ.ಅಬ್ದುಲ್ ಕರೀಂ, ಉತ್ತರ ಕರ್ನಾಟಕ ಕ.ರ.ವೇ ಅಧ್ಯಕ್ಷ ಶರಣು ಗದ್ದಿಗೆ ಮಾತನಾಡಿದರು. ರಂಗಾಯಣ ಜಿಲ್ಲಾ ಸಹ ಸಂಚಾಲಕ ರವಿಹಿರೇಮಠ ಉಪಸ್ಥಿತರಿದ್ದರು. ಪಂಚಾಕ್ಷರಯ್ಯಸ್ವಾಮಿ ನಿರೂಪಿಸಿದರು. ಜಯಶ್ರೀ ವಂದಿಸಿದರು.
ಸುರಪುರದ ಜನನಿ ಮಹಿಳಾ ಪದವಿಕಾಲೇಜು, ಭೀ.ಗುಡಿ ಕೃಷಿ ಕಾಲೇಜು, ವಿಶ್ವಜ್ಯೋತಿ ಪದವಿ ಕಾಲೇಜು, ಕಾಲೇಜು ಆಫ್ ಉಜ್ವಲ್ ಆರ್ಟ ಯಾದಗಿರಿ ತಂಡಗಳು ನಾಟಕ ಮತ್ತು ಜಾನಪದ ನೃತ್ಯ ಪ್ರದರ್ಶಿಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.