ಪ್ರಮುಖ ಸುದ್ದಿ

ತೋಟಗಾರಿಕೆ ಬೆಳೆ ನಷ್ಟದ ಜಂಟಿ ಸಮೀಕ್ಷೆಗೆ ಸಚಿವ ಮನಗೂಳಿ ಸೂಚನೆ

ಸಚಿವ ಮನಗೂಳಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿಃ 2018-19ನೇ ಸಾಲಿಗೆ ಅನಾವೃಷ್ಟಿಯಿಂದಾಗಿ ರಾಜ್ಯ ಸರ್ಕಾರ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು, ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ನಷ್ಟದ ಜಂಟಿ ಸಮೀಕ್ಷೆ ತಪಾಸಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತೋಟಗಾರಿಕೆ ಸಚಿವರಾದ ಎಮ್.ಸಿ.ಮನಗೂಳಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ತೋಟಗಾರಿಕೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲಿಸಿದ ನಂತರ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಒಟ್ಟಾರೆ 4.88 ಹೆಕ್ಟೇರುಗಳಲ್ಲಿ ಪಪ್ಪಾಯ ಮತ್ತು ಬಾಳೆ ಬೆಳೆಗಳು ಹಾನಿಯಾಗಿವೆ. ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ 18,000 ರೂ. ಮತ್ತು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ 6,500 ರೂ.ನಂತೆ ಜಿಲ್ಲಾಧಿಕಾರಿಗಳ ನೈಸರ್ಗಿಕ ವಿಪತ್ತು ಪರಿಹಾರ ವಿತರಿಸಲು ಈಗಾಗಲೇ ಜಂಟಿ ಸಮೀಕ್ಷೆ ಮುಗಿದಿದ್ದು, ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 2018-19ನೇ ಸಾಲಿನಲ್ಲಿ 648 ಲಕ್ಷ ರೂ. ಗುರಿ ನಿಗದಿಪಡಿಸಲಾಗಿದ್ದು, ಇಲ್ಲಿಯವರೆಗೆ 259.11 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. 128.50 ಲಕ್ಷ ರೂ. ವೆಚ್ಚ ಭರಿಸಲಾಗಿದ್ದು, 128.82 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 225.74 ಲಕ್ಷ ರೂ. ಗುರಿ ನಿಗದಿಯಾಗಿದ್ದು, 86 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 17.68 ಲಕ್ಷ ರೂ.ಗಳ ಸಾಧನೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 35.36 ಲಕ್ಷ ರೂ. ಗುರಿ ನಿಗದಿಯಾಗಿದ್ದು, 8.96 ಲಕ್ಷ ರೂ. ಅನುದಾನ ಇತ್ತೀಚಿಗೆ ಬಿಡುಗಡೆಯಾಗಿದೆ. 5.376 ಲಕ್ಷ ರೂ.ಗಳ ಸಾಧನೆಯಾಗಿರುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ 258.86 ಲಕ್ಷ ರೂ. ಗುರಿ ಇದ್ದು, 72.475 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 52.73 ಲಕ್ಷ ರೂ. ಸಾಧನೆಯಾಗಿದೆ. ಇನ್ನು ಕೃಷಿ ಭಾಗ್ಯ ಯೋಜನೆಯಡಿ 70 ರೂ. ಲಕ್ಷ ಗುರಿ ನಿಗದಿಯಾಗಿದ್ದು, 15.90 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಅವರು ವಿವರಿಸಿದರು.

ಇಸ್ರೇಲ್ ಮಾದರಿ ನೀರಾವರಿ ಕ್ರಮ: ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕ್ರಮಗಳನ್ನು ಅಳವಡಿಸಲು ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ನೀರಾವರಿ ಒದಗಿಸಲು 150 ಕೋಟಿ ರೂಪಾಯಿಗಳನ್ನು ಈ ಬಾರಿಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ನಿಗದಿಪಡಿಸಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯದಿಂದ ಕೃಷಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಇಸ್ರೇಲ್‍ಗೆ ಭೇಟಿ ನೀಡಿ, 8 ದಿನಗಳ ಕಾಲ ಅಧ್ಯಯನ ನಡೆಸಿದ್ದೇವೆ. ಆ ದೇಶದ ರೈತರು ಕಡಿಮೆ ಖರ್ಚಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆದು ಹೆಚ್ಚು ಆದಾಯ ಪಡೆಯುತ್ತಾರೆ. ಈ ಮಾದರಿಯನ್ನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ 6,558 ಹೆಕ್ಟೇರ್‍ನಲ್ಲಿ ತೋಟಗಾರಿಕಾ ಬೆಳೆ: ಜಿಲ್ಲೆಯಲ್ಲಿ ಒಟ್ಟು 6,558 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹಣ್ಣಿನ ಬೆಳೆಗಳನ್ನು 2,807 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 58,071 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ತರಕಾರಿ 2,634 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 45,626 ಮೆಟ್ರಿಕ್ ಟನ್ ಉತ್ಪಾದಿಸಲಾಗುತ್ತಿದೆ.

ಸಾಂಬಾರು ಬೆಳೆ 630 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 2,728 ಮೆಟ್ರಿಕ್ ಟನ್ ಉತ್ಪಾದನೆ ಇದೆ. ತೋಟದ ಬೆಳೆಗಳನ್ನು 327 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇದರಿಂದ 4,331 ಮೆಟ್ರಿಕ್ ಟನ್ ಉತ್ಪಾದನೆ ಇದೆ. ವಾಣಿಜ್ಯ ಪುಷ್ಪಗಳನ್ನು 160 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 1,490 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ ಎಂದು ಅವರು ವಿವರಿಸಿದರು.

ಕೃಷಿಯಲ್ಲಿ ಬರೀ ಆಹಾರ ಬೆಳೆಗಳನ್ನು ಬೆಳೆದರೆ ರೈತರ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ಇದರ ಜೊತೆಗೆ ಹಣ್ಣಿನ ಗಿಡಗಳನ್ನು ಬೆಳೆಯಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಸರೆಡ್ಡಿಗೌಡ ಮಾಲಿಪಾಟೀಲ್ ಅನಪೂರ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ತೋಟಗಾರಿಕೆ ಉಪ ನಿರ್ದೇಶಕ (ಜಿ.ಪಂ) ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ರಾಜ್ಯ ವಲಯ) ಬಸನಗೌಡ ಪಾಟೀಲ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಟಿ.ಆಂಜನೇಯ, ಶಶಿಕಾಂತ, ಭೀಮರಾವ್, ಸಹಾಯಕ ತೋಟಗಾರಿಕೆ ನಿರ್ದೇಶಕ ಸಮಿಯುದ್ದೀನ್, ಕೇಂದ್ರ ಕಚೇರಿಯ ಸಹಾಯಕರಾದ ಶಿವುಕುಮಾರ ಪಿ. ಅವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button