ಅಪಘಾತಃ ನಾಗರಿಕರ ಯುವ ವೇದಿಕೆಯಿಂದ ದಿಢೀರ ಪ್ರತಿಭಟನೆ
ಅಪಘಾತ, ಯುವಕರಿಂದ ದಿಡೀರ ಪ್ರತಿಭಟನೆ, ತಹಸೀಲ್ದಾರರಿಂದ ಭರವಸೆ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಕನ್ಯಾಕೋಳೂರ ಅಗಸಿ ಬಳಿ ಬುಧವಾರ ಸಂಜೆ ಬೈಕ್-ಟಾಟಾ ಏಸಿ ಗೂಡ್ಸ್ ವಾಹನ ನಡುವೆ ನಡೆದ ಅಪಘಾತ ಖಂಡಿಸಿ, ನಿತ್ಯ ಅಪಘಾತಗಳು ಹೆಚ್ಚಾಗುತ್ತಿದ್ದು, ಕೂಡಲೇ ರಸ್ತೆ ವಿಭಜಕ ಅಳವಡಿಸಬೇಕೆಂದು ಆಗ್ರಹಿಸಿ ಇಲ್ಲಿನ ನಾಗರಿಕರ ಯುವ ವೇದಿಕೆವತಿಯಿಂದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸೋಮಶೇಖರ ಅರಳಗುಂಡಗಿ ಹಾಗೂ ಸಿಪಿಐ ನಾಗರಾಜ ಅವರು ಪ್ರತಿಭಟನೆ ಹಿಂಪಡೆಯುವಂತೆ ಮತ್ತು ಕೂಡಲೇ ರಸ್ತೆ ವಿಭಜಕ ಹಾಕುವುದಾಗಿ ಭರವಸೆ ನೀಡಿದರು.
ಆದರೆ ಭರವಸೆಗೆ ಒಪ್ಪದ ಯುವಕರು ಕೆಲಹೊತ್ತು ಪಟ್ಟು ಹಿಡಿದರು. ಪ್ರಸ್ತುತ ಹಂಪ್ಸ್ ಹಾಕಲಾಗುತ್ತಿರುವುದು ಇದರಿಂದ ಯಾವುದೇ ಅನುಕೂಲವಾಗಲ್ಲ. ಕೂಡಲೇ ರಸ್ತೆ ವಿಭಜಕ ನಿರ್ಮಾಣ ಮಾಡಬೇಕು. ಈಗಾಗಲೇ ಸಾಕಷ್ಟು ಸಾವು ನೋವು ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ತಹಸೀಲ್ದಾರ ಸೋಮಶೇಖರ ಅವರು ಮಾತನಾಡಿ, ಕೂಡಲೇ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ರಸ್ತೆ ವಿಭಜಕ ನಿರ್ಮಾಣದ ಬಗ್ಗೆ ಗಮನಹರಿಸಲು ತಿಳಿಸಲಾಗುವುದು. ಕೂಡಲೇ ಕಾರ್ಯಕೈಗೆತ್ತಿಕೊಳ್ಳುವ ಭರವಸೆ ನೀಡಿದರು. ಆಗ ಯುವಕರು ಪ್ರತಿಭಟನೆಯಿಂದ ಹಿಂದೆ ಸರಿದ ಘಟನೆ ಜರುಗಿತು. ಅಲ್ಲದೆ ಕೂಡಲೇ ಕಾರ್ಯಕೈಗೊಳ್ಳದಿದ್ದರೆ, ಮತ್ತೆ ನಾಗರಿಕ ಯುವ ವೇದಿಕೆ ರಸ್ತೆ ತಡೆ ನಡೆಸಲಿದೆ ಎಂದು ಎಚ್ಚರಿಸಿದರು. ನಗರದ ಯುವಕರು ನಾಗರಿಕರು ಭಾಗವಹಿಸಿದ್ದರು. ಸಿಪಿಐ ನಾಗರಾಜ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.