ಕಥೆ

ವ್ಯಕ್ತಿಗೆ ಸ್ಥಾನ, ಮಾನ, ವೈಭವ ಮುಖ್ಯನಾ.? ಮತ್ತೇನು.?

ಜಮೀನ್ದಾರ ಹಾಗೂ ಸಾಮಾನ್ಯ ನೌಕರನಿಗೆ ಅದಲು ‌ಬದಲು ಜವಾಬ್ದಾರಿ ನೀಡಿದ ಯಮ ಧರ್ಮ

ಈ ಜಗತ್ತಿನಲ್ಲಿ ಜನಿಸಿದ ಮಾನವನು ಅನೇಕ ತರದ ವೃತ್ತಿ, ಕಸುಬು, ಉದ್ಯೋಗಗಳನ್ನು ಮಾಡುತ್ತಾನೆ.

ಇಂತಹ ಉದ್ಯೋಗಗಳ ಪೈಕಿ ಕೆಲವು ಮೇಲ್ಮಟ್ಟದವು ಎಂದು ಗೌರವ ಪಡೆದರೆ, ಕೆಲವು ಕೆಳಮಟ್ಟದವು- ಎಂಬ ಕಾರಣಕ್ಕಾಗಿ ಗೌರವವನ್ನು ಪಡೆಯುವುದಿಲ್ಲ. ಆದರೆ ಮಾನವನು ಮಾಡುವ ಕಾರ್ಯಗಳಲ್ಲಿ ಮೇಲು-ಕೀಳು ಎಂಬ ಭಾವವಿಲ್ಲದೆ ಸರ್ವರೂ ವೃತ್ತಿ ಗೌರವದಿಂದ ತಮ್ಮ-ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ನೀಡುವ ಹೃದಯ ಸ್ಪರ್ಶಿ ಪ್ರಸಂಗವು ಇಲ್ಲಿದೆ.

ಒಂದು ಹಳ್ಳಿಯಲ್ಲಿ ಒಬ್ಬ ಜಮೀನ್ದಾರ ಮತ್ತು ಅವನ ನೌಕರ ಇಬ್ಬರೂ ಜತೆ-ಜತೆಯಾಗಿಯೇ ತೀರಿಕೊಂಡರು.

ಇಬ್ಬರೂ ಯಮಲೋಕಕ್ಕೆ ತಲಪಿದಾಗ ಯಮ ಧರ್ಮರಾಜನು ಜಮೀನ್ದಾರನೊಡನೆ, ನಾಳೆಯಿಂದ ನೀವು ನೌಕರನ ಕೆಲಸ ಮಾಡಬೇಕು. ನೌಕರ ಕೆಲಸವಿಲ್ಲದೆ ಆರಾಮವಾಗಿರಲಿ ಎಂದಾಗ ಒಪ್ಪಿಕೊಂಡರೂ, ಜಮೀನ್ದಾರನಿಗೆ ತಲೆ ಬಿಸಿಯಾಯಿತು.

ಆತ ”ಹೇ ಧರ್ಮರಾಜ, ನನಗೇಕೆ ಇಂಥ ಶಿಕ್ಷೆ? ನಾನು ಪ್ರತಿನಿತ್ಯ ದೇವಪೂಜೆ ಮೊದಲಾದ ಕರ್ತವ್ಯಗಳನ್ನು ಮಾಡುತ್ತಿದ್ದೇನೆ,” ಎಂದು ಹೇಳಿದ.

ಯಮ ಧರ್ಮರಾಜನು ನೌಕರನೊಡನೆ, ”ನೀನೇನು ಮಾಡುತ್ತಿದ್ದೀಯಾ?,”ಎಂದು ಕೇಳಿದಾಗ ಆತ, ”ಸ್ವಾಮಿ, ನಾನೋ ಬಡ ನೌಕರ.

ದಿನವಿಡೀ ಧಣಿಗಳ ಗದ್ದೆಯಲ್ಲಿ ದುಡಿದು, ದೊರೆತ ಮಜೂರಿಯಲ್ಲಿ ಬದುಕುತ್ತಿದ್ದೆ. ಪುರುಸೊತ್ತು ದೊರೆತಾಗ ದೇವರ ಸ್ಮರಣೆ ಮಾಡಿದೆ. ಸ್ವಂತಕ್ಕೆ ಏನೂ ಬೇಡಲಿಲ್ಲ. ಬಡತನದಿಂದಾಗಿ ಆರತಿ ಮಾಡಲಿಲ್ಲ. ಮನೆಯಲ್ಲಿ ಎಣ್ಣೆಯಿದ್ದಾಗ ದೀಪವುರಿಸಿ ದಾರಿಹೋಕರಿಗೆ ಬೆಳಕು ನೀಡುತ್ತೇನೆ,” ಎಂದು ಹೇಳಿದ.

ಆಗ ಧರ್ಮರಾಜನು ಜಮೀನ್ದಾರನೊಡನೆ, ”ಈ ನೌಕರನ ಕರ್ಮ ಪ್ರಜ್ಞೆ ಗಮನಿಸಿದೆಯೋ? ಭಗವಂತ ಧನ ಸಂಪತ್ತಿನಿಂದಲ್ಲ, ಪ್ರಾಮಾಣಿಕ ಕರ್ಮ ನಿಷ್ಠೆಯನ್ನು ಮೆಚ್ಚುತ್ತಾನೆ. ಅವನ ಕರ್ಮ ನಿಷ್ಠೆಯನ್ನು ಕಲಿಯಲೆಂದೇ ನಿನ್ನನ್ನು ನೌಕರನಾಗಿ ಮಾಡಿದೆ,” ಎಂದು ಹೇಳಿದ. ಇದನ್ನು ಕೇಳಿದ ಜಮೀನ್ದಾರನ ವಿವೇಕದ ಕಂಗಳು ತೆರೆದುಕೊಂಡವು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸ್ಥಾನ, ಮಾನ, ವೈಭವಗಳು ಮುಖ್ಯವಲ್ಲ. ಆತ ಮಾಡುವ ಕರ್ಮದ ಫಲ ಮುಖ್ಯ. ಒಬ್ಬ ವ್ಯಕ್ತಿಯು ಮಾಡುವ ಕರ್ಮಗಳಿಂದಾಗಿ ಯಾರ ಮೇಲೆ ಎಂಥ ಫಲ ಬೀರುತ್ತದೆ? ಎಂಬುದು ಬಹು ಮುಖ್ಯವಾಗಿರುತ್ತದೆ. ಇದನ್ನು ಅರ್ಥಮಾಡಿಕೊಂಡಾಗ ನಮ್ಮ ಜೀವನ ಸಾರ್ಥಕ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button