ಬಸ್ ಪಲ್ಟಿಯಾಗಲು ಕಾರಣವೇನು..? ಬಸ್ ಕಂಡಿಷನ್ ಹೇಗಿತ್ತು.?
ಬಸ್ ಪಲ್ಟಿ 3 ಸಾವು 20 ಮಂದಿಗೆ ಗಾಯ ಡಿಟೇಲ್ ವರದಿ
ಯಾದಗಿರಿ, ಶಹಾಪುರಃ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಬರುವ ಏವೂರು ಗ್ರಾಮ ಸಮೀಪ ಸಾರಿಗೆ ಬಸ್ವೊಂದರ ಪಾಟಾ ಮುರಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಹಿನ್ನೆಲೆ ಚಾಲಕ ದಾವಲಸಾಬ ಸೇರಿದಂತೆ ಮೂವರು ಸಾವನ್ನಪ್ಪಿದ್ದು ಸುಮಾರು 20 ಜನ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಶಹಾಪುರ ಡಿಪೋ ಬಸ್ ಇದಾಗಿದ್ದು, ಶಹಾಪುರದಿಂದ ಕೆಂಭಾವಿ ಗ್ರಾಮಕ್ಕೆ ತೆರಳುತ್ತಿರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಚಾಲಕ ದಾವಲಸಾಬ ಸಾ.ಮುದನೂರ (36) ಪರಸನಹಳ್ಳಿಯ ಪ್ರಯಾಣಕಿ ಪದ್ದಮ್ಮ(32) ಮತ್ತು ಯಾಳಗಿ ಗ್ರಾಮದ ಕೆಂಚಪ್ಪ ಪೂಜಾರಿ (65) ಎಂಬುವರೇ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಅಶೋಕ ಬೋವಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಕಂಡಿಷನ್ ಹೇಗಿತ್ತು..?
ಶಹಾಪುರ ಡಿಪೋ ಬಸ್ ಇದಾಗಿದ್ದು, ಬಸ್ ಗ್ರಾಮೀಣ ಭಾಗಕ್ಕೆ ಮಾತ್ರ ಸಂಚಾರವಿತ್ತು ಎನ್ನಲಾಗಿದೆ. ಬಸ್ ಕಂಡಿಷನ್ ಇಲ್ಲದ ಪರಿಣಾಮವೇ ಅಪಘಾತಕ್ಕೆ ಕಾರಣ ಎಂಬ ಸುದ್ದಿ ಎಲ್ಲಡೆ ಹಬ್ಬಿದೆ. ಈ ಬಸ್ ನ ಪಾಟಾ ಮುರಿದ ಪರಿಣಾಮ ನಾಲ್ಕು ಚಕ್ರಗಳು ಹಿಂದಕ್ಕೆ ಸರಿದು ಮುಂಭಾಗ ಏಕಾಏಕಿ ನೆಲಕ್ಕೆ ಹಿರಿದುಕೊಂಡಿದ್ದು, ಚಾಲಕ ಸೇರಿದಂತೆ ಪ್ರಯಾಣಿಕರು ಮುಂದಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅತಿ ಪೆಟ್ಟು ಬಿದ್ದ ಹಿನ್ನೆಲೆ ಚಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿನಯವಾಣಿ ಗೆ ತಿಳಿಸಿದ್ದಾರೆ.
ಬಸ್ ಸಂಚಾರಕ್ಕೆ ಕಂಡಿಷನ್ ಕುರಿತು ಆರ್ ಟಿಓ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಚಾರಕ್ಕೆ ಅವಕಾಶ ಕುರಿತು ಪತ್ರ ನೀಡಬೇಕು. ಆಗಲೇ ಇಂತಹ ಬಸ್ ಗಳು ರಸ್ತೆಗಿಳಿಯಲು ಸಾಧ್ಯವಿದೆ.
ಸಾರಿಗೆ ಇಲಾಖೆ ನಿಯಮನುಸಾರ ಬಸ್ ಇಂತಿಷ್ಟು ಕೀ.ಮೀ. ಓಡಿದ ನಂತರ ಅದನ್ನು ಸ್ಕ್ರಾಪ್ ಎಂದು ಗುರುತಿಸಿ ಸಂಚಾರಕ್ಕೆ ಬಳಕೆ ಮಾಡುವದಿಲ್ಲ.
ಆದರೆ ಶಹಾಪುರ ಡಿಪೋ ಸೇರಿದಂತೆ ಹಲವಡೆ ಸ್ಕ್ರ್ಯಾಪ್ ಆದ ಬಸ್ ಗಳನ್ನು ದುರಸ್ತಿಗೊಳಿಸಿ ಬಳಸಲಾಗುತ್ತಿದೆ ಎಂಬ ಅಪವಾದ ಕೇಳಿ ಬರುತ್ತಿದೆ. ಅದರಂತೆ ಶಹಾಪುರ ದಿಂದ ಕೆಂಭಾವಿಗಗೆ ತೆರಳುತ್ತಿರುವ ಬಸ್ ಕಂಡಿಷನ್ ಹೇಗಿತ್ತು ಎಂಬುದು ಪ್ರಸ್ತುತವಾಗಿ ಗಮನಾರ್ಹ ವಿಷಯವಾಗಿದೆ.
ಈ ಕುರಿತು ಮೇಲಧಿಕಾರಿಗಳು ಕೂಡಲೇ ತನಿಖೆ ನಡೆಸುವ ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.