ಉಪಕಾರಕ್ಕೆ..ಪ್ರತಿ ಉಪಕಾರವಿರಲಿ..ಅಪಕಾರ ಮಾಡದಿರಿ
ಕೃತಜ್ಞ ನವಿಲು
ಒಂದು ಊರಿನಲ್ಲಿ ಇಬ್ಬರು ಗಂಡಾ/ಹೆಂಡತಿ ಇದ್ದರು. ಅವರದೊಂದು ಸುಂದರವಾದ ತೋಟ. ಆ ತೋಟದಲ್ಲಿ ಅವರು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆದೊಂದು ಮುದ್ದಾದ ಮಗು.
ಅವರದೊಂದು ಚಿಕ್ಕ ಕುಟುಂಬ. ಅವರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ, ಆಕಳು, ಎಮ್ಮೆ ಇನ್ನಿತರೆ ಸಾಕು ಪ್ರಾಣಿಗಳನ್ನು ಸಾಕಿದ್ದರು. ಇದರಿಂದಾಗಿ ಮಗುವಿಗೆ ಪ್ರಾಣಿ, ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ. ಅವಳು ಆ ಪ್ರಾಣಿ, ಪಕ್ಷಿಗಳೊಂದಿಗೆ ಪ್ರೀತಿಯಿಂದ ಆಟವಾಡುತ್ತಿದ್ದಳು. ಮಗಳು ದೊಡ್ಡವಳಾಗಿ ಶಾಲೆಗೆ ಹೋಗಲಾರಂಭಿಸಿದಳು.
ಒಂದು ದಿನ ನವಿಲೊಂದು ಯಾವುದೋ ಒಂದು ಕಾಡಿನ ಬೇಟೆಗಾರನಿಂದ ತಪ್ಪಿಸಿಕೊಂಡು ಮೈಮೇಲೆ ರಕ್ತ ಹರಿಸಿಕೊಂಡು ನಡುಗುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಮಗಳು ಶಾಲೆಯಿಂದ ಮನೆಗೆ ಮರಳುತ್ತಿರುವಾಗ ಇದನ್ನು ನೋಡಿದಳು. ಆಗ ಅವಳಿಗೆ ಅದರ ಮೇಲೆ ಕರುಣೆ ಉಂಟಾಗಿ ಅದನ್ನು ಹಿಡಿದುಕೊಂಡು ತನ್ನ ಮನೆಗೆ ತಂದಳು.
ಅವಳ ಅಮ್ಮ ಅದನ್ನು ನೋಡಿ “ಒಳ್ಳೆಯದನ್ನೇ ಮಾಡಿರುವೆ ಮಗು. ಇಲ್ಲವಾದರೆ ಈ ಪಕ್ಷಿಯು ಸತ್ತು ಹೋಗುತ್ತಿತ್ತು” ಎಂದಳು.
ಅವರು ಗಾಯಗೊಂಡ ನವಿಲಿಗೆ ಔಷಧಿ ಹಚ್ಚಬೇಕೆಂದು ಸೊಪ್ಪನ್ನು ತಂದು ಕುಟ್ಟಿ ಅದರ ಮೇಲೆ ಲೋಪ ಮಾಡಿ ಆ ನವಿಲಿನ ಗಾಯಕ್ಕೆ ಸವರಿದಳು. ಸಾಯಂಕಾಲ ಅದಕ್ಕೆ ತಿನ್ನಲು ತುಪ್ಪದ ಅನ್ನವನ್ನು ಕೊಟ್ಟಳು. ಅದನ್ನು ತಿಂದ ನವಿಲು ಆ ರಾತ್ರಿ ವಿಶ್ರಾಂತಿ ಪಡೆಯಿತು..
ಒಂದೆರಡು ದಿನಗಳ ಕಾಲ ಅವರ ಮನೆಯಲ್ಲಿ ಇಟ್ಟುಕೊಂಡು. ಅದು ಗಾಯವನ್ನು ಚೇತರಿಸಿಕೊಂಡು ಆದಮೇಲೆ ಅದನ್ನು ಎತ್ತಿಕೊಂಡು ಹೋಗಿ ನವಿಲಿನ ಗುಂಪಿನಲ್ಲಿ ಅದನ್ನು ಬಿಟ್ಟು ಬಂದಳು. ಆಗ ಆ ನವಿಲು ಬಹಳ ಹೊತ್ತು ಪ್ರೀತಿಯಿಂದ ಅವಳನ್ನೇ ನೋಡುತ್ತಿತ್ತು.
ಕೆಲವು ದಿನಗಳ ನಂತರ ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಮಗಳು ಅಂದು ಹಾವೊಂದನ್ನು ಕಾಣದೆ ಅದನ್ನು ತುಳಿದುಬಿಟ್ಟಳು. ಆಗ ಅವಳು ಗಾಬರಿಯಿಂದ ಓಡತೊಡಗಿದಳು. ಆ ಹಾವು ಸಹ ಅವಳನ್ನು ಹಿಂಬಾಲಿಸ ತೊಡಗಿತು.
ಆಗ ಅದೇ ಸಮಯಕ್ಕೆ ಇವಳಿಂದ ಉಪಕಾರ ಪಡೆದ ನವಿಲು ಈ ದೃಶ್ಯವನ್ನು ನೋಡಿತು. ತನ್ನನ್ನು ಕಾಪಾಡಿದ ಇವಳಿಗೆ ಇಂತಹ ಸಂಕಟವೂ ಬಂದಿದೆಯಲ್ಲ. ಅವಳು ನನಗೆ ಮಾಡಿದ ಈ ಉಪಕಾರವನ್ನು ನಾನು ಅವರಿಗೆ ಪ್ರತಿಉಪಕಾರವಾಗಿ ತೀರಿಸಬೇಕೆಂದು ನವಿಲು ಸರ್ರನೆ ಅಲ್ಲಿಗೆ ಬಂದಿತು.
ಆ ಹಾವಿನ ಕಣ್ಣುಗಳನ್ನು ತನ್ನ ಕೊಕ್ಕಿನಿಂದ ಕುಕ್ಕಿತು. ಇದಾದ ನಂತರ ಅವಳನ್ನೇ ನೋಡುತ್ತ ನಿಂತಿಕೊಂಡಿತು. ಅವಳು ನವಿಲನ್ನು ಅಪ್ಪಿಕೊಂಡು ಮುದ್ದಾಡಿದಳು. ನಂತರ ನವಿಲು ಹಾರಿ ಹೋಗಿ ತನ್ನ ಬಳಗವನ್ನು ಸೇರಿಕೊಂಡಿತು.
ನೀತಿ :– ಉಪಕಾರ ಮಾಡಿದವರಿಗೆ ಪ್ರತಿ ಉಪಕಾರ ಮಾಡಬೇಕು. ಮನುಷ್ಯರಾದ ನಾವು ಒಬ್ಬರು ಮಾಡಿದ ಉಪಕಾರವನ್ನು ಬೇಗ ಮರೆತು ಬಿಡುತ್ತೇವೆ. ಆದರೆ ಮೂಕಗಳಾದ ಪ್ರಾಣಿ, ಪಕ್ಷಿಗಳು ನಾವು ಮಾಡಿದ ಉಪಕಾರವನ್ನು ನೆನಪಿನಲ್ಲಿಟ್ಟುಕೊಂಡು ನಮಗೆ ಪ್ರತಿಉಪಕಾರವಾಗಿ ನಮಗೆ ಸಹಾಯ ಮಾಡುತ್ತವೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882