ಪ್ರಮುಖ ಸುದ್ದಿ

ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ಖಂಡಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಪ್ರಾಂತ ರೈತ ಸಂಘ ಮನವಿ

yadgiri, ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಮೇರೆಗೆ ಇಲ್ಲಿನ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೇಗುಂದಿ, ಕೇಂದ್ರದ ಕೃಷಿ ಮಸೂದೆ ರೈತರ ಪಾಲಿಗೆ ಕಂಟಕವಾಗಿವೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೃಷಿ ಕಾಯಕದಲ್ಲೂ ಕಾರ್ಪೋರೇಟ್ ಸಂಸ್ಥೆಗಳಿಗೆ ಆಹ್ವಾನಿಸುತ್ತಿದೆ. ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಬೆನ್ನೆಲುಬಾಗಿದ್ದ ರೈತ ಸಮುದಾಯದ ಬೆನ್ನೆಲಬನ್ನು ಮುರಿಯಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು, ದೇಶದಲ್ಲಿ ಶೇ.70 ರಷ್ಟು ಕೃಷಿಕರಿದ್ದು, ಇಂತಹ ಅಸಮಂಜಸ ತಿದ್ದುಪಡಿ ಕಾಯ್ದೆಗಳಿಂದ ಕೃಷಿವಲಯವನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ ಎಂದು ದೂರಿದರು. ಕೂಡಲೇ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ರೈತ ಸಮುದಾಯ ರೊಚ್ಚಿಗೇಳಲಿದೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತಾಲೂಕು ಆಡಳಿತ ಕೂಡಲೇ ಪರಿಹಾರ ಕಲ್ಪಿಸಬೇಕು. ತಾಲೂಕಿನ ತಿಪ್ಪನಳ್ಳಿ ಗ್ರಾಮ ದಲಿತ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ರುದ್ರಭೂಮಿ ಮಂಜೂರ ಮಾಡಬೇಕು. ತಿಪ್ಪನಳ್ಳಿ ಗ್ರಾಮ ರಸ್ತೆ ಮತ್ತು ಸೇತುವೆ ಅಭದ್ರಗೊಂಡಿದ್ದು, ಕೂಡಲೇ ದುರಸ್ತಿಗೊಳಿಸುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಅದೇ ರೀತಿ ಬಾಣತಿಹಾಳ ಮತ್ತು ವನದುರ್ಗ ಗ್ರಾಮಗಳಲ್ಲಿಯೂ ದಲಿತ ಸಮುದಾಯಕ್ಕೆ ರುದ್ರಭೂಮಿಗೆ ಜಾಗ ಒದಗಿಸಬೇಕು.

ತಾಲೂಕಿನ ಇಬ್ರಾಹಿಂಪುರ ಗ್ರಾಮ ಆತ್ಮಹತ್ಯೆ ಮಾಡಿಕೊಂಡ ರೈತ ಮೌನೇಶ ಸಾಬಯ್ಯ ಈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸಬೇಕು. ಶೆಟ್ಟಿಕೇರಾ ಗ್ರಾಮದ ಆಶ್ರಯ ಕಾಲೊನಿಯ ಸವೇ ನಂಬರ 128 ರಲ್ಲಿ ಶಾಲಾ ಕಟ್ಟಡಕ್ಕೆ 1 ಎಕರೆ 19 ಗುಂಟೆ ಹೊರತುಪಡಿಸಿದ ಜಾಗದಲ್ಲಿ ಕಳೆದ 20 ವರ್ಷದ ದಲಿತ ಕುಟುಂಬಗಳು ಗುಡಿಸಲು ಹಾಕಿಕೊಂಡು ಬದುಕುತ್ತಿವೆ. ಅವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಾಗ ಮಂಜೂರುಗೊಳಿಸಬೇಕು ಅಲ್ಲದೆ ನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಅಂಗಡಿ ಮಾಲೀಕರು ಬಾಡಿಗೆ ಪಡೆಯುತ್ತಿದ್ದು, ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ವನದುರ್ಗದ ದಲಿತ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಬೇಕು. ಇಲ್ಲಿನ ದೇವಿನ ನಗರದ 14 ಕುಟುಂಬಗಳಿಗೆ ಆಶ್ರಯ ಮನೆ ಕಲ್ಪಿಸಬೇಕು ಸೇರಿದಂತೆ 2019-20 ರಲ್ಲಿ ಅತಿವೃಷ್ಟಿಯಿಂದ ಹಾಳಾದ ತೋಟಗಾರಿಕೆ ಬೆಳೆಗಾರರಿಗೆ ನೈಸರ್ಗಿಕ ವಿಕೋಪದಡಿ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ರೈತ ಹಿರಿಯ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಎಸ್.ಎಂ.ಸಾಗರ ಮಾತನಾಡಿದರು.

ನಗರಸಭೆಯಿಂದ ತಹಸೀಲ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ ಕಚೇರಿ ತಲುಪಿ ಬೇಡಿಕೆ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೂಲಿಕಾರರ ಸಂಘದ ಕಾರ್ಯದರ್ಶಿ ನಿಂಗಣ್ಣ ನಾಟೇಕಾರ, ಅಂಬಲಯ್ಯ ಬೇವಿನಕಟ್ಟಿ, ಹೊನ್ನಪ್ಪ ಮಾನ್ಪಡೆ, ದೇವಿಂದ್ರಪ್ಪಗೌಡ ಪೋ.ಪಾಟೀಲ್, ಮಲಕಣ್ಣ ಚಿಂತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button