ಅಪಘಾತ ತಡೆಗೆ ರಸ್ತೆ ನಿಯಮ ಪಾಲಿಸಿ-ಎಸ್.ಪಿ.ಮೂರ್ತಿ
ಉಚಿತ ಚಾಲನಾ ತರಬೇತಿಗೆ ಚಾಲನೆ
ಯಾದಗಿರಿ, ಶಹಾಪುರಃ ಇತ್ತೀಚೆಗೆ ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಪ್ರತಿ ದಿನ ಲಕ್ಷಾಂತರ ವಾಹನಗಳು ರಸ್ತೆಗಳಲ್ಲಿ ಓಡಾಡುತ್ತಿವೆ. ವಾಹನ ಚಾಲನೆಯ ಪರವಾನಿಗೆ ಪಡೆಯದೇ ಹಾಗೇ ವಾಹನ ಚಾಲನೆಯಲ್ಲಿ ತೊಡಗಿಸಿಕೊಳ್ಳುವದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಿತ್ಯ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಯೂರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ(ಲಿ) ಗೋಗಿ ಘಟಕದ ವ್ಯವಸ್ಥಾಪಕ ಎಸ್.ಪಿ.ಮೂರ್ತಿ ತಿಳಿಸಿದರು.
ತಾಲೂಕಿನಿ ಗೋಗಿ ಗ್ರಾಮದಲ್ಲಿ ನಡೆಯುತ್ತಿರುವ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ(ಲಿ) ಗೋಗಿ ಸಂಸ್ಕರಣ ಘಟಕದವತಿಯಿಂದ ಲಘು ಮೋಟಾರು ವಾಹನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಾಲನೆಯ ಅರಿವು ಅರಿತುಕೊಳ್ಳದೆ ಜನರು ವಾಹನ ಚಾಲನೆಯಲ್ಲಿ ತೊಡಗಿಸಿಕೊಳ್ಳುವದರಿಂದ ನೂರಾರು ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ನಿತ್ಯ ನೂರಾರು ಜನರು ಮೃತಪಡುತ್ತಿದ್ದಾರೆ. ಈ ತರಬೇತಿ ಕಾರ್ಯಕ್ರಮದಲ್ಲಿ ಒಂದು ತಿಂಗಳು ಸಮರ್ಪಕ ವಾಹನ ಚಾಲನೆಯ ತರಬೇತಿ ಪಡೆದುಕೊಂಡಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ. ಯೂರೇನಿಯಂ ಕಾರ್ಪೋರೇಷನ್ ವತಿಯಿಂದ ಉಚಿತ ತರಬೇತಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.
ಕಾರಣ ವಾಹನ ಚಾಲನೆ ಪರವಾನಿಗೆ ಪಡೆಯದವರು, ಸೂಕ್ತ ತರಬೇತಿ ಪಡೆದುಕೊಂಡು ಪರವಾನಿಗೆ ಪಡೆಯಬೇಕು. ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಬೇಕು. ರೈತರು, ನಾಗರಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಯೂರೇನಿಯಂ ಕಾರ್ಪೋರೇಷನ್ ಆರ್ಥಿಕ ಅಭಿವೃದ್ದಿ ಯೋಜನಡಿಯಲ್ಲಿ ಒಟ್ಟು 25 ಜನ ಸ್ಥಳೀಯರಿಗೆ ಉಚಿತವಾಗಿ ವಾಹನ ಚಾಲನೆ ತರಬೇತಿಯನ್ನು ನೀಡಲು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯುವಕರಿಗೆ ವಾಹನ ಚಾಲನೆ ತರಬೇತಿ ನೀಡಿ ಪರವಾನಿಗೆ ಕೊಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಗರನಾಡು ಡ್ರೈವಿಂಗ್ ಸ್ಕೂಲ್ನ ಯಲ್ಲಪ್ಪ ದೊಡ್ಡಮನಿ, ಮುಖಂಡರಾದ ಬಸವರಾಜ ಸಗರ, ದೇವಿಂದ್ರಪ್ಪಗೌಡ ಗೋನಾಲ್, ಚಾಂದಪಾಷಾ ಸಾಹು ಸೇರಿದಂತೆ ಇತರರು ಇದ್ದರು. ರಾಘವೇಂದ್ರ ಗೋಗಿ ಸ್ವಾಗತಿಸಿದರು. ರಾಘವೇಂದ್ರ ಸುಗಂಧಿ ನಿರೂಪಿಸಿ ವಂದಿಸಿದರು.